ಬೆಂಗಳೂರು ಆ.26 : ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ 500ಕ್ಕೂ ಹೆಚ್ಚು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ಎಲ್. ಭೋಜೇಗೌಡ ಅವರ ನೇತೃತ್ವದಲ್ಲಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖರು:
ಡಿ.ಜೆ. ಸುರೇಶ್, ಡಿ.ಬಿ. ಅಶೋಕ್ ಗೌಡ, ಬಿ.ಎಸ್. ಅಜಿತ್ ಗೌಡ, ಜಿ.ಯು. ಚಂದ್ರೇಗೌಡ, ಝುಕಾರಿಯಾ ಜಾಕೀರ್, ಹೆಚ್.ಎಸ್. ಮಂಜಪ್ಪ, ರಾಜೇಂದ್ರ ಕಣಚೂರು, ರವಿ ಎಂ.ಕೆ., ಚಂದ್ರು ನಿಡುವಾಳ, ಜ್ಯೋತಿ ವಿರಲ್, ಸಂಪತ್ ಪಟ್ಟದೂರು, ಸುರೇಶ್ ಎಂ.ಎಸ್., ಹೆಚ್.ಎಂ. ಮಂಜುನಾಥ್, ಸತೀಶ್ ಮರ್ಕಲ್, ರೆಹಮಾನ್, ಪ್ರಸನ್ನ, ಕೆ.ಪಿ. ಭಾರತಿ, ರವಿ ಹೊಸ್ಮಾರೆ, ಲೋಹಿತ್, ಧರ್ಮೇಶ್, ಸಂದೇಶ್, ಪ್ರಹ್ಲಾದ್, ಪ್ರವೀಣ್, ರುದ್ರೇಗೌಡ, ಜಗನ್ನಾಥ್, ಸಂತೋಷ್ ಇನಾರಿ, ಸತೀಶ್ ಕೋಟೆಬೇಳುರು ಸೇರಿದಂತೆ 200ಕ್ಕೂ ಹೆಚ್ಚು ಕಾರ್ಯಕರ್ತರು ಈ ಸಂದರ್ಭದಲ್ಲಿ ಸೇರ್ಪಡೆಯಾದರು.
ಸಚಿವ ನಾಗೇಂದ್ರ ರಾಜೀನಾಮೆ ಕೊಡಲೇಬೇಕು-ನಿಖಿಲ್ ಕುಮಾರಸ್ವಾಮಿ
ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಸಚಿವ ನಾಗೇಂದ್ರ ಅವರ ಮೇಲಿನ ಆರೋಪ ನಿನ್ನೆ ಮೊನ್ನೆಯದಲ್ಲ. ಕಳೆದ ವರ್ಷದಿಂದಲೇ ಈ ಆರೋಪ ಇದೆ. ಹಿಂದಿನ ಸರ್ಕಾರದ ಅವಧಿಯಲ್ಲೇ 87 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಒಪ್ಪಿಕೊಂಡಿದ್ದರು. ಇಂತಹ ಗಂಭೀರ ಆರೋಪ ಇರುವವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಅಗತ್ಯವೇನಿತ್ತು? ನೈತಿಕ ಹೊಣೆ ಹೊತ್ತು ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ರೈತರ ಸಂಕಷ್ಟ:
ನಾವು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಿದ್ದೇವೆ. ಅಲ್ಲಿ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ರೈತರು ಬೀದಿಗೆ ಬಿದ್ದಿದ್ದಾರೆ. ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ಕಿಡಿಕಾರಿದರು.
ಸದನದಲ್ಲಿ ಜನಪರ ಚರ್ಚೆಯಾಗಲಿ:
ವಿಧಾನಸಭೆ ಕಲಾಪದಲ್ಲಿ ನೈಸ್ ರಸ್ತೆ ಹಗರಣ, ಬಿಡದಿ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಸರ್ಕಾರ ರೈತರು ಮತ್ತು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೆ ಕಾಲಹರಣ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾರ್ಕ್ಗಳ 5% ಬಳಕೆ ಬಿಲ್ಗೆ ವಿರೋಧ:
ಬೆಂಗಳೂರಿನ ಪಾರ್ಕ್ಗಳಲ್ಲಿ ಶೇ.5ರಷ್ಟು ಜಾಗವನ್ನು ವಾಣಿಜ್ಯ ಬಳಕೆಗೆ ನೀಡಲು ಸರ್ಕಾರ ಬಿಲ್ ತರುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಪಾರ್ಕ್ಗಳು ಸಾರ್ವಜನಿಕರ ಆಸ್ತಿ. ಅವುಗಳನ್ನು ಉಳಿಸಿಕೊಳ್ಳಬೇಕು. ಶೇ.5ರಷ್ಟು ಜಾಗವನ್ನು ಬಳಕೆ ಮಾಡಿಕೊಂಡರೆ ಬೆಂಗಳೂರು ನಗರದಲ್ಲಿ ಉಸಿರಾಡಲು ಏನು ಉಳಿಯುತ್ತದೆ? ಈ ಸರ್ಕಾರ ಯಾವ ರೀತಿಯ ಯೋಚನೆ ಮಾಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.





