ನವದೆಹಲಿ: ಭಾರತದ ಚುನಾವಣಾ ಆಯೋಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯ ಚುನಾವಣಾ ಆಯುಕ್ತರ (CEC) ಪದಚ್ಯುತಿಗೆ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಭಾರಿ ಸಿದ್ಧತೆ ನಡೆಸಿವೆ. ಹಾಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಲಾಗಿದ್ದು, ಅವರನ್ನು ಅಧಿಕಾರದಿಂದ ಕೆಳಗಿಳಿಸಲು ‘ಇಂಡಿಯಾ’ (INDIA) ಮೈತ್ರಿಕೂಟವು ನೋಟಿಸ್ ಸಿದ್ಧಪಡಿಸಿದೆ.
191 ಸಂಸದರ ಸಹಿ
ಮೂಲಗಳ ಪ್ರಕಾರ, ಈ ಪದಚ್ಯುತಿ ನಿರ್ಣಯದ ನೋಟಿಸ್ಗೆ ಈಗಾಗಲೇ ಒಟ್ಟು 191 ಸಂಸದರು ಸಹಿ ಹಾಕಿದ್ದಾರೆ. ಇದರಲ್ಲಿ ಲೋಕಸಭೆಯ 128 ಸದಸ್ಯರು ಮತ್ತು ರಾಜ್ಯಸಭೆಯ 63 ಸದಸ್ಯರು ಸೇರಿದ್ದಾರೆ. ನಿಯಮದ ಪ್ರಕಾರ, ಲೋಕಸಭೆಯಲ್ಲಿ ಕನಿಷ್ಠ 100 ಮತ್ತು ರಾಜ್ಯಸಭೆಯಲ್ಲಿ 50 ಸದಸ್ಯರ ಸಹಿ ಅಗತ್ಯವಿರುತ್ತದೆ. ವಿಪಕ್ಷಗಳು ಈಗಾಗಲೇ ಈ ಮ್ಯಾಜಿಕ್ ಸಂಖ್ಯೆಯನ್ನು ಮೀರಿದ್ದು, ತೃಣಮೂಲ ಕಾಂಗ್ರೆಸ್ (TMC) ಈ ಗೊತ್ತುವಳಿಯನ್ನು ಮುನ್ನಡೆಸುತ್ತಿದೆ. ವಿಶೇಷವೆಂದರೆ, ಮೈತ್ರಿಕೂಟದಿಂದ ಹೊರಗುಳಿದಿದ್ದ ಆಮ್ ಆದ್ಮಿ ಪಾರ್ಟಿ (AAP) ಸದಸ್ಯರೂ ಸಹಿ ಮಾಡುವ ಮೂಲಕ ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಜ್ಞಾನೇಶ್ ಕುಮಾರ್ ವಿರುದ್ಧದ 7 ಪ್ರಮುಖ ಆರೋಪಗಳು
ವಿರೋಧ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತರ ಮೇಲೆ ಏಳು ಗಂಭೀರ ಆರೋಪಗಳನ್ನು ಪಟ್ಟಿ ಮಾಡಿವೆ:
-
ಅಧಿಕಾರ ದುರುಪಯೋಗ ಮತ್ತು ಆಡಳಿತ ಪಕ್ಷದ ಪರವಾಗಿ ಪಕ್ಷಪಾತದ ವರ್ತನೆ.
-
ಚುನಾವಣಾ ಅಕ್ರಮಗಳ ತನಿಖೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿರುವುದು.
-
ದೊಡ್ಡ ಮಟ್ಟದಲ್ಲಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದು.
-
ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರ್ಪಡೆ ಅಥವಾ ತೆಗೆದುಹಾಕುವಿಕೆ.
-
ದೇಶದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸುವಲ್ಲಿ ಸಂಪೂರ್ಣ ವೈಫಲ್ಯ.
-
ಮತದಾರರ ಪಟ್ಟಿ ಸಿದ್ಧಪಡಿಸುವಾಗ ಸಾಂವಿಧಾನಿಕ ಜವಾಬ್ದಾರಿ ಮರೆತು ತಪ್ಪು ಎಸಗಿರುವುದು.
-
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯ ಕೊರತೆ.
ಪದಚ್ಯುತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ?
ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರ ಪದಚ್ಯುತಿ ಪ್ರಕ್ರಿಯೆಯಂತೆಯೇ ಇರುತ್ತದೆ. ಸಂವಿಧಾನದ ಪ್ರಕಾರ, ಸಾಬೀತಾದ ದುರ್ನಡತೆ ಅಥವಾ ಅಸಮರ್ಥತೆಯ ಆಧಾರದ ಮೇಲೆ ಮಾತ್ರ ಇವರನ್ನು ಕೆಳಗಿಳಿಸಲು ಸಾಧ್ಯ. ಸಂಸತ್ತಿನ ಉಭಯ ಸದನಗಳಲ್ಲಿ ವಿಶೇಷ ಬಹುಮತದೊಂದಿಗೆ ನಿರ್ಣಯ ಅಂಗೀಕಾರವಾಗಬೇಕಾಗುತ್ತದೆ.
ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಈ ನೋಟಿಸ್ ಅಧಿಕೃತವಾಗಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ಗೊತ್ತುವಳಿಯಲ್ಲಿ ಸೋತಿದ್ದ ವಿಪಕ್ಷಗಳಿಗೆ, ಈ ಬಾರಿ ಸಿಇಸಿ ವಿರುದ್ಧದ ಹೋರಾಟವು ಅಗ್ನಿಪರೀಕ್ಷೆಯಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಚುನಾವಣಾ ಆಯುಕ್ತರೊಬ್ಬರ ವಿರುದ್ಧ ಈ ಮಟ್ಟದ ಸಂಸದೀಯ ಕ್ರಮ ಜರುಗುತ್ತಿರುವುದು ಇದೇ ಮೊದಲು.





