ವೆಲ್ಲೂರು, ಸೆಪ್ಟೆಂಬರ್ 11: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚ್ನ ಕಾಂಕ್ರೀಟ್ ಛಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟಿದ್ದು, 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ.
ಚರ್ಚ್ನ ಮೇಲ್ಛಾವಣಿಗೆ ಕಾಂಕ್ರೀಟ್ ಹಾಕುವ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಛಾವಣಿಯ ಭಾರವನ್ನು ತಾತ್ಕಾಲಿಕವಾಗಿ ತಡೆದು ನಿಲ್ಲಿಸಲು ಅಳವಡಿಸಿದ್ದ ಸೆಂಟರಿಂಗ್ ಕಂಬಗಳು ಭಾರ ತಡೆಯಲಾಗದೆ ಕುಸಿದಿದ್ದರಿಂದ ಕಾಂಕ್ರೀಟ್ ಛಾವಣಿ ಕುಸಿದು ಬಿದ್ದಿದೆ ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕಾಂಕ್ರೀಟ್ ಅವಶೇಷಗಳು ಮತ್ತು ಕಬ್ಬಿಣದ ರಾಡ್ಗಳ ನಡುವೆ ಸಿಲುಕಿದ್ದ ಕಾರ್ಮಿಕರನ್ನು ಕಾರ್ಯಾಚರಣೆ ನಡೆಸಿ ಹೊರತೆಗೆದು ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಬೆಂಗಳೂರಿನ ಕಟ್ಟಡ ಗುತ್ತಿಗೆದಾರ ಜಾನ್ (39), ಆಂಧ್ರಪ್ರದೇಶದ ಎಮ್ಯಾನುಯೆಲ್ (45) ಹಾಗೂ ಸ್ಯಾಮ್ಯುಯೆಲ್ (45) ಎಂದು ಗುರುತಿಸಲಾಗಿದೆ. ಎಮ್ಯಾನುಯೆಲ್ ಅವರನ್ನು ಅವಶೇಷಗಳಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಸ್ಯಾಮ್ಯುಯೆಲ್ ಅವರ ಮೃತದೇಹವನ್ನು ಅವಶೇಷಗಳಡಿ ಪತ್ತೆಹಚ್ಚಿ ಹೊರತೆಗೆಯಲಾಗಿದೆ.
30 ಸದಸ್ಯರ NDRF ತಂಡದಿಂದ ರಕ್ಷಣಾ ಕಾರ್ಯಾಚರಣೆ
ಇನ್ನೂ ಕೆಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ತಡರಾತ್ರಿವರೆಗೂ ಮುಂದುವರಿಯಿತು. 30 ಸದಸ್ಯರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವನ್ನು ಸ್ಥಳಕ್ಕೆ ನಿಯೋಜಿಸಲಾಗಿದ್ದು, ಅರಕ್ಕೋಣಂ ಘಟಕದ ನಾಲ್ಕು ಸ್ನಿಫರ್ ನಾಯಿಗಳ ನೆರವನ್ನೂ ಪಡೆಯಲಾಗಿದೆ.
ಆಂಧ್ರಪ್ರದೇಶದ ಗಡಿ ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಆಗಮಿಸಿದ ಪೊಲೀಸ್ ತಂಡವೂ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದೆ. ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದ್ದು, ಸಿಲುಕಿರುವವರಿಗಾಗಿ ಶೋಧ ನಡೆಸಲಾಗುತ್ತಿದೆ.
ಬಿರಿಯಾನಿ ತಿನ್ನಲು ಹೊರಹೋದ ಕಾರ್ಮಿಕರು ಪಾರು
ಅಪಘಾತಕ್ಕೂ ಮುನ್ನ ಹಲವು ಕಾರ್ಮಿಕರು ಕಟ್ಟಡದ ಸಮೀಪದಿಂದ ಬಿರಿಯಾನಿ ತಿನ್ನಲು ಹೊರಗೆ ತೆರಳಿದ್ದರು ಎನ್ನಲಾಗಿದೆ. ಛಾವಣಿ ಕುಸಿದ ಸಂದರ್ಭದಲ್ಲಿ ಅವರು ಕಟ್ಟಡದೊಳಗೆ ಇರದ ಕಾರಣ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಒಂದೇ ವೇಳೆ ಎಲ್ಲ ಕಾರ್ಮಿಕರು ಕಟ್ಟಡದೊಳಗೆ ಇದ್ದಿದ್ದರೆ, ದುರಂತದ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತಿತ್ತು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿರ್ಮಾಣ ಕಾಮಗಾರಿಯಲ್ಲಿ ಬಳಸಲಾದ ಸಾಮಗ್ರಿಗಳ ಗುಣಮಟ್ಟ, ಸೆಂಟರಿಂಗ್ ವ್ಯವಸ್ಥೆ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಲಾಗಿದೆ. ಕಟ್ಟಡ ನಿರ್ಮಾಣದ ವೇಳೆ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿತ್ತೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.





