ನವದೆಹಲಿ: ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಐತಿಹಾಸಿಕ ಬದಲಾವಣೆ ಸಂಭವಿಸಲಿದೆ. 2026-27 ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತ ಸಿಬಿಎಸ್ಇ ಶಾಲೆಗಳಲ್ಲಿ 3ನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (AI) ಪಾಠವನ್ನು ಪಠ್ಯಕ್ರಮದ ಭಾಗವಾಗಿ ಪರಿಚಯಿಸಲು ಕೇಂದ್ರ ಶಿಕ್ಷಣ ಸಚಿವಾಲಯ ಯೋಜನೆ ಹಾಕಿದೆ. ಭವಿಷ್ಯದ ತಂತ್ರಜ್ಞಾನ ಚಾಲಿತ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಈ ನಿರ್ಣಯದ ಹಿಂದಿರುವ ಮುಖ್ಯ ಉದ್ದೇಶವಾಗಿದೆ.
ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಯುಗದಲ್ಲಿ, ಶಿಕ್ಷಣ ರೀತಿಯನ್ನು ಬದಲಾಯಿಸುವ ಅಗತ್ಯತೆ ಉಂಟಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಕಾರ, ಎಲ್ಲಾ ಶ್ರೇಣಿಗಳಲ್ಲಿ AI ಏಕೀಕರಣಕ್ಕಾಗಿ ರೂಪುರೇಷೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ಎರಡರಿಂದ ಮೂರು ವರ್ಷಗಳೊಳಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ತಂತ್ರಜ್ಞಾನದೊಂದಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತೆ ವೇಗವಾಗಿ ಕಾರ್ಯನಿರ್ವಹಿಸಬೇಕಾಗಿದೆ. AI ಸಾಕ್ಷರತೆ, ನಾತ್ಮಕ ಚಿಂತನೆ ಮತ್ತು ನೈತಿಕ ತಂತ್ರಜ್ಞಾನದ ಬಳಕೆಯನ್ನು ಬೆಳೆಸುವುದು ಮತ್ತು ಡಿಜಿಟಲ್ ಆರ್ಥಿಕತೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸಿದ್ಧಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಹೊಸ ಪಠ್ಯಕ್ರಮದಲ್ಲಿ AIನ ಮೂಲಭೂತ ತತ್ವಗಳು ಮತ್ತು ಅದರ ಪ್ರಾಯೋಗಿಕ ಅನ್ವಯಗಳ ಮೇಲೆ ಒತ್ತು ನೀಡಲಾಗುವುದು. ಇದರಲ್ಲಿ ಚಾಟ್ ಬಾಟ್ಗಳು ಮತ್ತು ಜನರೇಟಿವ್ ಎಐಯಂತಹ ತಂತ್ರಜ್ಞಾನಗಳನ್ನು ಪರಿಚಯಿಸಲಾಗುವುದು. ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ವಿವಿಧ ಸಂದರ್ಭಗಳಲ್ಲಿ AI ಹೇಗೆ ಬಳಕೆಯಾಗುತ್ತದೆ ಎಂಬುದನ್ನು ಕಲಿಯುವರು.
ವಿದ್ಯಾರ್ಥಿಗಳ ಪಾಡ್ (Personalized Adaptive Learning) ಕೌಶಲ್ಯವನ್ನು ಹೆಚ್ಚಿಸಿ, ಭವಿಷ್ಯದ ಉದ್ಯೋಗ ಮಾರುಕಟ್ಟೆ ಮತ್ತು ತಂತ್ರಜ್ಞಾನ ಚಾಲಿತ ಜಗತ್ತಿಗೆ ಅವರನ್ನು ಸಿದ್ಧಗೊಳಿಸುತ್ತದೆ.ಮುಖ ಗುರುತಿಸುವ ತಂತ್ರಜ್ಞಾನದ ಮೂಲಕ ಹಾಜರಾತಿ ವ್ಯವಸ್ಥೆಯನ್ನು ಕೆಲವು ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ತರಲಾಗಿದೆ.ಬೋಧನೆಯಲ್ಲಿ ಶಿಕ್ಷಕರ ಪ್ರಾವೀಣ್ಯತೆ ಹೆಚ್ಚಿಸಲು, ಸಂವಹನ ಕೌಶಲ, ಶಬ್ದಕೋಶ ಮತ್ತು ವ್ಯಾಕರಣ ಸುಧಾರಣೆಗೆ AI ನೆರವು ನೀಡಬಹುದು. ಶಿಕ್ಷಕರು ಪಾಠದ ಯೋಜನೆಗಳನ್ನು ಸಿದ್ಧಪಡಿಸಲು AI ಅನ್ನು ಬಳಸಿಕೊಳ್ಳಬಹುದು.ಶಾಲೆ ಬಿಟ್ಟು ಹೋಗುವ ಮಕ್ಕಳನ್ನು ಗುರುತಿಸುವ ಸಲುವಾಗಿ ಆಂಧ್ರ ಪ್ರದೇಶ ಸರ್ಕಾರ AI ಅನ್ನು ಬಳಸಿಕೊಳ್ಳುತ್ತಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅನೇಕ ಸವಾಲುಗಳಿವೆ. ದೇಶದ 1 ಕೋಟಿಗೂ ಹೆಚ್ಚಿನ ಶಿಕ್ಷಕರನ್ನು AI ತಂತ್ರಜ್ಞಾನಕ್ಕೆ ತರಬೇತು ಮಾಡುವುದು ಅತ್ಯಂತ ದೊಡ್ಡ ಸವಾಲಾಗಿದೆ. ಜೊತೆಗೆ, AI ವ್ಯವಸ್ಥೆಗಳಲ್ಲಿ ಉಂಟಾಗಬಹುದಾದ ಪಕ್ಷಪಾತಗಳು (ಲಿಂಗ, ಜನಾಂಗೀಯ, ಸಾಂಸ್ಕೃತಿಕ ಮುಂತಾದವು) ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ .
ನೀತಿ ಆಯೋಗದ ಅಂದಾಜಿನಂತೆ, AIನ ಪ್ರಭಾವದಿಂದ ಸುಮಾರು 2 ದಶಲಕ್ಷ ಸಾಂಪ್ರದಾಯಿಕ “ಉದ್ಯೋಗಗಳು ನಶಿಸುವ ಸಾಧ್ಯತೆ ಇದೆ. ಆದರೆ, ಅದೇ ತಂತ್ರಜ್ಞಾನವು ದಶಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ, ಭವಿಷ್ಯದ ಕಾರ್ಯಬಲವನ್ನು ಸಿದ್ಧಪಡಿಸಲು ಈ ಬದಲಾವಣೆ ಅನಿವಾರ್ಯವಾಗಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (NCERT) ಜೊತೆಗೂಡಿ ಈ ಗುರಿಯನ್ನು ಸಾಧಿಸಲು ಕಾರ್ಯನಿರತವಾಗಿದೆ. ಈ ಕ್ರಾಂತಿಕಾರಿ ಹಂತವು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯವನ್ನೇ ಪ್ರಾರಂಭಿಸಲಿದೆ.





