ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 (BBK 12) ಈಗ ಅಂತಿಮ ಘಟ್ಟ ತಲುಪಿದೆ. ಇಡೀ ಕರ್ನಾಟಕವೇ ಬಿಗ್ಬಾಸ್ ಟ್ರೋಫಿ ಯಾರಿಗೆ ಸಿಗಲಿದೆ ಎಂದು ಕಾದು ಕುಳಿತಿದ್ದಾರೆ ಆದರೆ ಬಿಗ್ಬಾಸ್ ಪ್ರಸಾರದ ವೇಳಾಪಟ್ಟಿಯಲ್ಲಿನ ದಿಢೀರ್ ಬದಲಾವಣೆ ಅಭಿಮಾನಿಗಳಲ್ಲಿ ತೀವ್ರ ಬೇಸರ ಮತ್ತು ಚರ್ಚೆಗೆ ಕಾರಣವಾಗಿದೆ. ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಫಿನಾಲೆ ಎರಡು ದಿನಗಳ ಬದಲು ಕೇವಲ ಒಂದು ದಿನ ನಡೆಯುವ ಮುನ್ಸೂಚನೆ ಸಿಕ್ಕಿದೆ.
ಫಿನಾಲೆ ವಿಳಂಬಕ್ಕೆ ಅಸಲಿ ಕಾರಣವೇನು?
ಸಾಮಾನ್ಯವಾಗಿ ಬಿಗ್ ಬಾಸ್ ಫಿನಾಲೆ ಶನಿವಾರ ಮತ್ತು ಭಾನುವಾರ ಅದ್ಧೂರಿಯಾಗಿ ನಡೆಯುತ್ತಿತ್ತು. ಆದರೆ, ಇಂದಿನ (ಜನವರಿ 17) ಸಂಚಿಕೆಗೆ ಕಿಚ್ಚ ಸುದೀಪ್ ಲಭ್ಯವಿಲ್ಲದ ಕಾರಣ ಫಿನಾಲೆ ಕೇವಲ ಭಾನುವಾರ ಮಾತ್ರ ನಡೆಯಲಿದೆ. ಇದಕ್ಕೆ ಮುಖ್ಯ ಕಾರಣ ಸುದೀಪ್ ಅವರು ಸಿಸಿಎಲ್ (Celebrity Cricket League) ಪಂದ್ಯಾವಳಿಯಲ್ಲಿ ಬ್ಯುಸಿ ಇರುವುದು.
ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ಪಂಜಾಬ್ ದೆ ಶೇರ್ ವಿರುದ್ಧ ಗೆಲುವು ಪಡೆದಿದೆ. ಜನವರಿ 16ರಂದು ತಡರಾತ್ರಿಯವರೆಗೆ ಪಂದ್ಯ ನಡೆದಿದ್ದರಿಂದ, ರಾತ್ರೋರಾತ್ರಿ ವಿಶಾಖಪಟ್ಟಣದಿಂದ ಬೆಂಗಳೂರಿಗೆ ಮರಳಿ, ಬೆಳಗ್ಗೆ ಬಿಗ್ಬಾಸ್ ನಡೆಸಿಕೊಡಿ ಎಂದರೆ ಅದು ಅಸಾಧ್ಯವಾದ ಮಾತು. ಹೀಗಾಗಿ, ಒಂದು ದಿನ ಬಿಡುವು ಪಡೆದು ಸುದೀಪ್ ಬಿಗ್ ಬಾಸ್ 12 ಫಿನಾಲೆ ನಡೆಸಿಕೊಡುತ್ತಿದ್ದಾರೆ.
ಇಂದಿನ ಸಂಚಿಕೆಯ ವಿಶೇಷತೆ
ಶನಿವಾರ ಫಿನಾಲೆ ಇಲ್ಲದಿದ್ದರೂ ಬಿಗ್ ಬಾಸ್ ಪ್ರೇಕ್ಷಕರಿಗೆ ನಿರಾಸೆ ಮಾಡದಿರಲು ವಾಹಿನಿ ನಿರ್ಧರಿಸಿದೆ. ಮೂಲಗಳ ಪ್ರಕಾರ, ಇಂದು ಸಾಮಾನ್ಯ ಎಪಿಸೋಡ್ಗಿಂತ ಸ್ವಲ್ಪ ಭಿನ್ನವಾಗಿರುವ ಸಂಚಿಕೆ ಪ್ರಸಾರವಾಗಲಿದೆ. ಮನೆಯೊಳಗಿನ ಸ್ಪರ್ಧಿಗಳ ಭಾವನಾತ್ಮಕ ಕ್ಷಣಗಳು, ವಿಶೇಷ ನೃತ್ಯ ಪ್ರದರ್ಶನಗಳು ಮತ್ತು ಬಿಗ್ ಬಾಸ್ ಮನೆಯ ಹಿಂದಿನ ಸೀಸನ್ಗಳ ಸ್ಪರ್ಧಿಗಳ ಭೇಟಿಯನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.
ಫಿನಾಲೆ ಸಂಚಿಕೆಯು ಭಾನುವಾರ (ಜನವರಿ 18) ಸಂಜೆ 6 ಗಂಟೆಗೆ ಆರಂಭವಾಗಲಿದೆ. ಈ ಬಾರಿ ವೋಟಿಂಗ್ ಪ್ರಕ್ರಿಯೆಯಲ್ಲೂ ಬದಲಾವಣೆ ಮಾಡಲಾಗಿದ್ದು, ಭಾನುವಾರ ಬೆಳಿಗ್ಗೆ 10 ಗಂಟೆಯವರೆಗೂ ವೋಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮನೆಯಲ್ಲಿರುವ ಅಂತಿಮ 6 ಸ್ಪರ್ಧಿಗಳ ಪೈಕಿ ನಾಲ್ವರು ಭಾನುವಾರವೇ ಮನೆಯಿಂದ ಹೊರಬರಲಿದ್ದಾರೆ. ಕೊನೆಯ ಇಬ್ಬರು ಸ್ಪರ್ಧಿಗಳ ಪೈಕಿ ವಿನ್ನರ್ ಯಾರು ಎಂಬ ಕುತೂಹಲಕ್ಕೆ ಕಿಚ್ಚ ಸುದೀಪ್ ಅವರು ಭಾನುವಾರ ರಾತ್ರಿ ತಿಳಿಸುತ್ತಾರೆ.
ಬಿಗ್ ಬಾಸ್ ಇತಿಹಾಸದಲ್ಲೇ ಕಿಚ್ಚ ಸುದೀಪ್ ಅವರು ಫಿನಾಲೆಯನ್ನು ಮಿಸ್ ಮಾಡಿಕೊಂಡ ಉದಾಹರಣೆ ಇಲ್ಲ. ಇದು ಕೇವಲ ಒಂದು ದಿನದ ವಿಳಂಬವಾದರೂ, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫಿನಾಲೆ ಎರಡು ದಿನ ಬೇಕಿತ್ತು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.





