ನವದೆಹಲಿ: ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ‘ವೋಟ್ ಚೋರ್, ಗದ್ದಿ ಚೋಡ್’ (ಮತ ಕಳ್ಳತನ, ಅಧಿಕಾರ ತ್ಯಜಿಸಿ) ಎಂಬ ಘೋಷಣೆಯಡಿ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾರತೀಯ ಜನತಾ ಪಕ್ಷ (BJP) ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಚುನಾವಣಾ ಆಯೋಗದ ಸಹಾಯವಿಲ್ಲದೆ ಬಿಜೆಪಿಗೆ ಗೆಲುವು ಸಾಧ್ಯವಿಲ್ಲ,” ಎಂದು ನೇರವಾಗಿ ಆರೋಪಿಸಿದರು.
ಈ ಪ್ರತಿಭಟನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ರಾಷ್ಟ್ರೀಯ ನಾಯಕರು ಭಾಗವಹಿಸಿದ್ದರು.
ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯ ಬಗ್ಗೆ ಮಾತನಾಡಿಸ ಪ್ರಿಯಾಂಕಾ ಗಾಂಧಿ , ಸಂವಿಧಾನವನ್ನು ರಕ್ಷಿಸಲು ನಾವು ಹೋರಾಡುತ್ತಿದ್ದೇವೆ. ನಮ್ಮ ಹೋರಾಟದ ಹಾದಿಯಲ್ಲಿ ಹಲವು ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಲಾಯಿತು. ನಮ್ಮ ಪಕ್ಷದ ಪ್ರಮುಖ ಹಣಕಾಸು ಮೂಲವಾದ ಕಾಂಗ್ರೆಸ್ನ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಯಿತು. ನಮ್ಮ ನಾಯಕರ ಮೇಲೆ ನಿರಂತರವಾಗಿ ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ (IT) ಇಲಾಖೆ ದಾಳಿಗಳನ್ನು ನಡೆಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ, ಅದೇ ಸಮಯದಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪ ಎದುರಿಸುತ್ತಿದ್ದ ನಾಯಕರನ್ನು ಬಿಜೆಪಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿತು. ಆ ನಾಯಕರನ್ನು ‘ವಾಷಿಂಗ್ ಮಷಿನ್ನಲ್ಲಿ’ ತೊಳೆದು ಶುದ್ಧರನ್ನಾಗಿ ಮಾಡಲಾಯಿತು,” ಎಂದು ಲೇವಡಿ ಮಾಡಿದರು.
ದೇಶ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ ಅವರು, ದೇಶವು ಆರ್ಥಿಕ ಕುಸಿತ, ನಿರುದ್ಯೋಗ ಮತ್ತು ರೂಪಾಯಿ ಮೌಲ್ಯ ಕುಸಿತದಂತಹ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದೆ. ಮತಗಳವು ಮತ್ತು ಚುನಾವಣಾ ಪರಿಷ್ಕರಣೆ ಕುರಿತು ಚರ್ಚಿಸಲು ನಾವು ಒತ್ತಾಯಿಸಿದರೆ, ಅವರು ‘ವಂದೇ ಭಾರತ’ (ರೈಲು) ಕುರಿತು ಚರ್ಚೆ ಆರಂಭಿಸುತ್ತಾರೆ. ಇವರಿಗೆ ನಿಜವಾದ ಚುನಾವಣೆಯನ್ನು ಎದುರಿಸುವ ಧೈರ್ಯವಿಲ್ಲ. ಒಂದು ವೇಳೆ ಸರಿಯಾದ ಮತ್ತು ನ್ಯಾಯಯುತ ಚುನಾವಣೆ ನಡೆದರೆ, ಬಿಜೆಪಿ ಕನಿಷ್ಠ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಿದ ಪ್ರಿಯಾಂಕಾ ಗಾಂಧಿ, ಪ್ರಜಾಪ್ರಭುತ್ವದ ಮುಖ್ಯ ಕಾವಲುಗಾರನಾದ ಚುನಾವಣಾ ಆಯೋಗದ (Election Commission of India – ECI) ನಿಷ್ಪಕ್ಷಪಾತದ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದರು. ಬಿಹಾರ, ಕರ್ನಾಟಕ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಮತಗಳವು ಮತ್ತು ಅಕ್ರಮಗಳ ಮೂಲಕ ಬಿಜೆಪಿ ಗೆಲುವು ಸಾಧಿಸಿದೆ. ಇತ್ತೀಚೆಗೆ ಹತ್ತು ಸಾವಿರ ರೂಪಾಯಿಯನ್ನು ಮಹಿಳೆಯರ ಖಾತೆಗಳಿಗೆ ಚುನಾವಣೆಗೆ ಮುನ್ನ ವರ್ಗಾಯಿಸಲಾಯಿತು. ಇದನ್ನು ತಡೆಯುವವರು ಯಾರೂ ಇರಲಿಲ್ಲ ಎಂದು ಹೇಳಿದ್ದಾರೆ.
ಅವರು ಸಂಸತ್ತಿನಲ್ಲಿ ಬಿಜೆಪಿ ನಾಯಕರ ಆಂತರಿಕ ಆತ್ಮವಿಶ್ವಾಸ ಕುಗ್ಗಿರುವುದನ್ನು ಗಮನಿಸಿದ್ದೇನೆ ಎಂದು ಹೇಳಿದ ಪ್ರೀಯಾಂಕ ಗಾಂಧಿ, ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದರೆ ತಲೆ ತಗ್ಗಿಸಿಕೊಂಡು ಹೋಗುತ್ತಾರೆ. ಏಕೆಂದರೆ ಅವರಿಗೆ ತಿಳಿದಿದೆ-ಚುನಾವಣಾ ಆಯೋಗದ ಸಹಾಯವಿಲ್ಲದೇ ಗೆಲುವು ಅವರಿಗೆ ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ಅವರು, ಚುನಾವಣಾ ಆಯೋಗದ ಮೂವರು ಅಧಿಕಾರಿಗಳ ಹೆಸರನ್ನು ನೆನಪಿಡಿ, ಏಕೆಂದರೆ ಅವರು ಪ್ರಜಾಪ್ರಭುತ್ವದ ಮೇಲೆ ಯುದ್ಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರೂಪಾಯಿ ಮೌಲ್ಯ ಕುಸಿದಿದ್ದರೂ (90 ರೂಪಾಯಿಗೆ ಕುಸಿದಿದೆ ಎಂದು ಆರೋಪಿಸಿ), ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ. ದೇಶದ ವಿದೇಶಾಂಗ ನೀತಿ ನಾಶವಾಗಿದೆ. ಕಷ್ಟದ ಪರಿಸ್ಥಿತಿಯಲ್ಲಿ ಯಾವ ದೇಶವೂ ಭಾರತದ ಪರವಾಗಿ ನಿಲ್ಲಲಿಲ್ಲ. ಪ್ರಧಾನಿ ಮೋದಿ ಅವರು ಕೇವಲ ಅಂಬಾನಿ ಮತ್ತು ಅದಾನಿ ಅವರ ಕೈ ಹಿಡಿದು ವಿದೇಶ ಪ್ರಯಾಣ ಮಾಡುತ್ತಾರೆ ಎಂದು ಟೀಕಿಸಿದರು.
ಅಷ್ಟೇ ಅಲ್ಲದೆ,ಬೆಟ್ಟಿಂಗ್ ಆ್ಯಪ್ಗಳ ಕುರಿತು ಪ್ರಧಾನಿ ಕಚೇರಿಯ (PMO) ವ್ಯಕ್ತಿಯೊಬ್ಬರ ಪಾತ್ರದ ಬಗ್ಗೆಯೂ ಗಂಭೀರ ಆರೋಪ ಮಾಡಿದರು. ಈ ಸರ್ಕಾರ ಮಹಿಳೆಯರ ಪರವಾಗಿ ಮಾತನಾಡಲಿಲ್ಲ. ನಿಮ್ಮ ಗಮನ ಬೇರೆಡೆ ಸೆಳೆಯಲು ಬೇಕೆಂದೇ ಹೊಸ ಹೊಸ ವಿಷಯಗಳನ್ನು ತರಲಾಗುತ್ತಿದೆ ಎಂದು ಪ್ರಿಯಾಂಕ ಗಾಂಧಿ ಆರೋಪ ಮಾಡಿದರು.
ದೇಶದ ನೈಸರ್ಗಿಕ ಸಂಪತ್ತು ಮತ್ತು ದೇಶದ ಜನರು ಭಾರತ ಮಾತಾ ಆಗಿದ್ದಾರೆ ಎಂದು ನೆಹರೂ ಅವರು ವಿವರಿಸಿದ್ದರು. ಇಂತಹ ಭಾವನೆ ನಮ್ಮ ಸಂವಿಧಾನದ ಆಧಾರವಾಗಿದೆ ಎಂದರು.
ಈ ಸಂವಿಧಾನ ನಮಗೆ ಮತದಾನದ ಹಕ್ಕು ನೀಡಿದೆ. ಪ್ರಜಾಪ್ರಭುತ್ವವನ್ನು ಪ್ರಬಲವಾಗಿ ಇರಿಸಲು ಈ ಹಕ್ಕನ್ನು ನೀಡಲಾಗಿದೆ. ಸಾಂವಿಧಾನಿಕ ಸಂಸ್ಥೆಗಳು, ವಿರೋಧ ಪಕ್ಷಗಳು ಎಲ್ಲವೂ ಸಂವಿಧಾನದ ಭಾಗಗಳು. ಆದರೆ ಇಂತಹ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಹಾಳು ಮಾಡಲಾಗುತ್ತಿದೆ. ಇದು ದೇಶದ ಪ್ರತಿಯೊಬ್ಬ ಜನರ ಮೇಲಿನ ದಾಳಿ ಎಂದು ಆತಂಕ ವ್ಯಕ್ತಪಡಿಸಿದ ಅವರು, ನ್ಯಾಯಾಂಗ ಮತ್ತು ಮಾಧ್ಯಮದ ಮೇಲೆ ಹೇರಲಾಗುತ್ತಿರುವ ಒತ್ತಡದ ವಿರುದ್ಧ ಎಚ್ಚರಿಕೆ ನೀಡಿದರು.





