ಯತ್ನಾಳ್ ಉಚ್ಚಾಟನೆ ರಾಜ್ಯ ರಾಜಕೀಯದ ದಿಕ್ಕು ಬದಲಿಸುತ್ತಾ..? ಹೀಗೊಂದು ಪ್ರಶ್ನೆ ಉದ್ಭವವಾಗಿದೆ. ಏಕೆಂದರೆ ದೇಶದ ರಾಜಕೀಯದಲ್ಲಿ ಹಲವು ಉಚ್ಚಾಟನೆಗಳು ನಡೆದಿವೆ. ಅವು ಐತಿಹಾಸಿಕ ತಿರುವಿಗೆ ಸಾಕ್ಷಿಯಾಗಿವೆ.
ಪಕ್ಷದಿಂದ ಉಚ್ಚಾಟನೆ ಎಂದರೆ.. ಬೇರೇನಲ್ಲ.. ಅವರು ಇನ್ನು ಮುಂದೆ ಆ ಪಕ್ಷದಲ್ಲಿ ಇರೋದಿಲ್ಲ. ಸದಸ್ಯರಾಗಿರೋದಿಲ್ಲ. ಅವರಿಗೆ ಬೇರೆ ಪಕ್ಷಕ್ಕೆ ಹೋಗುವುದಕ್ಕೆ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ. ಆದರೆ, ಯತ್ನಾಳ್ ಹಿಂದುತ್ವವಾದಿ. ಅವರಿಗೆ ಸದ್ಯಕ್ಕೆ ಬಿಜೆಪಿ ಬಿಟ್ಟರೆ ಬೇರೆ ಆಯ್ಕೆಯೂ ಇಲ್ಲ. ಇಷ್ಟಕ್ಕೂ ದೇಶದ ದಿಕ್ಕನ್ನೇ ಬದಲಿಸಿದ ಉಚ್ಚಾಟನೆಗಳ ಇತಿಹಾಸವನ್ನೊಂದ್ಸಲ ನೋಡ್ತಾ ಹೋಗೋಣ.
ಐತಿಹಾಸಿಕ ಉಚ್ಚಾಟನೆಗಳು:
1969 : ಇಂದಿರಾ ಗಾಂಧಿ ಉಚ್ಚಾಟನೆ
ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಿದ್ದರು. ಆಗಿನ್ನೂ ಕಾಂಗ್ರೆಸ್ ಚಿಹ್ನೆ ಹಸ್ತವಾಗಿರಲಿಲ್ಲ. ಚರಕ ನೂಲುತ್ತಿದ್ದ ಮಹಿಳೆ. ಆಗ ಬೆಂಗಳೂರಿನ ಗಾಜಿನ ಮನೆಯಲ್ಲಿ ಸಭೆ ಸೇರಿದ್ದ ಆಗಿನ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ, ಕಾಮರಾಜ್, ಸಂಜೀವ್ ರೆಡ್ಡಿ, ಮೊರಾರ್ಜಿ ದೇಸಾಯಿ ಅವರೆಲ್ಲ ಒಟ್ಟು ಸೇರಿ ಇಂದಿರಾ ಗಾಂಧಿ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು.
ಮುಂದೆ ಇಂದಿರಾ ಗಾಂಧಿಯವರದ್ದೇ ಒಂದು ಕಾಂಗ್ರೆಸ್ ಆಯ್ತು. ಕಾಂಗ್ರೆಸ್ ಕಮಿಟಿಯಲ್ಲಿದ್ದ 705 ಸದಸ್ಯರ ಪೈಕಿ, 446 ಕಾಂಗ್ರೆಸ್ಸಿಗರು ಇಂದಿರಾ ಪರ ನಿಂತರೆ, ಮಿಕ್ಕವರು ಕಾಮರಾಜ್, ಮೊರಾರ್ಜಿ ದೇಸಾಯಿ ಅವರ ಪರ ನಿಂತರು. ಅವರದ್ದೇ ಒಂದು ಕಾಂಗ್ರೆಸ್ ಪಕ್ಷವಾಯ್ತು. ಮೂಲ ಕಾಂಗ್ರೆಸ್ ಇಬ್ಭಾಗವಾಯ್ತು. ಈಗ ಇರುವುದು ಇಂದಿರಾ ಗಾಂಧಿ ಸ್ಥಾಪಿಸಿದ್ದ ಕಾಂಗ್ರೆಸ್ ಪಕ್ಷ.
ಆ ಉಚ್ಚಾಟನೆಯ ನಂತರ, ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಗಾಂಧಿ ಪ್ರಾಬಲ್ಯವೂ ಹೆಚ್ಚಿತು. ಜೊತೆಗೆ ಇಂದಿರಾ ಗಾಂಧಿ ಅವರ ವ್ಯಕ್ತಿತ್ವವೂ ಬದಲಾಯ್ತು. ಯಾರನ್ನೂ ನಂಬದ ಸ್ಥಿತಿಗೆ ತಲುಪಿದ ಇಂದಿರಾ, ರಾಷ್ಟ್ರ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ರು.
ಎಮರ್ಜೆನ್ಸಿ ನಂತರ ಸೋತಿದ್ದ ಇಂದಿರಾ ಗಾಂಧಿ, ಕರ್ನಾಟಕದ ಚಿಕ್ಕಮಗಳೂರಿನಿಂದ ಸ್ಪರ್ಧೆ ಮಾಡಿ ಗೆಲ್ಲೋದಕ್ಕೆ ಇದೂ ಒಂದು ಕಾರಣ ಎನ್ನಬಹುದು.
1979 : ಕಾಂಗ್ರೆಸ್ನಿಂದ ದೇವರಾಜ ಅರಸು ಉಚ್ಚಾಟನೆ
ಇನ್ನು ಕರ್ನಾಟಕದ ರಾಜಕೀಯಕ್ಕೆ ಬಂದರೆ, ಅರಸು ಅವರನ್ನ ಆದರ್ಶವಾಗಿ ಹೇಳ್ಕೊಳ್ತಾರೆ. ಆದರೆ, ಅದೇ ಅರಸು ಅವರನ್ನು ಇಂದಿರಾ ಗಾಂಧಿ ಪಕ್ಷದಿಂದ ಉಚ್ಚಾಟಿಸಿದ್ದರು. ಅದು 1979ರಲ್ಲಿ ನಡೆದಿತ್ತು. ಅರಸು ಸಂಪುಟದಲ್ಲಿ ಮಂತ್ರಿಯಾಗಿದ್ದ ಬಂಗಾರಪ್ಪ ನೇತೃತ್ವದಲ್ಲೇ ಒಂದು ಸಮಿತಿ ಮಾಡಿ, ಆ ಸಮಿತಿಯಿಂದ ಶಿಫಾರಸು ಮೇರೆಗೆ ಅರಸು ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅರಸು ಜೊತೆಯಲ್ಲಿದ್ದವರೆಲ್ಲ ಇಂದಿರಾ ಕಾಂಗ್ರೆಸ್ಸಿನ ಜೊತೆಗೆ ನಿಂತರು. ಅದು ಅರಸು ರಾಜಕೀಯ ಪತನದ ಆರಂಭವೂ ಹೌದು.
1984 : ಬಿಜೆಪಿಯಿಂದ ಎಕೆ ಸುಬ್ಬಯ್ಯ ಉಚ್ಚಾಟನೆ
ಕರ್ನಾಟಕದಲ್ಲಿ 1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಸ್ಥಿತ್ವಕ್ಕೆ ಬಂದಿತ್ತು. ಬಿಜೆಪಿ ಬೇರು ಬಿಡೋಕೆ ಆರಂಭಸಿತ್ತಷ್ಟೇ. ಆಗ ಅದೇ ಮೊದಲ ಬಾರಿಗೆ ಬಿಜೆಪಿಯಿಂದ 18 ಶಾಸಕರು ಗೆದ್ದು ಬಂದಿದ್ದರು. ಆಗ ಎಕೆ ಸುಬ್ಬಯ್ಯ ಅವರು ಆರ್ಎಸ್ಎಸ್ ನಾಯಕರನ್ನು ಬಹಿರಂಗವಾಗಿ ಟೀಕಿಸಿದ ಕಾರಣಕ್ಕೆ, ಉಚ್ಚಾಟನೆಯಾಗಿದ್ದರು. ಆಗ ಎಲ್ ಕೆ ಅಡ್ವಾಣಿ ಬೆಂಗಳೂರಿಗೆ ಬಂದು ಎಕೆ ಸುಬ್ಬಯ್ಯ ಅವರನ್ನುಉಚ್ಚಾಟನೆ ಮಾಡಿದ್ದರು. ಬಿಬಿ ಶಿವಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. ಎಕೆ ಸುಬ್ಬಯ್ಯ, ಕನ್ನಡ ನಾಡು ಪಕ್ಷ ಸ್ಥಾಪಿಸಿದ್ದು ಆಗಲೇ.
1997 : ಜನತಾದಳದಿಂದ ಹೆಗಡೆ ಉಚ್ಚಾಟನೆ
ಅದು ದೇವೇಗೌಡರು ಪ್ರಧಾನಿಯಾದ ವರ್ಷ. ಲೋಕಸಭೆಯಲ್ಲಿ ವಿಶ್ವಾಸಮತ ಸಾಬೀತಾದ ಮರುದಿನವೇ ರಾಮಕೃಷ್ಣ ಹೆಗಡೆ ಅವರನ್ನು ಜನತಾ ದಳದಿಂದ ಉಚ್ಚಾಟನೆ ಮಾಡಲಾಗಿತ್ತು.
ಆಗ ದೇವೇಗೌಡರ ಜೊತೆ ನಿಂತಿದ್ದವರು ಸಿದ್ದರಾಮಯ್ಯ, ಜೆಹೆಚ್ ಪಟೇಲ್ ಮತ್ತಿತರ ನಾಯಕರು. ಆದರೆ ಕೆಲವೇ ವರ್ಷಗಳಲ್ಲಿ ಜನತಾದಳ ಇಬ್ಭಾಗವಾಗಿ, ಜಾತ್ಯತೀತ ಜನತಾ ದಳ ಹುಟ್ಟಿತು.
2005 : JDSನಿಂದ ಸಿದ್ದರಾಮಯ್ಯ ಉಚ್ಚಾಟನೆ
ಇನ್ನು 2005ರಲ್ಲಿ ದೇವೇಗೌಡರು ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಉದ್ಭವವಾಯ್ತು. ಆಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಅಹಿಂದ ಸಮಾವೇಶದ ಕಾರಣ ನೀಡಿ ಉಚ್ಚಾಟನೆ ಮಾಡಲಾಗಿತ್ತು. ಅದಾದ ನಂತರ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ, ಎರಡು ಬಾರಿ ಸಿಎಂ ಆಗಿ ಇತಿಹಾಸ ಸೃಷ್ಟಿಸಿದರು.
ಹೀಗೆ ದೇಶದಲ್ಲಿ ಸೃಷ್ಟಿಯಾದ 5 ರಾಜಕೀಯ ಉಚ್ಚಾಟನೆಗಳಿಗೆ, 5 ರಾಜಕೀಯ ಮನ್ವಂತರಗಳಿಗೆ, 5 ರಾಜಕೀಯ ಕ್ರಾಂತಿಗಳಿಗೆ, 5 ರಾಜಕೀಯ ಹೊಸ ಹುಟ್ಟುಗಳಿಗೆ ಕರ್ನಾಟಕವೇ ಕಾರಣವಾಗಿದೆ. ಇವು ಉಚ್ಚಾಟನೆಯಿಂದ ಸೃಷ್ಟಿಯಾದ ಇತಿಹಾಸಗಳು. ಈಗ ಬಿಜೆಪಿಯಿಂದ ಮೂರನೇ ಬಾರಿಗೆ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆಯಾಗಿದ್ದಾರೆ.
ಒಂದೊಂದು ಉಚ್ಚಾಟನೆಗಳೂ ಒಂದೊಂದು ಇತಿಹಾಸ ಬರೆದಿವೆ. ಹೊಸ ಇತಿಹಾಸ ಬರೆದಿದ್ದು ಇಂದಿರಾ ಗಾಂಧಿ ಮತ್ತು ಸಿದ್ದರಾಮಯ್ಯ ಮಾತ್ರ. ಉಳಿದಂತೆ ದೇವರಾಜ ಅರಸು, ಎಕೆ ಸುಬ್ಬಯ್ಯನವರಿಗೆ ಅದು ಸಾಧ್ಯವಾಗಲಿಲ್ಲ. ರಾಮಕೃಷ್ಣ ಹೆಗಡೆ, ರಾಜ್ಯದಲ್ಲಿ ಬಿಜೆಪಿಗೆ ಭದ್ರ ನೆಲೆ ಸಿಗುವುದಕ್ಕೆಕ ಕಾರಣರಾದು. ತಮ್ಮ ಉಚ್ಚಾಟನೆಯಿಂದ ಯತ್ನಾಳ್ ಹೊಸ ಇತಿಹಾಸ ಬರೆಯುತ್ತಾರೋ.. ನೇಪಥ್ಯಕ್ಕೆ ಸರಿಯುತ್ತಾರೋ.. ನಿರ್ಧಾರ ಮಾಡಬೇಕಿರುವುದು ಸ್ವತಃ ಯತ್ನಾಳ್.