ಮೇಘಾಲಯದ ಶಿಲಾಂಗ್ನಲ್ಲಿ ಹನಿಮೂನ್ಗೆಂದು ತೆರಳಿದ್ದ ಇಂದೋರ್ನ ದಂಪತಿಯ ಕಥೆಯಲ್ಲಿ ಒಂದರ ಮೇಲೊಂದು ಆಘಾತಕಾರಿ ತಿರುವುಗಳು ಬೆಳಕಿಗೆ ಬರುತ್ತಿವೆ. ರಾಜಾ ರಘುವಂಶಿಯವರ ಶವವು ಕಮರಿಯಲ್ಲಿ ನಿಗೂಢವಾಗಿ ಪತ್ತೆಯಾಗಿತ್ತು, ಆದರೆ ಪತ್ನಿ ಸೋನಮ್ ರಘುವಂಶಿ ನಾಪತ್ತೆಯಾಗಿದ್ದಳು. ಇದೀಗ ಸೋನಮ್ ಸಿಕ್ಕಿದ್ದು, ಆಕೆಯೇ ತನ್ನ ಪತಿಯನ್ನು ಕೊಲೆಗೈದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಆಕೆಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಸೋನಮ್ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ.
ಪೊಲೀಸ್ ವಿಚಾರಣೆಯಲ್ಲಿ ಸೋನಮ್ ತಾನು ತನ್ನ ಪತಿಯನ್ನು ಕೊಂದಿಲ್ಲ ಎಂದು ಗಟ್ಟಿಯಾಗಿ ಹೇಳಿಕೊಂಡಿದ್ದಾಳೆ. ಆಕೆಯ ಪ್ರಕಾರ, ಮೇಘಾಲಯದಲ್ಲಿ ತನ್ನನ್ನು ಅಪಹರಣ ಮಾಡಲಾಗಿತ್ತು. “ಗಂಡನ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ, ನನಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನನ್ನನ್ನು ಅಪಹರಣಕಾರರು ಬಿಟ್ಟುಹೋಗಿದ್ದರು,” ಎಂದು ಆಕೆ ತಿಳಿಸಿದ್ದಾಳೆ. ಅಪಹರಣಕಾರರು ತನ್ನನ್ನು ಮೇಘಾಲಯದಲ್ಲಿ ಬಿಟ್ಟುಹೋದ ಬಳಿಕ, ತಾನು ಮನೆಗೆ ಕರೆ ಮಾಡಿ ಸಂಪರ್ಕಿಸಿದ್ದೆ, ಆ ನಂತರ ಪೊಲೀಸರು ಬಂದು ಬಂಧಿಸಿದರು ಎಂದು ಸೋನಮ್ ಹೇಳಿಕೊಂಡಿದ್ದಾಳೆ.
ಆದರೆ, ಪೊಲೀಸ್ ಮೂಲಗಳ ಪ್ರಕಾರ, ಸೋನಮ್ ತನ್ನ ಪ್ರಿಯಕರನೊಂದಿಗಿನ ವಿವಾಹೇತರ ಸಂಬಂಧದಿಂದಾಗಿ ಬಾಡಿಗೆ ಹಂತಕರನ್ನು ಬಳಸಿ ಪತಿಯನ್ನು ಕೊಲೆಗೈದಿದ್ದಾಳೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಸೋನಮ್ ಜೊತೆಗೆ ಮೂವರು ಬಾಡಿಗೆ ಹಂತಕರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಘಟನೆಯಲ್ಲಿ ಸೋನಮ್ನ ಗೆಳೆಯ ರಾಜ್ ಕುಶ್ವಾಹನ ಹೆಸರೂ ಕೇಳಿಬಂದಿದೆ.
ಸೋನಮ್ನ ತಂದೆ ದೇವಿ ಸಿಂಗ್, ತಮ್ಮ ಮಗಳು ನಿರಪರಾಧಿ ಎಂದು ವಾದಿಸಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. “ನನ್ನ ಮಗಳು ಈ ಘಟನೆಯ ಬಲಿಪಶು. ಸತ್ಯವನ್ನು ಬಯಲಿಗೆಳೆಯಲು ಉನ್ನತ ತನಿಖೆಯಾಗಬೇಕು,” ಎಂದು ಅವರು ಹೇಳಿದ್ದಾರೆ. ಆದರೆ, ಪೊಲೀಸರು ಸೋನಮ್ನ ಹೇಳಿಕೆಯನ್ನು ಸಂಪೂರ್ಣವಾಗಿ ನಂಬಿಲ್ಲ. ಆಕೆಯ ದಾಖಲೆಗಳನ್ನು ಪರಿಶೀಲಿಸಿ, ತನಿಖೆಯನ್ನು ಮುಂದುವರೆಸಿದ್ದಾರೆ.