ಕಲರ್ಸ್ ಕನ್ನಡ ವಾಹಿನಿಯು ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕಥೆಗಳ ಮೂಲಕ ಜನಪ್ರಿಯವಾಗಿದೆ. ‘ನಂದಗೋಕುಲ’ ಧಾರಾವಾಹಿಯೂ ಕೂಡ ಜನ ಮೆಚ್ಚಿದ ಧಾರಾವಾಹಿಯಾಗಿದೆ. ‘ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕಥೆಯನ್ನು ಹೇಳುವ, ‘ನಂದಗೋಕುಲ’ ಧಾರಾವಾಹಿ ರಾತ್ರಿ 9ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ಹೊಸ ತಿರುವುಗಳೊಂದಿಗೆ ಪ್ರೇಕ್ಷಕರ ಮನವನ್ನು ಗೆಲ್ಲುತ್ತಿದೆ.
ನಂದಕುಮಾರ್ ಒಬ್ಬ ಕಟ್ಟುನಿಟ್ಟಾದ ನಡವಳಿಕೆಯ ಆತ್ಮವಿಶ್ವಾಸದಿಂದ ಕೂಡಿದ ವ್ಯಕ್ತಿ, ‘ಗಿರಿಜಾ ಸ್ಟೋರ್ಸ್’ ಎಂಬ ದಿನಸಿ ಅಂಗಡಿ ನಡೆಸುವ ನಂದನಿಗೆ ತನ್ನ ಕುಟುಂಬವೆಂದರೆ ಪ್ರಾಣ. ಆದರೆ ಎದುರುಮನೆಯಲ್ಲೇ ಇರುವ ಸೂರ್ಯಕಾಂತ್ ಮತ್ತು ಚಂದ್ರಕಾಂತ್ ಕುಟುಂಬವೆಂದರೆ ನಂದಕುಮಾರ್ ಗೆ ಕೆಂಡದಂಥ ಕೋಪ, ವೈಷಮ್ಯ. ತನ್ನ ಹೆಂಡತಿ ಗಿರಿಜಾಳ ಸಹೋದರರೇ ಇವರಿಬ್ಬರೂ. ಈ ದ್ವೇಷಕ್ಕೆ ಕಾರಣ ನಂದಕುಮಾರ್ ಹಾಗೂ ಗಿರಿಜಾ 25 ವರ್ಷಗಳ ಹಿಂದೆ ಓಡಿಹೋಗಿ ಮದುವೆಯಾಗಿದ್ದು, ಈ ಎರಡೂ ಕುಟುಂಬಗಳ ನಡುವೆ ಅಂದಿನಿಂದಲೂ ಆಕ್ರೋಶ, ದ್ವೇಷ ಇದೆ.
ನಂದಕುಮಾರ್ ಮತ್ತು ಗಿರಿಜಾರ ಮಕ್ಕಳಾದ ಧನ್ಯಾ, ಮಾಧವ, ಕೇಶವ, ವಲ್ಲಭ ಮತ್ತು ಅನನ್ಯಾ ತಂದೆಯ ಕಟ್ಟುನಿಟ್ಟಾದ ನಿರೀಕ್ಷೆಗಳ ನಡುವೆ ಬೆಳೆದವರು. ತನ್ನ ಮಕ್ಕಳು ತನ್ನಂತೆ ಪ್ರೀತಿಸಿ ಮದುವೆಯಾದರೆ ನೋವನುಭವಿಸಬೇಕಾಗುತ್ತದೆ, ನೆಮ್ಮದಿಯೂ ಇರುವುದಿಲ್ಲ ಎಂದು ನಿರ್ಧರಿಸಿ ಮಕ್ಕಳಿಂದ ‘ನೀವ್ಯಾರೂ ಪ್ರೀತಿಸಿ ಮದ್ವೆ ಆಗೊಲ್ಲ ಅಂತ ನನಗೆ ಮಾತು ಕೊಡಿ!’ ಎಂದು ಭಾಷೆ ತೆಗೆದುಕೊಂಡಿರುತ್ತಾನೆ ನಂದಕುಮಾರ್. ಆದರೆ ಎರಡನೇ ಮಗ ಕೇಶವ್ ಮೀನಾಳನ್ನು ಪ್ರೀತಿಸುತ್ತಾನೆ. ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಮೀನಾಳ ತಂದೆ ಬೇರೊಬ್ಬ ಹುಡುಗನ ಜೊತೆ ಮದುವೆ ಫಿಕ್ಸ್ ಮಾಡುತ್ತಾನೆ.
ಇತ್ತ ನಂದಕುಮಾರ್ಗೆ ಮಗ ಕೇಶವನ ಪ್ರೀತಿಯ ವಿಷಯ ಗೊತ್ತಾಗುತ್ತದೆ. ದೊಡ್ಡ ಮಗ ಮಾಧವನಿಗೆ ಹೆಣ್ಣು ನೋಡುತ್ತಿದ್ದಾಗ ಕೇಶವನಿಗೂ ಮದುವೆ ಮಾಡಿಸುವ ಯೋಚನೆಯಲ್ಲಿ ಒಂದೇ ಮನೆಯ ಅಕ್ಕ ತಂಗಿಯರನ್ನು ನೋಡಿ ಮದುವೆ ಕೂಡಾ ಫಿಕ್ಸ್ ಮಾಡುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನಾಳ ಮದುವೆ ಇನ್ನೊಬ್ಬ ಹುಡುಗನ ಜೊತೆ ನೆರವೇರುತ್ತಿರುತ್ತದೆ. ಆಗ ನಂದಕುಮಾರ್ ನ ಮೂರನೇ ಮಗ ವಲ್ಲಭ ತನ್ನ ಅಣ್ಣನ ಪ್ರೀತಿಯನ್ನು ಒಂದು ಮಾಡಲು ನಿರ್ಧರಿಸುತ್ತಾನೆ. ಬೇಸರದಲ್ಲಿಯೇ ಮದುವೆ ಮಂಟಪಕ್ಕೆ ಹೋಗಲು ಸಜ್ಜಾಗಿರೋ ಮೀನಾಳನ್ನು ಯಾರ ಕಣ್ಣಿಗೂ ಬೀಳದಂತೆ ಅಲ್ಲಿಂದ ಕರೆದೊಯ್ಯುತ್ತಾನೆ. ವಲ್ಲಭನಿಗೆ ಕೇಶವನ ಮದುವೆ ಮೀನಾಳ ಜೊತೆ ಮಾಡಿಸಬೇಕೆಂದುಕೊಳ್ಳುತ್ತಾನೆ.
ಆದರೆ ವಲ್ಲಭ ಅಣ್ಣನ ಮದುವೆಯನ್ನು ಮಾಡಿಸಲು ಯಶಸ್ವಿಯಾಗುತ್ತಾನಾ? ತನ್ನ ಮಕ್ಕಳು ತಾನು ಹಾಕಿದ ಗೆರೆ ದಾಟಲ್ಲ ಎಂದು ಭಾವಿಸಿರುವ ನಂದಕುಮಾರ್ ಗೆ ತನ್ನ ಮಗ ಕೇಶವ ಪ್ರೀತಿಸಿ ಮದುವೆಯಾದರೆ ಆಗುವ ಆಘಾತವೇನು? ಅಪ್ಪಿತಪ್ಪಿ ಮದುವೆಯಾದಲ್ಲಿ ಆ ಮದುವೆಯನ್ನು ಒಪ್ಪಲು ಸಾಧ್ಯವೇ? ವರ್ಷಾನುಗಟ್ಟಲೆಯಿಂದ ಬೆಳೆಸಿಕೊಂಡು ಬಂದ ಪರಂಪರೆಯನ್ನು ಉಳಿಸಿಕೊಳ್ಳುವ ಸವಾಲನ್ನು ನಂದಕುಮಾರ್ ಹೇಗೆ ಎದುರಿಸುತ್ತಾನೆ? ‘ನಂದ ಗೋಕುಲ’ದಂಥ ಕುಟುಂಬದಲ್ಲಿ ಎಲ್ಲರೂ ಜೊತೆಯಾಗಿ ಸಂತೋಷದಿಂದ ಬಾಳಿ ಬದುಕಬೇಕು ಎಂಬ ಕನಸು ಕಾಣುತ್ತಿರುವ ನಂದಕುಮಾರ್ ಕನಸು ತನ್ನ ಮಕ್ಕಳ ಆಯ್ಕೆಯಿಂದ ಏರುಪೇರಾಗುತ್ತದೆಯೇ? ಚೆಂದದ ಮನಸ್ಸುಗಳು ಸೇರಿದ ತುಂಬಿದ ಮನೆ ಜೇನಿನ ಗೂಡಾಗಿ ಇರುತ್ತದೆಯೇ? ಭೂಮಿಗೆ ಒಟ್ಟಿಗೆ ಬಂದವರು ಒಗ್ಗಟ್ಟಾಗಿರುವರೇ? ಭಿನ್ನ ಅಭಿರುಚಿ ಇದ್ದವರು ಒಂದೇ ಸೂರಿನಡಿ ಇರಬಲ್ಲರೇ? ಒಂದೇ ಮನಸಿನ ಮಂದಿ ಮನಸು ಮುರಿದು ಹೋಗುವಂತ ಸ್ಥಿತಿಗೆ ಬಂದರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ 8ನೇ ತಾರೀಕು ರಾತ್ರಿ 9 ಕ್ಕೆ ಪ್ರಸಾರವಾಗುವ ‘ನಂದಗೋಕುಲ’ ಧಾರಾವಾಹಿಯಲ್ಲಿ ಉತ್ತರ ಸಿಗಲಿದೆ.
‘ಬಣ್ಣ ಟಾಕೀಸ್’ ನಿರ್ಮಿಸುತ್ತಿರುವ ‘ನಂದ ಗೋಕುಲ’ ಧಾರಾವಾಹಿಯ ತಾರಾಗಣದಲ್ಲಿ ಅರವಿಂದ್ ರಾವ್, ಅಮೃತಾ ನಾಯ್ಡು, ರವಿ ಚೇತನ್, ರಘು ಮಂಡ್ಯ, ಅಭಿಷೇಕ್ ದಾಸ್, ಯಶವಂತ್, ವಿಜಯ್ ಚಂದ್ರ, ಊರ್ಜಿತ ವಲ್ತಾಜೆ, ಅರ್ಚನಾ ಗಾಯಕ್ವಾಡ್, ನವ್ಯಾ, ಮೇಘಾ, ಕೃಷ್ಣಪ್ರಿಯ, ಶೈಲಜಾ ಮುಂತಾದವರು ಇದ್ದಾರೆ.