ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಈಗ ಉತ್ತುಂಗಕ್ಕೇರಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್ನ ಪ್ರಭಾವಿ ಗುಪ್ತಚರ ಸಚಿವ ಮತ್ತು ಸೇನಾ ವಕ್ತಾರರು ಸೇರಿದಂತೆ ಹಲವು ಉನ್ನತ ಮಟ್ಟದ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆ (IDF) ಮತ್ತು ಇರಾನ್ನ ಅಧಿಕೃತ ಮಾಧ್ಯಮ ‘ಪ್ರೆಸ್ ಟಿವಿ’ ಈ ದಾಳಿಯ ಭೀಕರತೆಯನ್ನು ಖಚಿತಪಡಿಸಿವೆ. ಈ ಕಾರ್ಯಾಚರಣೆಯಲ್ಲಿ ಹತರಾದ ಪ್ರಮುಖ ವ್ಯಕ್ತಿಗಳ ವಿವರ ನೋಡುವುದಾದರೆ,
ಎಸ್ಮಾಯಿಲ್ ಖತೀಬ್ (ಗುಪ್ತಚರ ಸಚಿವ): ಇರಾನ್ನ ಆಂತರಿಕ ಭದ್ರತೆಯ ಆಧಾರಸ್ತಂಭವಾಗಿದ್ದ ಖತೀಬ್ ಅವರನ್ನು ಟೆಹ್ರಾನ್ನಲ್ಲಿ ಗುರಿ ಮಾಡಲಾಗಿತ್ತು. ಇಸ್ರೇಲ್ ಮತ್ತು ಅಮೆರಿಕ ವಿರುದ್ಧದ ಜಾಗತಿಕ ಭಯೋತ್ಪಾದಕ ಚಟುವಟಿಕೆಗಳ ಸಂಚುಗಾರ ಎಂಬ ಆರೋಪ ಇವರ ಮೇಲಿತ್ತು.
ಬ್ರಿಗೇಡಿಯರ್ ಜನರಲ್ ಅಲಿ ಮೊಹಮ್ಮದ್ ನೈನಿ: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಪ್ರಭಾವಿ ವಕ್ತಾರರಾಗಿದ್ದ ಇವರು, ವೈಮಾನಿಕ ದಾಳಿಗೆ ಬಲಿಯಾಗಿದ್ದಾರೆ.
ಅಲಿ ಲಾರಿಜಾನಿ (ಭದ್ರತಾ ಮುಖ್ಯಸ್ಥ): ಮಾಜಿ ಸುಪ್ರೀಂ ಲೀಡರ್ ಖಮೇನಿ ಅವರ ಅತ್ಯಾಪ್ತರಾಗಿದ್ದ ಇವರು ಸೋಮವಾರ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಘೋಲಮೆಜಾ ಸುಲೇಮಾನಿ: ಇರಾನ್ನ ಪ್ರಬಲ ‘ಬಸಿಜ್’ ಅರೆಸೇನಾ ಪಡೆಯ ಮುಖ್ಯಸ್ಥರಾಗಿದ್ದ ಇವರು ಮಂಗಳವಾರ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ದಾಳಿಗೆ ಕಾರಣವೇನು ?
ಕೊಲ್ಲಲ್ಪಟ್ಟ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಅವರು ಕೇವಲ ಇರಾನ್ನ ಅಧಿಕಾರಿಯಾಗಿರದೆ, 2022-23ರ ‘ಮಹಾ ಅಮಿನಿ’ ಪ್ರತಿಭಟನೆಯ ವೇಳೆ ಸಾವಿರಾರು ಪ್ರತಿಭಟನಾಕಾರರ ಹತ್ಯೆ ಮತ್ತು ಬಂಧನಕ್ಕೆ ಕಾರಣರಾಗಿದ್ದರು ಎಂದು ಇಸ್ರೇಲ್ ಆರೋಪಿಸಿದೆ. ಅಲ್ಲದೆ, ಜಗತ್ತಿನಾದ್ಯಂತ ಇಸ್ರೇಲಿಗಳು ಮತ್ತು ಅಮೆರಿಕನ್ನರ ಮೇಲೆ ದಾಳಿ ನಡೆಸಲು ಇವರು ಸ್ಕೆಚ್ ಹಾಕುತ್ತಿದ್ದರು ಎಂದು ಐಡಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಘಟನೆಯನ್ನು ಇರಾನ್ ಅಧ್ಯಕ್ಷ ಪೆಜೆಶ್ಚಿಯಾನ್ ಅವರು ತೀವ್ರವಾಗಿ ಖಂಡಿಸಿದ್ದು, ಇದನ್ನು ಹೇಡಿತನದ ಕೃತ್ಯ ಎಂದು ಕರೆದಿದ್ದಾರೆ. ನಮ್ಮ ನಾಯಕರ ಬಲಿದಾನಕ್ಕೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ನಿ ಮಾತನಾಡಿ, ಒಬ್ಬ ವ್ಯಕ್ತಿಯ ಅನುಪಸ್ಥಿತಿಯಿಂದ ಇರಾನ್ ವ್ಯವಸ್ಥೆ ಕುಸಿಯುವುದಿಲ್ಲ. ನಮ್ಮ ರಾಜಕೀಯ ಮತ್ತು ಆರ್ಥಿಕ ಮೂಲಸೌಕರ್ಯವು ಅತ್ಯಂತ ಸದೃಢವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 28ರಂದು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ನಿಧನರಾದ ನಂತರದ ಕಳೆದ 20 ದಿನಗಳಲ್ಲಿ ಇರಾನ್ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿ ಇದಾಗಿದೆ. ನಾಯಕತ್ವದ ಶೂನ್ಯತೆಯನ್ನು ಬಳಸಿಕೊಂಡಿರುವ ಅಮೆರಿಕ ಮತ್ತು ಇಸ್ರೇಲ್, ಇರಾನ್ನ ಮಿಲಿಟರಿ ಶಕ್ತಿಯನ್ನು ಕುಗ್ಗಿಸಲು ಸರಣಿ ದಾಳಿಗಳನ್ನು ನಡೆಸುತ್ತಿವೆ. ಈ ಬೆಳವಣಿಗೆಯು ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಸಮುದಾಯದಲ್ಲಿ ಆತಂಕ ಮೂಡಿಸಿದೆ.





