ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಮತ್ತು ಕೋಮು ಸಂಘರ್ಷದ ಕಿಚ್ಚು ಹೊತ್ತಿ ಉರಿಯುತ್ತಿದೆ. ಭಾರತದ ವಿರುದ್ಧದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಾಂಗ್ಲಾದೇಶದ ಬಂದರು ನಗರಿ ಚಿತ್ತಗಾಂಗ್ನಲ್ಲಿರುವ ಭಾರತೀಯ ಉಪರಾಯಭಾರ ಕಚೇರಿಯು ತನ್ನ ವೀಸಾ ಕಾರ್ಯಾಚರಣೆಯನ್ನು ಅನಿರ್ದಿಷ್ಟಾವಧಿಯವರೆಗೆ ಸ್ಥಗಿತಗೊಳಿಸಿದೆ.
ಕಚೇರಿ ಮೇಲೆ ದಾಳಿಗೆ ಯತ್ನ
ಚಿತ್ತಗಾಂಗ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯ ಮೇಲೆ ನೂರಾರು ಪ್ರತಿಭಟನಾಕಾರರು ಏಕಾಏಕಿ ದಾಳಿ ನಡೆಸಲು ಪ್ರಯತ್ನಿಸಿದರು. ಸಮಯಕ್ಕೆ ಸರಿಯಾಗಿ ಭದ್ರತಾ ಪಡೆಗಳು ಮಧ್ಯಪ್ರವೇಶಿಸಿ ಅನಾಹುತವನ್ನು ತಪ್ಪಿಸಿದರೂ, ಪರಿಸ್ಥಿತಿ ನಿಯಂತ್ರಣ ಮೀರುತ್ತಿರುವುದನ್ನು ಗಮನಿಸಿ ಭಾರತ ಈ ಕಠಿಣ ನಿರ್ಧಾರ ಕೈಗೊಂಡಿದೆ. ಕೇವಲ ಚಿತ್ತಗಾಂಗ್ ಮಾತ್ರವಲ್ಲದೆ ಢಾಕಾ, ಖುಲ್ನಾ ಮತ್ತು ರಾಜಷಾಹಿಯಲ್ಲಿರುವ ಭಾರತೀಯ ಕಚೇರಿಗಳ ಮುಂದೆಯೂ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
ಹತ್ಯೆಯ ಸುತ್ತ ಹಬ್ಬಿದ ಸುಳ್ಳು ಸುದ್ದಿ
ಬಾಂಗ್ಲಾದೇಶದ ಪ್ರಭಾವಿ ನಾಯಕ ಷರೀಫ್ ಉಸ್ಮಾನ್ ಹದಿ ಎಂಬುವವರ ಹತ್ಯೆಯೇ ಈ ಈಗಿನ ಹಿಂಸಾಚಾರಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಶೇಖ್ ಹಸೀನಾ ಸರ್ಕಾರ ಪತನಗೊಳ್ಳುವಲ್ಲಿ ಷರೀಫ್ ಉಸ್ಮಾನ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಷರೀಫ್ ಉಸ್ಮಾನ್ನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಆಧಾರರಹಿತ ವದಂತಿಗಳನ್ನು ಅಲ್ಲಿನ ಕೆಲವು ಕಿಡಿಗೇಡಿ ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಈ ಹತ್ಯೆಯನ್ನು ಬಳಸಿಕೊಂಡು ಪಾಕಿಸ್ತಾನ ಪ್ರೇರಿತ ಜನರು ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಅಲೆ ಸೃಷ್ಟಿಸಲು ಯತ್ನಿಸುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹಿಂದೂಗಳ ಮೇಲೆ ದೌರ್ಜನ್ಯ
ಪ್ರತಿಭಟನೆಯ ಹೆಸರಿನಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗಳು ಮುಂದುವರಿದಿದ್ದು, ಹಿಂದೂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದ ಅಮಾನುಷ ಘಟನೆ ವರದಿಯಾಗಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದೆ. ಹದಿಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸಾವಿರಾರು ಜನರು ಸೇರಿ ‘ಡೆಲ್ಲಿ ಆರ್ ಢಾಕಾ-ಢಾಕಾ ಢಾಕಾ’ ಎಂಬ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಈ ಘೋಷಣೆಗಳು ಮತ್ತು ಪ್ರತಿಭಟನೆಯ ಶೈಲಿಯು ಈ ಹಿಂದೆ ಕಾಶ್ಮೀರದಲ್ಲಿ ಉಗ್ರಗಾಮಿಗಳು ಅನುಸರಿಸುತ್ತಿದ್ದ ತಂತ್ರಗಳನ್ನೇ ಹೋಲುತ್ತಿವೆ ಎಂಬುದು ಆತಂಕಕಾರಿ ವಿಷಯ.
ಬಾಂಗ್ಲಾದಿಂದ ಶೇಖ್ ಹಸೀನಾ ಬಂದ ನಂತರ ಬಾಂಗ್ಲಾದಲ್ಲಿ ಪಾಕಿಸ್ತಾನಿ ಪರ ಇರುವ ಜನರ ಕೈ ಮೇಲಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಾರತದೊಂದಿಗಿನ ಉತ್ತಮ ಬಾಂಧವ್ಯವನ್ನು ಹದಗೆಡಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಪರಿಸ್ಥಿತಿ ತಿಳಿಯಾಗುವವರೆಗೆ ಭಾರತೀಯ ಪ್ರಜೆಗಳಿಗೆ ಮತ್ತು ಅಧಿಕಾರಿಗಳಿಗೆ ರಕ್ಷಣೆ ನೀಡುವುದು ಭಾರತದ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ವೀಸಾ ಸೇವೆಗಳ ಸ್ಥಗಿತವು ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.





