ಬೆಂಗಳೂರಿನ ಕಾಟನ್ಪೇಟೆಯಲ್ಲಿ ನಡೆದ ಲತಾ ಎಂಬ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೃತರ ಸಂಬಂಧಿ ಪುರಂದರ (42) ಮತ್ತು ಆತನ ಸ್ನೇಹಿತ ಶಿವಪ್ಪ (36) ಎಂಬ ಇಬ್ಬರನ್ನು ಬೀದರ್ನಲ್ಲಿ ಬಂಧಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಮತ್ತು ಜೂಜಿನಿಂದ ಸಾಲಗಾರರಾಗಿದ್ದ ಆರೋಪಿಗಳು, ಸಾಲ ತೀರಿಸಲು ಲತಾ ಅವರನ್ನು ಕೊಂದು ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯವರಾದ ಪುರಂದರ ಮತ್ತು ಶಿವಪ್ಪ, ಕೆಮಿಕಲ್ ಫಾರ್ಮಸ್ಯೂಟಿಕಲ್ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಮದ್ಯವ್ಯಸನಿಗಳಾಗಿದ್ದು, ಕ್ರಿಕೆಟ್ ಬೆಟ್ಟಿಂಗ್, ಜೂಜು, ಮತ್ತು ರೈಸ್ ಪುಲ್ಲಿಂಗ್ನಲ್ಲಿ ದೊಡ್ಡ ಮೊತ್ತದ ಹಣ ಕಳೆದುಕೊಂಡು ಸಾಲದ ಬಾದೆಯಲ್ಲಿದ್ದರು. ಈ ಸಾಲ ತೀರಿಸಲು ಲತಾ ಅವರ ಮನೆಯಿಂದ ಹಣ ಮತ್ತು ಚಿನ್ನಾಭರಣ ದೋಚುವ ಸಂಚು ರೂಪಿಸಿದ್ದರು.
ಪುರಂದರ, ಲತಾ ಅವರ ಹತ್ತಿರದ ಸಂಬಂಧಿಯಾಗಿದ್ದರಿಂದ, ಆತನಿಗೆ ಅವರ ಕುಟುಂಬದ ಸಂಪೂರ್ಣ ಮಾಹಿತಿ ತಿಳಿದಿತ್ತು. ಲತಾ ಅವರ ಪತಿ, ಮಗಳು, ಮತ್ತು ಮಗನ ಓಡಾಟದ ವೇಳಾಪಟ್ಟಿಯನ್ನು ತಿಳಿದಿದ್ದ ಪುರಂದರ, ಲತಾ ಒಬ್ಬರೇ ಮನೆಯಲ್ಲಿರುವ ಸಮಯವನ್ನು ಗುರಿಯಾಗಿಸಿದ. ಮೇ 26, 2025ರಂದು ಆರೋಪಿಗಳು ಬೀದರ್ನಿಂದ ಕೆಎಸ್ಆರ್ಟಿಸಿ ಬಸ್ನಲ್ಲಿ ಬೆಂಗಳೂರಿಗೆ ಬಂದು, ಕಾಟನ್ಪೇಟೆಯ ಲತಾ ಅವರ ಮನೆಗೆ ತೆರಳಿದ್ದರು. ಮಾವಿನಹಣ್ಣು ಕೊಡುವ ನೆಪದಲ್ಲಿ ಮನೆಗೆ ಪ್ರವೇಶಿಸಿದ ಆರೋಪಿಗಳನ್ನು ಲತಾ ಸತ್ಕರಿಸಿದ್ದರು. ಆದರೆ, ಆರೋಪಿಗಳು ಏಕಾಏಕಿ ಲತಾ ಅವರ ಕತ್ತು ಹಿಂಡಿ, ಉಸಿರುಗಟ್ಟಿಸಿ ಕೊಲೆ ಮಾಡಿ, 100 ಗ್ರಾಂ ಚಿನ್ನಾಭರಣ ಮತ್ತು 1.50 ಲಕ್ಷ ರೂ. ನಗದನ್ನು ದೋಚಿದ್ದಾರೆ.
ಕೊಲೆಯ ನಂತರ ಆರೋಪಿಗಳು ಕಾಟನ್ಪೇಟೆಯಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗಿ, ಬೀದರ್ಗೆ ಪರಾರಿಯಾಗಿದ್ದರು. ಪೊಲೀಸರು 150ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳ ಗುರುತನ್ನು ಪತ್ತೆಹಚ್ಚಿದರು. ಲತಾ ಅವರ ಮನೆಯಲ್ಲಿ ತಿಂಡಿಗಾಗಿ ಬಳಸಿದ ತಟ್ಟೆ-ಲೋಟಗಳ ಪುರಾವೆಯಿಂದ ಪರಿಚಿತರೇ ಕೃತ್ಯ ಎಸಗಿರುವ ಶಂಕೆ ಬಲವಾಯಿತು. ಲತಾ ಅವರ ಮಗಳ ಮದುವೆಗಾಗಿ ಮನೆಯಲ್ಲಿ ಇಟ್ಟಿದ್ದ ಹಣ ಮತ್ತು ಚಿನ್ನಾಭರಣದ ಮಾಹಿತಿ ಪುರಂದರನಿಗೆ ತಿಳಿದಿತ್ತು.
ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.