ಭುವನೇಶ್ವರ: ಒಡಿಶಾದ ಗಂಜಾಂ ಜಿಲ್ಲೆಯ ಗೋಪಾಲಪುರ ಸಮುದ್ರ ತೀರಕ್ಕೆ ಸ್ನೇಹಿತನೊಂದಿಗೆ ಔಟಿಂಗ್ಗೆ ಹೋಗಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಭಾನುವಾರ (ಜೂನ್ 15) ಸಂಜೆ ನಡೆದಿದೆ. ಆರೋಪಿಗಳು ಯುವತಿಯ ಸ್ನೇಹಿತನನ್ನು ಕಟ್ಟಿಹಾಕಿ, ಆತನ ಎದುರೇ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಸಂಜೆ ಆಕೆ ಮತ್ತು ಆಕೆಯ ಸ್ನೇಹಿತ ರಾಜಾ ಉತ್ಸವ ಆಚರಿಸಲು ಗೋಪಾಲಪುರ ಬೀಚ್ಗೆ ತೆರಳಿದ್ದರು. ಏಕಾಂತ ಸ್ಥಳದಲ್ಲಿ ಕುಳಿತಿದ್ದಾಗ, ಮೂರು ಬೈಕ್ಗಳಲ್ಲಿ ಬಂದ ಸುಮಾರು 10 ಜನರ ಗುಂಪು ಅವರ ಫೋಟೊಗಳನ್ನು ತೆಗೆದು, ಆ ಫೋಟೊಗಳನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿತ್ತು.
ನಂತರ, ಆರೋಪಿಗಳು ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಆತನ ಕೈಕಾಲುಗಳನ್ನು ಕಟ್ಟಿ, ಯುವತಿಯನ್ನು ಬೀಚ್ ಸಮೀಪದ ನಿರ್ಜನ ಮನೆಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಘಟನೆಯ ನಂತರ, ಯುವತಿ ಮತ್ತು ಆಕೆಯ ಸ್ನೇಹಿತ ರಾತ್ರಿ 11 ಗಂಟೆಗೆ ಗೋಪಾಲಪುರ ಪೊಲೀಸ್ ಠಾಣೆಗೆ ತಲುಪಿ ದೂರು ದಾಖಲಿಸಿದ್ದಾರೆ.
ಗೋಪಾಲಪುರ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 70 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೆ 8 ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲರೂ 19-23 ವರ್ಷ ವಯಸ್ಸಿನವರಾಗಿದ್ದಾರೆ. ಆರೋಪಿಗಳು ಗಂಜಾಂ ಜಿಲ್ಲೆಯ ಹಿಂಜಿಲಿಕಾಟು ಪ್ರದೇಶದವರೆಂದು ಗುರುತಿಸಲಾಗಿದೆ.
“ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಬೆರ್ಹಾಂಪುರ ಎಸ್ಪಿ ಸರವಣ ವಿವೇಕ್ ತಿಳಿಸಿದ್ದಾರೆ. ಒಡಿಶಾ ಉಪ ಮುಖ್ಯಮಂತ್ರಿ ಪ್ರವತಿ ಪರಿದಾ ಈ ಘಟನೆಯನ್ನು ಖಂಡಿಸಿದ್ದಾರೆ.