ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮಗಳ ಜತೆಗೆ ದೇಶದ ಸರ್ವತೋಮುಖ ಅಭಿವೃದ್ಧಿ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲಾಗಿದೆ. ಜಾಗತಿಕ ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯಲು ಬಜೆಟ್ ಪೂರಕವಾಗಿದೆ ಎಂದು ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಎಂಡಿ ಡಾ.ಸಿಎಚ್ ವಿಎಸ್ವಿ ಪ್ರಸಾದ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನರನ್ನು ಮೆಚ್ಚಿಸಲು ಯಾವುದೇ ಉಚಿತ ಕೊಡುಗೆಗಳನ್ನು ನೀಡದೇ, ಶಿಕ್ಷಣ, ಆರೋಗ್ಯ, ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮತ್ತು ಸೆಮಿ ಕಂಡೆಕ್ಟರ್, ಪ್ರವಾಸೋದ್ಯಮ ಕ್ರೀಡೆ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಧನಾತ್ಮಕ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಲಾಗಿದೆ. ಹೀಗಾಗಿ ಭವಿಷ್ಯದ ದಿನಗಳಲ್ಲಿ ಆರ್ಥಿಕತೆಗೆ ಹೆಚ್ಚಿನ ಭೂಸ್ಟ್ ನೀಡುವುದರಲ್ಲಿ ಆಶ್ಚರ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಎಂಎಸ್ಎಂಇ ಸ್ಥಾಪನೆಗೆ ಹೆಚ್ಚು ಒತ್ತು ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದರಿಂದ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗಾವಕಾಶ ದೊರೆಯುವುದರಲ್ಲಿ ಅನುಕೂಲಕರವಾಗಲಿದೆ. ಅಷ್ಟೇ ಅಲ್ಲದೇ ಆತ್ಮ ನಿರ್ಭರ ಭಾರತಕ್ಕೆ ಸಹಕಾರಿಯಾಗಲಿದೆ. ಇನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಮಹತ್ವ ಸೆಮಿ-ಕಂಡಕ್ಟರ್ ತಯಾರಿಕಾ ಕ್ಷೇತ್ರಕ್ಕೆ ಹೆಚ್ಚು ಹಣಕಾಸು ಕಾಯ್ದಿರಿಸಲಾಗಿದೆ. ನಮ್ಮ ರಾಜ್ಯಕ್ಕೆ ಖಂಡಿತವಾಗಿಯೂ ದೊರೆಯುವ ನಿರೀಕ್ಷೆಯಿದೆ ಎಂದಿದ್ದಾರೆ.
ಕೃಷಿಯಲ್ಲಿ ತೆಂಗು, ಶ್ರೀಗಂಧ, ಗೋಡಂಬಿ, ಕೋಕೋದಂತಹ ಬೆಳಗಳಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ಈ ಎಲ್ಲ ಬೆಳೆಗಳು ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳನ್ನಾಗಿ ಬೆಳೆಯಲಾಗುತ್ತಿದೆ. ಹೀಗಾಗಿ ಉತ್ಪಾದನೆ ಹಾಗೂ ಸಂಸ್ಕರಣಾ ಕ್ಷೇತ್ರ ಇನ್ನಷ್ಟು ಹೆಚ್ಚಳವಾಗಿ ರಾಜ್ಯದ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಗಮನ ನೀಡಿರುವ ಕೇಂದ್ರ ಸರ್ಕಾರ, ಮೂರು ಏಮ್ಸ್ ಕಾಲೇಜುಗಳ ಸ್ಥಾಪನೆ, ಮೂರು ಹೊಸ ಅಖಿಲ ಭಾರತ ಆಯುರ್ವೇದಿಕ ಸಂಸ್ಥೆಗಳ ಸ್ಥಾಪನೆ ಸೇರಿದಂತೆ ದೇಶದ ಕೆಲವಡೆ ಮೆಡಿಕಲ್ ಹಬ್ ನಿರ್ಮಾಣ ಮಾಡಿ ಮೆಡಿಕಲ್ ಟೂರಿಸಂ ಅಭಿವೃದ್ಧಿಪಡಿಸುವ ಇಚ್ಛೆಯನ್ನು ಇಟ್ಟುಕೊಂಡಿದೆ. ಮೂರು ಮೆಡಿಕಲ್ ಕಾಲೇಜುಗಳು, ಹತ್ತಾರು ದೊಡ್ಡ ದೊಡ್ಡ ಆಸ್ಪತ್ರೆಗಳಿರುವ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ ಧಾರವಾಡ ಕೂಡಾ ಮೆಡಿಕಲ್ ಹಬ್ ಆಗುವ ಅಭಿವೃದ್ಧಿ ಆಗುವ ಸಾಧ್ಯತೆಯನ್ನುಅಲ್ಲಗಳೆಯುವಂತಿಲ್ಲ ಎಂದು ಡಾ.ಪ್ರಸಾದ್ ಹೇಳಿದ್ದಾರೆ.





