ಬೆಂಗಳೂರಿನ ಮಹದೇವಪುರದ ಎಕೆಎಂಇ ಬ್ಯಾಲೆಟ್ ಅಪಾರ್ಟ್ಮೆಂಟ್ನ 404ನೇ ಫ್ಲ್ಯಾಟ್ನಲ್ಲಿ ವಾಸಿಸುವ ತ್ರಿಪರ್ಣಾ ಎಂಬ ಮಹಿಳೆಯೊಬ್ಬಳು ತಾನು ಸಾಕಿದ್ದ ಲ್ಯಾಬ್ರಡಾರ್ ರಿಟ್ರೈವರ್ ನಾಯಿಗೆ ಚಿತ್ರಹಿಂಸೆ ನೀಡಿ ಕೊಂದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಇದಷ್ಟೇ ಅಲ್ಲ, ಜೀವಬಿಟ್ಟ ನಾಯಿಯ ಮೃತದೇಹದ ಜೊತೆಗೆ ಆಕೆ ವಾಸ ಮಾಡಿದ್ದಾಳೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಘಟನೆ ಪ್ರಾಣಿ ಪ್ರಿಯರಲ್ಲಿ ಆತಂಕ ಮತ್ತು ಕೋಪವನ್ನು ಹುಟ್ಟಿಸಿದೆ.
ಮನೆಯಿಂದ ಹೊರಹೊಮ್ಮಿದ ಕೊಳೆತ ವಾಸನೆಯಿಂದ ಕಂಗಾಲಾದ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಪಿ ಅನಿಮಲ್ ಹಸ್ಬೇಂಡ್ರಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಪ್ರಾಣಿ ಪ್ರಿಯರು ಮನೆಯೊಳಗೆ ಪ್ರವೇಶಿಸಿದಾಗ ಆಘಾತಕಾರಿ ದೃಶ್ಯವೊಂದು ಕಾದಿತ್ತು. ಒಂದು ನಾಯಿ ಜೀವಬಿಟ್ಟು ಕೊಳೆಯುತ್ತಿದ್ದರೆ, ಇನ್ನೆರಡು ಶ್ವಾನಗಳು ಆಹಾರವಿಲ್ಲದೇ ಬಳಲುತ್ತಿದ್ದವು. ತ್ರಿಪರ್ಣಾ ಈ ಶ್ವಾನಗಳನ್ನು ದುರುದ್ದೇಶಕ್ಕಾಗಿ ಬಳಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಘಟನೆ ಸಂಬಂಧ ಮಹದೇವಪುರ ಠಾಣೆಯಲ್ಲಿ ತ್ರಿಪರ್ಣಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ, ಪೊಲೀಸರು ಇನ್ನೂ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿಲ್ಲ ಎಂಬುದು ಪ್ರಾಣಿ ಪ್ರಿಯರ ಕಳವಳಕ್ಕೆ ಕಾರಣವಾಗಿದೆ. ಪ್ರಾಣಿ ಪ್ರಿಯೆ ಸಾಧನಾ ಹೆಗ್ಡೆ ಮಾತನಾಡಿ, “ಘಟನೆ ನಡೆದು ಎರಡು ದಿನಗಳಾಗಿವೆ, ಆದರೆ ಪೊಲೀಸ್ ತನಿಖೆ ಮುಂದುವರಿಯುತ್ತಿಲ್ಲ. ಇದರ ಹಿಂದೆ ಬ್ಲ್ಯಾಕ್ ಮ್ಯಾಜಿಕ್ ಉದ್ದೇಶವಿತ್ತೇ ಎಂಬ ಶಂಕೆ ಇದೆ. ಪೋಸ್ಟ್ಮಾರ್ಟಮ್ ವರದಿಯನ್ನು ಸಲ್ಲಿಸಿದ್ದೇವೆ, ಆದರೆ ಬೆಂಗಳೂರು ಪೊಲೀಸರು ಪ್ರಾಣಿಗಳ ವಿರುದ್ಧದ ಅಪರಾಧವನ್ನು ಗಂಭೀರವಾಗಿ ಪರಿಗಣಿಸುವುದು ಯಾವಾಗ?” ಎಂದು ಪ್ರಶ್ನಿಸಿದ್ದಾರೆ.
ನಾಯಿಯನ್ನು ಕೊಂದಿರುವುದರ ಹಿಂದೆ ಬ್ಲ್ಯಾಕ್ ಮ್ಯಾಜಿಕ್ ಉದ್ದೇಶವಿತ್ತೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆಯಿಂದ ಹೆಚ್ಚಿನ ಸತ್ಯಾಂಶಗಳು ಬೆಳಕಿಗೆ ಬರಬೇಕಿದೆ. ಸದ್ಯಕ್ಕೆ ಈ ಘಟನೆ ಬೆಂಗಳೂರಿನ ಜನರಲ್ಲಿ ಆತಂಕವನ್ನುಂಟು ಮಾಡಿದ್ದು, ಪ್ರಾಣಿಗಳ ಕಲ್ಯಾಣಕ್ಕಾಗಿ ಕಾನೂನಿನ ಕಟ್ಟುನಿಟ್ಟಾದ ಅನುಷ್ಠಾನಕ್ಕೆ ಒತ್ತಾಯವೂ ಕೇಳಿಬಂದಿದೆ.