2004ರಲ್ಲಿ ನಟಿ ಸೌಂದರ್ಯಾ ಹಾಗೂ ಅವರ ಸಹೋದರ ಅಮರನಾಥ್ ರವರ ವಿಮಾನ ಅಪಘಾತದ ಸಾವಿನ ಹಿಂದೆ “ನಿಯೋಜಿತ ಕೊಲೆ” ಇದೆ ಎಂಬ ಆರೋಪದೊಂದಿಗೆ, ಟಾಲಿವುಡ್ ನಟ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ. ಘಟನೆಗೆ 21 ವರ್ಷಗಳ ನಂತರ ಖಮ್ಮಂ ಪೊಲೀಸ್ ಸ್ಟೇಷನ್ನಲ್ಲಿ ಚಿಟ್ಟಿಬಾಬು ಎಂಬುವರಿಂದ ದಾಖಲಾದ ಈ ದೂರು, ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ.
2004ರ ಏಪ್ರಿಲ್ 17ರಂದು, ಸೌಂದರ್ಯಾ ಹಾಗೂ ಅಮರನಾಥ್ ರವರು ಹೈದರಾಬಾದ್ ಹತ್ತಿರ ಶಂಶಾಬಾದ್ ವಿಮಾನ ನಿಲ್ದಾಣದಿಂದ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ಟೇಕಾಫ್ ಆದ ಕೆಲವು ನಿಮಿಷಗಳಲ್ಲೇ ಅದು ಅಗ್ನಿಪಾತಕ್ಕೆ ಗುರಿಯಾಗಿ, ಇಬ್ಬರೂ ಸೇರಿದಂತೆ 5 ಜನರ ಪ್ರಾಣಹಾನಿ ಆಯಿತು. ಆದರೆ, ಈ ಅಪಘಾತವನ್ನು “ಆಕಸ್ಮಿಕ” ಎಂದು ಪರಿಗಣಿಸಲಾಗಿತ್ತು.
ಆದರೆ ಚಿಟ್ಟಿಬಾಬು ಎಂಬ ವ್ಯಕ್ತಿ ದೂರಿನ ಪ್ರಕಾರ, ಸೌಂದರ್ಯ ಅವರ ಹೆಸರಿನಲ್ಲಿ ಶಂಶಾಬಾದ್ ಪ್ರದೇಶದ ಜಲಪಲ್ಲಿಯಲ್ಲಿ 6 ಎಕರೆ ಭೂಮಿ ಇತ್ತು. ಭೂಮಿಯನ್ನು ತಮಗೆ ಮಾರಾಟ ಮಾಡುವಂತೆ ಬಾಬು ಕೇಳಿಕೊಂಡಿದ್ದರು, ಆದರೆ ಸೌಂದರ್ಯ ಸಹೋದರ ಅದನ್ನು ವಿರೋಧಿಸಿದ್ದರು.
ಕುಟುಂಬ ಮತ್ತು ಬಾಬು ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು. ಹೀಗಾಗಿ ಸೌಂದರ್ಯ ಕೊಲೆಗೆ ಬಾಬು ಸಂಚು ರೂಪಿಸಿದ್ದರು. ಇದರ ಪ್ರತಿಫಲವೇ ವಿಮಾನ ಅಪಘಾತ. ಅದು ಆಕಸ್ಮಿಕವಲ್ಲ. ಕೊಲೆ ಎಂದು ಚಿಟ್ಟಿಬಾಬು ದೂರಿದ್ದಾರೆ.
ಇದಲ್ಲದೆ, ಸೌಂದರ್ಯ ಸಾವಿನ ಬಳಿಕ ಬಾಬು ಅವರು ಆ ಜಮೀನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ. ಅದನ್ನು ತೆರವು ಮಾಡಿಸಬೇಕು ಎಂದು ಪೊಲೀಸರಿಗೆ ಕೋರಿದ್ದಾರೆ.