ನೇಪಾಳದಲ್ಲಿ ಜನರೇ ರಾಜ ಪ್ರಭುತ್ವವೇ ಬೇಕು. ಪ್ರಜಾಪ್ರಭುತ್ವ ಬೇಡ ಅಂತಾ ಬೀದಿಗಿಳಿದಿದ್ದಾರೆ. ಕಮ್ಯುನಿಸ್ಟ್ ಹೆಸರಲ್ಲಿ ಬಂದ ಜಾತ್ಯತೀತ ರಾಷ್ಟ್ರವೂ ನಮಗೆ ಬೇಡ, ಮೊದಲಿದ್ದ ಹಿಂದುತ್ವ ರಾಷ್ಟ್ರವೇ ಬೇಕು ಎಂದು ಹೋರಾಟಕ್ಕೆ ಧುಮುಕಿದ್ದಾರೆ. ನೇಪಾಳದಲ್ಲಿ 2008ರಲ್ಲಿ ರಾಜಪ್ರಭುತ್ವ ಅಂತ್ಯವಾಗಿತ್ತು. 17 ವರ್ಷಗಳಲ್ಲೇ ಪ್ರಜಾಪ್ರಭುತ್ವ ಭ್ರಮನಿರಸನಗೊಂಡಿರುವ ಜನ, ನೇಪಾಳ ರಾಜ ಜ್ಞಾನೇಂದ್ರ ಶಾ ಪರ ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾರತದ ಪಕ್ಕದಲ್ಲೇ ಇರೋ ಮತ್ತೊಂದು ದೇಶದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಬಿದ್ದಿದೆ. ಶ್ರೀಲಂಕಾದಲ್ಲಿ.. ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದದ್ದು ಉತ್ತಮ ಜೀವನಕ್ಕಾದರೆ, ಬಾಂಗ್ಲಾದೇಶದಲ್ಲಿ ಮುಸ್ಲಿಂ ಆಡಳಿತಕ್ಕಾಗಿ ಮುಸ್ಲಿಂ ಮೂಲಭೂತವಾದಿಗಳು ದಂಗೆಯೆದ್ದರು. ಪಾಕಿಸ್ತಾನದಲ್ಲಿ ಆಂತರಿಕ ದಂಗೆ ಇನ್ನೂ ನಿಂತಿಲ್ಲ. ಇದೀಗ ನೇಪಾಳ ಪ್ರಕ್ಷುಬ್ಧವಾಗ್ತಿದೆ.
ಹೌದು, ಅಚ್ಚರಿ ಎನಿಸಿದ್ರೂ ಜನ ರಾಜ ಪ್ರಭುತ್ವವೇ ಬೇಕು ಅಂತಾ ಕೇಳ್ತಿರೋದು ಸತ್ಯ. ಇನ್ನು ಕಮ್ಯುನಿಸ್ಟ್ ಹೆಸರಲ್ಲಿ ಬಂದ ಜಾತ್ಯತೀತ ರಾಷ್ಟ್ರವೂ ನಮಗೆ ಬೇಡ, ಮೊದಲಿದ್ದ ಹಿಂದುತ್ವ ರಾಷ್ಟ್ರವೇ ಬೇಕು ಎಂದು ಜನ ಬೀದಿಗಿಳಿದಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಟಿಯರ್ ಗ್ಯಾಸ್ ಸಿಡಿಸುತ್ತಿದ್ದಾರೆ. ಪ್ರತಿಯಾಗಿ ಜನ ಪೊಲೀಸರ ವಿರುದ್ಧ ಕಲ್ಲು ತೂರುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬೆಂಬಲಿಸಿದವರ ವಿರುದ್ಧ, ರಾಜಕೀಯ ನಾಯಕರ ಮನೆಗಳಿಗೆ ನುಗ್ಗಿ ಬೆಂಕಿ ಹಚ್ಚುತ್ತಿದ್ದಾರೆ.
ನೇಪಾಳ ಜಗತ್ತಿನಲ್ಲಿ ಅಸ್ಥಿತ್ವದಲ್ಲಿದ್ದ ಏಕೈಕ ಹಿಂದುತ್ವ ರಾಷ್ಟ್ರ. ಆದರೆ ಈ ರಾಷ್ಟ್ರ ರಾಜಕೀಯಕ್ಕೆ ಚೀನಾ ಎಂಟ್ರಿ ಕೊಟ್ಟ ನಂತರ ಪರಿಸ್ಥಿತಿ ಬದಲಾಯ್ತು. 2008ರಲ್ಲಿ ರಾಜ ಜ್ಞಾನೇಂದ್ರ ಶಾ ವಿರುದ್ಧ ದೊಡ್ಡ ಹೋರಾಟವೇ ನಡೆದು, ಕಮ್ಯುನಿಸ್ಟ್ ಸರ್ಕಾರ ಸ್ಥಾಪನೆಯಾಗಿತ್ತು.
ಆ ಘಟನೆ ದರ್ಬಾರ್ ಹತ್ಯಾಕಾಂಡ ಅಥವಾ ರಾಯಲ್ ಮಾಸ್ಕೇರ್ ಅಂತಾನೇ ಪ್ರಸಿದ್ಧ. ದೀಪೇಂದ್ರ ಶಾ, ರಾಜ, ರಾಣಿ, ತಮ್ಮ, ತಂಗಿಯರನ್ನೆಲ್ಲ ಕೊಂದು ಹಾಕಿದ್ದ. ಆ ಘಟನೆ ನಡೆದಿದ್ದು 2001ರ ಜೂನ್ 1ನೇ ತಾರೀಕು. ಅದಾದ ಬಳಿಕ ರಾಜ ಬೀರೇಂದ್ರ ಶಾನ ತಮ್ಮ ಜ್ಞಾನೇಂದ್ರ ಶಾ ಅಧಿಕಾರಕ್ಕೇರಿದ್ದರು. ಆ ಘಟನೆಯ ನಂತರ ರಾಜರ ಮನೆತನ, ರಾಜಪ್ರಭುತ್ವದ ಬಗ್ಗೆ ಜನರಲ್ಲಿ ಒಂದು ಅಸಹನೆ ಶುರುವಾಗಿತ್ತು. ಆ ಆಕ್ರೋಶವನ್ನು ಹೋರಾಟವಾಗಿ ಪರಿವರ್ತಿಸಿದ್ದ ರಾಜಕೀಯ ಸಂಘಟನೆಗಳು, ಪ್ರಜಾಪ್ರಭುತ್ವಕ್ಕಾಗಿ ದೊಡ್ಡ ಹೋರಾಟವನ್ನೇ ನಡೆಸಿದ್ದವು. ಕೊನೆಗೆ 2008ರಲ್ಲಿ ರಾಜಪ್ರಭುತ್ವ ಅಂತ್ಯವಾಗಿ, ಪ್ರಜಾಪ್ರಭುತ್ವ ಸ್ಥಾಪನೆಯಾಗಿತ್ತು. ಆದರೆ ಕೇವಲ 17 ವರ್ಷಗಳಲ್ಲಿ ಪ್ರಜಾಪ್ರಭುತ್ವ ಬೇಡ, ರಾಜಪ್ರಭುತ್ವವೇ ಬೇಕು, ಜಾತ್ಯತೀತ ಸರ್ಕಾರ ಬೇಡ, ಹಿಂದುತ್ವವಾದಿ ಸರ್ಕಾರವೇ ಬೇಕು ಎಂದು ಪ್ರತಿಭಟಿಸಿದ್ದ ಜನರೇ ಕೂಗುತ್ತಿದ್ದಾರೆ.
ಹೋರಾಟದ ಹಿಂದೆ ರಾಜನಾಗಿದ್ದ ಜ್ಞಾನೇಂದ್ರ ಶಾ ಕೈವಾಡ ಇದೆ ಎಂಬ ಆರೋಪಗಳೂ ಇವೆ. ತನ್ನ ಅಧಿಕಾರ ಕಿತ್ತುಕೊಂಡ ಸರ್ಕಾರದ ವಿರುದ್ಧ ಸಂಚು ರೂಪಿಸಿದ್ದಾರೆ ಎಂಬ ಸಂಶಯ ಸರ್ಕಾರದ್ದು. ಪರಿಸ್ಥಿತಿ ನಿಯಂತ್ರಣಕ್ಕೆ ಈಗ ನೇಪಾಳ ಮಿಲಿಟರಿ ಕೂಡಾ ಎಂಟ್ರಿ ಕೊಟ್ಟಿದೆ. ಈಗಾಗಲೇ ರಕ್ತ ಸಿಕ್ತ ಹೋರಾಟದಲ್ಲಿ ಹಲವು ಜನ ಸತ್ತಿದ್ದಾರೆ.
ಭಾರತದ ಜೊತೆ ಗಡಿ ಹಂಚಿಕೊಂಡಿರುವ ಯಾವುದೇ ದೇಶದಲ್ಲಿ ಆಂತರಿಕ ದಂಗೆ ಎದ್ದರೆ ಅದು ಸೃಷ್ಟಿಸುವ ಅನಾಹುತವೇ ಬೇರೆ. ನೇಪಾಳದಲ್ಲಿ ಪರಿಸ್ಥಿತಿ ಹದಗೆಟ್ಟರೆ ಭಾರತಕ್ಕೆ ಟೆನ್ಷನ್ ತಪ್ಪಿದ್ದಲ್ಲ. ಏಕೆಂದರೆ 2008ರ ನಂತರ ನೇಪಾಳ, ನೂರಾರು ಪಾಕ್ ಮೂಲದ ಭಯೋತ್ಪಾದಕರಿಗೆ ಆಶ್ರಯತಾಣವಾಗಿದೆ. ನೇಪಾಳ ಮತ್ತು ಭಾರತದ ಮಧ್ಯೆ ಓಡಾಡುವವರಿಗೆ ವೀಸಾ ಬೇಕಿಲ್ಲ. ಪಾಸ್ ಪೋರ್ಟ್ ಕೂಡಾ ಅಗತ್ಯವಿಲ್ಲ. ಗಡಿಯಲ್ಲಿ ತಮ್ಮ ತಮ್ಮ ದೇಶಗಳ ಗುರುತಿನ ಪತ್ರ ತೋರಿಸಿದರೆ ಸಾಕು,.. ಹೀಗಾಗಿ ಗಡಿಯಲ್ಲಿ ಅಲರ್ಟ್ ಘೋಷಣೆಯಾಗಿದೆ.