ಅನ್ ಸೋಲ್ಡ್ ಆಟಗಾರನಾಗಿದ್ದ ಹುಡುಗನೇ.. ಅನ್ ಸ್ಟಾಪಬಲ್ ಪ್ಲೇಯರ್. ಯಾರಿಗೂ ಬೇಡವಾಗಿದ್ದ ಹುಡುಗನೇ ಈಗ ಟ್ರಂಪ್ ಕಾರ್ಡ್. ಇನ್ನು ಗೇಮ್ ಮುಗೀತು ಅಂದ್ಕೊಂಡಿದ್ದ ಹುಡುಗನ ಮೇಲೆ ಕಣ್ಣಿಟ್ಟಿದ್ದು ಭಾರತದ ವೇಗದ ಬೌಲಿಂಗ್ ಸ್ಟಾರ್ ಜಹೀರ್ ಖಾನ್. ಇದು ಶಾರ್ದೂಲ್ ಠಾಕೂರ್ ಸ್ಟೋರಿ.
ಇಡೀ ಐಪಿಎಲ್ನಲ್ಲಿ ಎಲ್ಲ ಟೀಂಗಳದ್ದೂ ಒಂಥರಾ ಆಟವಾದ್ರೆ, ಸನ್ ರೈಸರ್ ಟೀಮಿನವರದ್ದೇ ಒಂದು ರೀತಿಯ ಆಟ. ಬ್ಯಾಟು ಹಿಡಿದರೆ ಸಾಕು, ಮೈಮೇಲೆ ರಾಕ್ಷಸರು ಬಂದಂತೆ ಬ್ಯಾಟ್ ಬೀಸುವ ಆಟಗಾರರೇ ತುಂಬಿ ತುಳುಕುತ್ತಿರೋ ಸನ್ ರೈಸರ್ಸ್ ಟೀಂ. ಐಪಿಎಲ್ನ ಎಲ್ಲ ಟೀಮಿನವರ ತಲೆ ಕೆಡಿಸಿಬಿಟ್ಟಿದ್ದಾರೆ.
ಟ್ರಾವಿಸ್ ಹೆಡ್, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್.. ಒಬ್ಬರಾ. ಇಬ್ಬರಾ.. ಎಲ್ಲರೂ ಬಾಹುಬಲಿಗಳೇ. ಅವರ ಕಣ್ಣಿಗೆ ಕಾಣೋವ್ರೆಲ್ಲ ಕಾಲಕೇಯನ ಸೈನ್ಯದಂತೆಯೇ ಕಾಣ್ತಾರೆ. ಹೊಡಿ.. ಹೊಡಿ.. ಹೊಡಿ..
ಟಿ-20ಯಲ್ಲಿ 3 ಬಾರಿ 300 ರನ್ ಟಾರ್ಗೆಟ್ ಹತ್ತಿರ ಹೋಗಿರೋ ಸನ್ ರೈಸರ್ಸ್ ತಂಡವನ್ನ ಕಟ್ಟಿ ಹಾಕೋದು ಅಷ್ಟು ಸುಲಭದ ಮಾತಲ್ಲ. ಅಂತಹ ತಂಡವನ್ನ ಕಟ್ಟಿ ಹಾಕಿದ್ದು ಶಾರ್ದೂಲ್ ಠಾಕೂರ್. ಲಕ್ನೋ ಜೈಂಟ್ಸ್ ತಂಡದಲ್ಲಿ ಆಡ್ತಿರೋ ಶಾರ್ದೂಲ್, ಈ ಬಾರಿಯ ಐಪಿಎಲ್ನಲ್ಲಿ ಅನ್ ಸೋಲ್ಡ್ ಆಟಗಾರನಾಗಿದ್ರು ಅಂದ್ರೆ ಸರ್ ಪ್ರೈಸ್. ಆದರೆ ಸರ್ ಪ್ರೈಸ್ ಆಗಿ ತಂಡಕ್ಕೆ ಎಂಟ್ರಿ ಕೊಟ್ಟ ಶಾರ್ದೂಲ್ ಠಾಕೂರ್, ಸನ್ ರೈಸರ್ಸ್ ತಂಡವನ್ನ ನಡುಗಿಸಿದ್ದಾರೆ.
4 ಓವರ್ ಬೌಲ್ ಮಾಡಿ, ಕೇವಲ 34 ರನ್ ಕೊಟ್ಟು 4 ವಿಕೆಟ್ ಪಡೆಯೋದು ಅಂದ್ರೆ ಸುಮ್ಮನೆ ಮಾತಲ್ಲ.
ಮೂರನೇ ಓವರಿನ ಮೊದಲ ಬಾಲ್ನಲ್ಲೇ ರಾಕ್ಷಸ ಹೊಡೆತಗಳ ಆಟಗಾರ ಅಭಿಷೇಕ್ ಶರ್ಮಾ, ನಿಕೋಲಸ್ ಪೂರನ್ಗೆ ಕ್ಯಾಚ್ ಕೊಟ್ರೆ, ನೆಕ್ಸ್ಟ್ ಬಾಲಲ್ಲೇ ಫಸ್ಟ್ ಮ್ಯಾಚ್ ಸೆಂಚುರಿ ಸ್ಟಾರ್ ಇಶಾನ್ ಕಿಶನ್ ಡಕ್ ಔಟ್ ಆದ್ರು. ಇನ್ನು ಕರ್ನಾಟಕದ ಅಭಿನವ್ ಮನೋಹರ್ ಆರ್ಭಟಕ್ಕೂ ಠಾಕೂರ್ ಅವಕಾಶ ಕೊಡಲಿಲ್ಲ. ಅಷ್ಟೆ ಅಲ್ಲ, ಮಿಸ್ಟರಿ ಫಾಸ್ಟ್ ಬೌಲರ್ ಶಮಿಯ ವಿಕೆಟ್ ಕೂಡಾ ಕಬಳಿಸಿದ್ರು.
ಆಕ್ಚುವಲಿ, ಶಾರ್ದೂಲ್ ಠಾಕೂರ್, ಈ ವರ್ಷದ ಐಪಿಎಲ್ ಬಿಡ್ಡಿಂಗ್ನಲ್ಲಿ ಅನ್ ಸೋಲ್ಡ್ ಆಗಿದ್ರು. ಇಂಗ್ಲೆಂಡಿನಲ್ಲಿ ಕೌಂಟಿ ಕ್ರಿಕೆಟ್ ಆಡೋಕೆ ರೆಡಿಯಾಗ್ತಿದ್ದ ಶಾರ್ದೂಲ್ಗೆ ಜಹೀರ್ ಖಾನ್ ಫೋನ್ ಮಾಡ್ತಾರೆ. ಪ್ರಾಕ್ಟೀಸ್ ಬಿಡಬೇಡ, ಒಂದೊಳ್ಳೆ ನ್ಯೂಸ್ ಕೊಡ್ತೀನಿ, ರೆಡಿಯಾಗಿರು ಅಂತಾರೆ. ಜಹೀರ್ ಮಾತಿನ ಮೇಲೆ ಭರವಸೆ ಇಟ್ಟು, ಕೌಂಟಿ ಕ್ರಿಕೆಟ್ಟಿಗೆ ಹೋಗದೆ ಉಳಿದ ಶಾರ್ದೂಲ್, ಈಗ ಸದ್ಯಕ್ಕೆ ಪರ್ಪಲ್ ಕ್ಯಾಪ್ ಕಿಂಗ್. ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಶಾರ್ದೂಲ್ ಠಾಕೂರ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು 2 ಪಂದ್ಯಗಳಲ್ಲಿ 6 ವಿಕೆಟ್ಗಳನ್ನು ಪಡೆದಿದ್ದಾರೆ.
ಶಾರ್ದೂಲ್ ಬೌಲಿಂಗ್ ಎಫೆಕ್ಟಿನಿಂದಾಗಿ.. ಕಟು ಟೀಕೆಗೆ ಗುರಿಯಾಗಿದ್ದ ರಿಷಬ್ ಪಂತ್ ಕೂಡಾ ರಿಲೀಫ್ ಆಗಿದ್ದಾರೆ. ಲಕ್ನೋ ತಂಡ ಗೆದ್ದು ನಿಟ್ಟುಸಿರು ಬಿಟ್ಟಿದೆ.
ಶಾರ್ದೂಲ್ ಠಾಕೂರ್, ಜಹೀರ್ ಖಾನ್ ಅವರಿಗಷ್ಟೇ ಅಲ್ಲ, ವೇಗದ ಬೌಲರ್ ಮೊಹ್ಸಿನ್ ಖಾನ್ಗೂ ಥ್ಯಾಂಕ್ಸ್ ಹೇಳ್ಬೇಕು. ಯಾಕಂದ್ರೆ, ಮೊಹ್ಸಿನ್ ಖಾನ್ ಇಂಜುರಿ ಆದ ಕಾರಣಕ್ಕೇ ಶಾರ್ದೂಲ್ ಠಾಕೂರ್ ಅವರಿಗೆ ಲಕ್ನೋ ಟೀಂ ಡೋರ್ ಓಪನ್ ಆಗಿದ್ದು.
ಅಂದಹಾಗೆ ಶಾರ್ದೂಲ್ ಅವರನ್ನ ಲಾರ್ಡ್ ಶಾರ್ದೂಲ್ ಅಂತಾನೇ ಕರೀತಾರೆ. ಶಾರ್ದೂಲ್ ಕೇವಲ ಬ್ಯಾಟ್ಸ್ಮನ್ ಅಲ್ಲ. ಬೌಲರೂ ಅಲ್ಲ. ಆಲ್ ರೌಂಡರ್. ಟೀಂ ಇಂಡಿಯಾವನ್ನ ಹಲವು ಕಷ್ಟದ ಪರಿಸ್ಥಿತಿಗಳಲ್ಲಿ ಗೆಲ್ಲಿಸಿಕೊಂಡು ಬಂದಿರೋ ಹುಡುಗ. ಮುಂಬೈ ರಣಜಿ ಟೀಂನಲ್ಲಿ ಅದ್ಭುತ ಆಟವಾಡಿದ್ದ ಶಾರ್ದೂಲ್, ನಂತರ ಪಳಗಿದ್ದು ಧೋನಿ ಕೈಗಳಲ್ಲಿ. ಧೋನಿ ಜೊತೆಯಲ್ಲಿ ಪಳಗಿದ್ದರೂ, ಹುಡುಗನಿಗೆ ಶಿಸ್ತಿಲ್ಲ ಮತ್ತು ತಿಂಡಿಪೋತ ಅನ್ನೋದೇ ದೊಡ್ಡ ಪ್ರಾಬ್ಲಂ. ಆದರೆ.. ಈಗ ದೊಡ್ಡ ಹಿನ್ನಡೆಯ ನಂತರ ಕಂಬ್ಯಾಕ್ ಮಾಡಿರೋ ಶಾರ್ದೂಲ್, ತಾನೇಕೆ ಲಾರ್ಡ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.