ಬಸನಗೌಡ ಪಾಟೀಲ ಯತ್ನಾಳ್. ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಹೆಸರುವಾಸಿಯಾಗಿದ್ದ ಉತ್ತರ ಕರ್ನಾಟಕದ ಲೀಡರ್. ಇವರೀಗ 3ನೇ ಬಾರಿಗೆ ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ. ಉಚ್ಚಾಟನೆಯಲ್ಲೂ ಹ್ಯಾಟ್ರಿಕ್ ಸಾಧಿಸಿರುವ ಯತ್ನಾಳ್ ಅವರಿಗೆ ವಿಲನ್ ಯಾರು.. ಯತ್ನಾಳ್ ಅವರ ಮಿತ್ರರು ಯಾರು.. ಎಂದು ಹುಡುಕಿದರೆ.. ಯತ್ನಾಳ್ ಅವರಿಗೆ ಯಾರೂ ಮಿತ್ರರಲ್ಲ. ಯಾರೂ ಶತ್ರುವೂ ಅಲ್ಲ ಅಂತಾ ಹೇಳ್ಬಹುದು. ಆದರೆ ಯತ್ನಾಳ್ ಅವರಿಗೆ ಯತ್ನಾಳ್ ಅವರೇ ಶತ್ರು ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ.
ಯತ್ನಾಳ್ಗೆ ಯತ್ನಾಳ್ ಶತ್ರು..!
ಯತ್ನಾಳ್ ಅವರಿಗೀಗ 61 ವರ್ಷ ವಯಸ್ಸು. ರಾಜಕೀಯದಲ್ಲಿ ಅದು ಮಾಗಿದ ಕಾಲ. ಯತ್ನಾಳ್ ವಾಜಪೇಯಿಯಂತ ಮುತ್ಸದ್ಧಿಯ ಸಂಪುಟದಲ್ಲಿ ಸಚಿವರಾಗಿದ್ದವರು. ಆದರೆ ಯತ್ನಾಳ್ ಅವರ ಹೆಜ್ಜೆ, ಯೋಚನೆ, ಅರಿತವರು ಯಾರೂ ಇಲ್ಲ. ಬಹುಶಃ ಅವರಿಗೂ ಗೊತ್ತಿಲ್ಲ ಎನ್ನೋದೇ ಯತ್ನಾಳ್ ಅವರ ಈ ಸ್ಥಿತಿಗೆ ಕಾರಣ.
ಯತ್ನಾಳ್ ಉಚ್ಚಾಟನೆ ಭಾಗ 01 : 2009
ಯಡಿಯೂರಪ್ಪ ವಿರುದ್ಧ ಸಿಡಿಸಿಡಿ..!ಬಿಜೆಪಿ ನಾಯಕರ ವಿರುದ್ಧ ಬೆಂಕಿ ಮಳೆ..!
ಆಗ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿ ನಿಂತಿದ್ದ ಯತ್ನಾಳ್, ಬಿಜೆಪಿ ಉಳಿಸಿ ಅನ್ನೋ ಅಭಿಯಾನ ಕೈಗೊಂಡಿದ್ದರು. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಬಿಜೆಪಿ ಅಧ್ಯಕ್ಷರಾಗಿದ್ದ ಸದಾನಂದಗೌಡ, ಪ್ರಹ್ಲಾದ್ ಜೋಷಿ.. ಎಲ್ಲರ ವಿರುದ್ಧವೂ ಕಿಡಿ ಕಾರುತ್ತಿದ್ದರು. ನಾಲಗೆ ಹಿಡಿತದಲ್ಲಿ ಇರಲಿಲ್ಲ. ಕೊನೆಗೆ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು.
2010ರಲ್ಲಿ ಜೆಡಿಎಸ್ ಸೇರಿದ್ದ ಯತ್ನಾಳ್..!
2013ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಸೋಲು,2013ರಲ್ಲಿ ಜೆಡಿಎಸ್ ಸೇರಿ, ವಿಜಯಪುರ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದ ಯತ್ನಾಳ್, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತಿದ್ದರು. ಆ ಚುನಾವಣೆಯಲ್ಲಿ ಯತ್ನಾಳ್, ಬಿಜೆಪಿ ವಿರುದ್ಧ, ಮೋದಿ ವಿರುದ್ಧ ಅಷ್ಟೇ ಏಕೆ, ಮುಸ್ಲಿಮರ ಪರವಾಗಿಯೂ ಮಾತನಾಡಿದ್ದರು. ಇಷ್ಟೆಲ್ಲ ಆದ ಮೇಲೆ ಜೆಡಿಎಸ್ ಕಾರ್ಯದರ್ಶಿಯಾಗಿದ್ದ ಯತ್ನಾಳ್ಗೆ, ರಾಜ್ಯಾಧ್ಯಕ್ಷ ಹುದ್ದೆಯನ್ನು ಕೊಡಲಿಲ್ಲ. ಅಷ್ಟು ಹೊತ್ತಿಗೆ ಯತ್ನಾಳ್, ಯಡಿಯೂರಪ್ಪ ನಡುವಿನ ವೈಮನಸ್ಸು ಸರಿ ಹೋಗಿತ್ತು.
ಯತ್ನಾಳ್ ಉಚ್ಚಾಟನೆ ಭಾಗ 02 : 2015
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ
ಪಕ್ಷ ಹೇಳಿದರೂ ಕೇಳದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಅಧಿಕೃತ ಬಿಜೆಪಿ ಅಭ್ಯರ್ಥಿಯನ್ನೇ ಸೋಲಿಸಿದ್ದರು
2015ರಲ್ಲಿ ಎಂಎಲ್ಸಿ ಟಿಕೆಟ್ಗಾಗಿ ಬಾಗಲಕೋಟೆ-ವಿಜಯಪುರ ಸ್ಥಳೀಯ ಸಂಸ್ಥೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿ ವಿರುದ್ಧವೇ ಗೆದ್ದಿದ್ದರು. ಆಗಲೂ ಅಷ್ಟೆ, ಪ್ರಹ್ಲಾದ್ ಜೋಷಿ, ಯಡಿಯೂರಪ್ಪ, ಶೋಭಾ, ಸದಾನಂದ ಗೌಡ, ಮೋದಿ, ಶೆಟ್ಟರ್.. ಹೀಗೆ ಎಲ್ಲರ ವಿರುದ್ಧವೂ ಕೆಂಡ ಕಾರಿದ್ದರು. 2018ರ ಹೊತ್ತಿಗೆ ಮತ್ತೆ ಬಿಜೆಪಿಗೆ ಬಂದಿದ್ದರು.
ಯತ್ನಾಳ್ ಉಚ್ಚಾಟನೆ ಭಾಗ 03 : 2025
ವಿಜಯೇಂದ್ರ , ಯಡಿಯೂರಪ್ಪ ವಿರುದ್ಧ ವಾಗ್ದಾಳಿ
ಹೈಕಮಾಂಡ್ ಎಚ್ಚರಿಕೆ ಕೊಟ್ಟ ನಂತರವೂ ನಿಲ್ಲಲಿಲ್ಲ
ಬಾಯಿ ಚಪಲಕ್ಕೆ ತನ್ನ ಗುಂಡಿ ತಾನೇ ತೋಡಿಕೊಂಡರು
ಯತ್ನಾಳ್ ವಿವಾದಾತ್ಮಕ ಹೇಳಿಕೆಗಳು..!
ಸಿಎಂ ಆಗೋಕೆ ಸಾವಿರಾರು ಕೋಟಿ ಕೊಡಬೇಕು
ದೆಹಲಿ ನಾಯಕರಿಗೂ ಕಪ್ಪ ಕೊಡಬೇಕು
ಸಿಎಂ ಆಗಿದ್ದಾಗ ಯಡಿಯೂರಪ್ಪ ನಕಲಿ ಸಹಿ
ಬಿಜೆಪಿಗೆ ಮುಸ್ಲಿಮರ ವೋಟ್ ಬೇಡವೇ ಬೇಡ
ಲಿಂಗಾಯತ ಸ್ವಾಮೀಜಿಗಳ ವಿರುದ್ಧವೂ ಟೀಕೆ
ಸಿಎಂ ಆಗುವುದಕ್ಕೆ ಸಾವಿರಾರು ಕೋಟಿ ಕೊಡಬೇಕು ಹಾಗೂ ದೆಹಲಿ ನಾಯಕರಿಗೂ ಕಪ್ಪ ಕೊಡಬೇಕು ಎಂಬ ಹೇಳಿಕೆ ದೆಹಲಿ ಹೈಕಮಾಂಡ್ನ್ನು ಮುಜುಗರಕ್ಕೆ ತಳ್ಳಿತ್ತು. ಅಲ್ಲದೆ ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಯಡಿಯೂರಪ್ಪ ಸಿಎಂ ಆಗಿದ್ದಾಗ ಯಡಿಯೂರಪ್ಪ ಅವರ ನಕಲಿ ಸಹಿ ಬಳಸಿ ಅಕ್ರಮ ಎಸಗಿದ್ದಾರೆ ಎಂಬ ಆರೋಪವೂ ಅಷ್ಟೇ. ಅಲ್ಲದೆ ಬಿಜೆಪಿಗೆ ಮುಸ್ಲಿಮರ ವೋಟ್ ಬೇಡವೇ ಬೇಡ ಹೇಳಿಕೆ ಬಿಜೆಪಿಗೆ ಮುಜುಗರ ಮಾಡುತ್ತಲೇ ಇತ್ತು. ಜೊತೆಗೆ ಬಿಜೆಪಿ ಜೊತೆ ನಿಂತ ಲಿಂಗಾಯತ ಸ್ವಾಮೀಜಿಗಳ ವಿರುದ್ಧವೂ ಹೇಳಿಕೆ ಕೊಡುತ್ತಿದ್ದರು.
ಅಲ್ಲದೆ ಪಕ್ಷದ ಹಲವು ನಾಯಕರ ಚಾರಿತ್ರ್ಯದ ಬಗ್ಗೆ ಅಶ್ಲೀಲ ಭಾಷೆಯ ಪ್ರಯೋಗ, ಏಕವಚನಗಳು ಕೂಡಾ ಬಿಜೆಪಿಗೆ ಮುಜುಗರ ತರಿಸುತ್ತಲೇ ಇದ್ದವು. ಮಾತಿನ ಭರದಲ್ಲಿ ಯತ್ನಾಳ್ ಅವರಿಗೆ ತಮ್ಮ ನಾಲಗೆ ಮೇಲೆ ಕಂಟ್ರೋಲ್ ಇಟ್ಟುಕೊಳ್ಳೋಕೆ ಆಗಲೇ ಇಲ್ಲ.
ಯತ್ನಾಳ್ ಪ್ರಮಾದಗಳೇನು..?
ವಕ್ಫ್ ವಿರೋಧಿ ಹೋರಾಟದಲ್ಲಿ ಬಿಜೆಪಿಯಿಂದ ಪ್ರತ್ಯೇಕ ಮುಡಾ ಹಗರಣ ಪ್ರತಿಭಟನೆಯಲ್ಲಿ ಅಸಹಾಕಾರ ಸಂಧಾನಕ್ಕೆ ಬಂದವರನ್ನೂ ಅವಮಾನ ಮಾಡಿದ್ದು.
ರಾಜ್ಯಾಧ್ಯಕ್ಷರ ವಿರುದ್ಧ ಪದೇ ಪದೇ ಹೇಳಿಕೆಗಳು ,ಒಗ್ಗೂಡಬೇಕಿದ್ದ ಲಿಂಗಾಯತರ ವಿಭಜನೆ ವಕ್ಫ್ ವಿರೋಧಿ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಂದು ಹೋರಾಟ ನಡೆಸುತ್ತಿದ್ದರೆ, ವಿಜಯೇಂದ್ರನ್ನು ಬಯ್ಯುತ್ತಾ ಪ್ರತ್ಯೇಕ ಪಾದಯಾತ್ರೆ ನಡೆಸಿದ್ದು, ವರವಾಗುವ ಬದಲು ಶಾಪವಾಯ್ತು. ಮುಡಾ ಹಗರಣ ಪ್ರತಿಭಟನೆಯಲ್ಲಿ ಅಸಹಾಕಾರ ತೋರಿಸಿದ್ದ ಯತ್ನಾಳ್, ಭಿನ್ನಮತ ಸಂಧಾನಕ್ಕೆ ಬಂದವರನ್ನೂ ಅವಮಾನ ಮಾಡಿದ್ದು ಕೂಡಾ ಅವರಿಗೆ ಹೊಡೆತ ಕೊಟ್ಟಿತು. ಅಲ್ಲದೆ ರಾಜ್ಯಾಧ್ಯಕ್ಷರ ವಿರುದ್ಧ ಪದೇ ಪದೇ ಹೇಳಿಕೆ ಕೊಡುತ್ತಾ, ಯಡಿಯೂರಪ್ಪ ಚಾರಿತ್ರ್ಯ ವಧೆಗೆ ಇಳಿದಿದ್ದು ಕೂಡಾ ಯತ್ನಾಳ್ ಅವರ ಪತನಕ್ಕೆ ಸಾಕ್ಷಿಯಾಯ್ತು. ಇದೆಲ್ಲದರ ಜೊತೆಗೆ ಪಕ್ಷದ ಜೊತೆ ಇನ್ನಷ್ಟು ಗಟ್ಟಿಗೊಳ್ಳಬೇಕಿದ್ದ ಲಿಂಗಾಯತ ಮತದಾರರು, ಯತ್ನಾಳ್ ನಾಲಗೆ, ಅಸಂಬದ್ಧ ಹೇಳಿಕೆಗಳಿಂದಾಗಿ ದೂರವಾಗುತ್ತಾ ಹೋದರು.
ಯತ್ನಾಳ್ ಕ್ಷೇತ್ರದಲ್ಲೇ ಬಿಜೆಪಿ ಹಿನ್ನಡೆ..!
ಇದೆಲ್ಲದರ ಜೊತೆಗೆ ಯತ್ನಾಳ್ ಇಷ್ಟೆಲ್ಲ ಹೋರಾಟ ಮಾಡಿದರೂ, ಯತ್ನಾಳ್ ಮತ್ತು ಅವರ ಜೊತೆಗಿರುವ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿಯೇ ಹಿನ್ನಡೆ ಅನುಭವಿಸಿದರು. ಲೋಕಸಭೆಯಲ್ಲಿ ಯತ್ನಾಳ್ ಬಣದ ಬಹುತೇಕ ನಾಯಕರು, ಬಿಜೆಪಿಗೆ ಲೀಡ್ ಕೊಡಿಸುವಲ್ಲಿ ವಿಫಲರಾದರು. ಒಟ್ಟಿನಲ್ಲಿ ಯತ್ನಾಳ್ ತಮಗೆ ತಾವೇ ವಿಲನ್ ಆಗಿ, ತಮ್ಮ ಪತನಕ್ಕೆ ತಾವೇ ನಾಂದಿ ಹಾಡಿ.. ಶುಭಂ ಕೂಡಾ ಮಾಡಿದ್ದಾರೆ. ಆದರೆ.. ಯತ್ನಾಳ್ ಅವರಿಗೆ ಈ ರೀತಿಯ ಹಿನ್ನಡೆ ಹೊಸದಲ್ಲ. ಫೀನಿಕ್ಸ್ ಹಕ್ಕಿಯಂತೆ ಪುಟಿದೇಳುವ ಶಕ್ತಿಯೂ ಅವರಿಗೆ ಇದೆ. ಹೀಗಾಗಿ ಯತ್ನಾಳ್ ಅವರಿಗೆ ಬಿಜೆಪಿಯಿಂದ ಉಚ್ಚಾಟನೆ ದಿ ಎಂಡ್ ಅಲ್ಲ.