ಬೆಂಗಳೂರು, (ಜುಲೈ 31): ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil Police Constable) ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ರಾಜ್ಯದ 884 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಈ ಪರೀಕ್ಷೆಗೆ 4,54,532 ಅಭ್ಯರ್ಥಿಗಳು ಹಾಜರಾಗಲಿದ್ದು, ಪರೀಕ್ಷಾ ಅಕ್ರಮಗಳನ್ನು ತಡೆಯಲು ಈ ಬಾರಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬಿಗಿ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ.
KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಈ ಕುರಿತಂತೆ ಮಾಹಿತಿ ನೀಡಿದ್ದು, 3,395 ಉಳಿಕೆ ಮೂಲ ವೃಂದ ಹಾಗೂ 596 ಕಲ್ಯಾಣ ಕರ್ನಾಟಕ ವೃಂದ ಸೇರಿದಂತೆ ಒಟ್ಟು 3,991 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಉಳಿಕೆ ಮೂಲ ವೃಂದಕ್ಕೆ 3,77,861 ಮತ್ತು ಕಲ್ಯಾಣ ಕರ್ನಾಟಕ ವೃಂದಕ್ಕೆ 76,684 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಪರೀಕ್ಷೆಯ ಸಮಯ
- ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:00 – ಎಲ್ಲಾ ಅಭ್ಯರ್ಥಿಗಳಿಗೆ.
- ಸಂಜೆ 4:00 ರಿಂದ 5:30 – ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ.
ಬಿಗಿ ಭದ್ರತಾ ಕ್ರಮಗಳು
ಪರೀಕ್ಷಾ ಅಕ್ರಮಗಳಿಗೆ ತಡೆ ನೀಡುವ ಉದ್ದೇಶದಿಂದ ಅಭ್ಯರ್ಥಿಗಳ ಪ್ರವೇಶಕ್ಕೆ ಮುಖಚಹರೆ ಗುರುತಿಸುವ (Face Recognition) ತಂತ್ರಜ್ಞಾನ ಬಳಸಲಾಗುತ್ತದೆ. ಪರೀಕ್ಷಾ ಕೇಂದ್ರಗಳು ಮತ್ತು ಕೊಠಡಿಗಳಲ್ಲಿ ಸಿಸಿಟಿವಿ ಕಣ್ಗಾವಲು, ವೆಬ್ ಕಾಸ್ಟಿಂಗ್ ಹಾಗೂ ಜಾಮರ್ಗಳ ವ್ಯವಸ್ಥೆ ಮಾಡಲಾಗಿದೆ. ಮೊಬೈಲ್ ಜಾಲತಾಣ ಮತ್ತು ಇತರ ಎಲೆಕ್ಟ್ರಾನಿಕ್ ಸಂಪರ್ಕವನ್ನು ನಿರ್ಬಂಧಿಸಲು ಪರೀಕ್ಷಾ ಕೇಂದ್ರಗಳ ಸುತ್ತ ಜಾಮರ್ ಅಳವಡಿಸಲಾಗುತ್ತದೆ.
ಪರೀಕ್ಷಾ ಕೇಂದ್ರಗಳ ಭದ್ರತೆಯನ್ನು ಜಿಲ್ಲಾ ಪೊಲೀಸರು ನೋಡಿಕೊಳ್ಳಲಿದ್ದು, ಜಿಲ್ಲಾಧಿಕಾರಿಗಳು ಪರೀಕ್ಷೆಯ ಸಂಪೂರ್ಣ ಮೇಲ್ವಿಚಾರಣೆ ವಹಿಸಲಿದ್ದಾರೆ. ಜೊತೆಗೆ ಬೆಂಗಳೂರಿನ KEA ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ನಿಂದಲೂ ಎಲ್ಲಾ ಕೇಂದ್ರಗಳ ಮೇಲೆ ನಿಗಾ ಇಡಲಾಗುತ್ತದೆ.
ಏನು ತರಬಾರದು?
ಅಭ್ಯರ್ಥಿಗಳು ಮೊಬೈಲ್, ಕ್ಯಾಮೆರಾ, ಬ್ಲೂಟೂತ್ ಸಾಧನ, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಬಾರದು. ಯಾವುದೇ ರೀತಿಯ ಕೈಗಡಿಯಾರ ಧರಿಸಲು ಅವಕಾಶವಿಲ್ಲ.
ವಸ್ತ್ರ ಸಂಹಿತೆ (Dress Code):
- ಕಿವಿ, ತಲೆ ಅಥವಾ ಮುಖ ಮುಚ್ಚುವ ಉಡುಪುಗಳಿಗೆ ಅವಕಾಶವಿಲ್ಲ.
- ಉದ್ದ ತೋಳಿನ ಉಡುಪು ಧರಿಸಬಾರದು.
- ಮೂಗುತಿ ಮತ್ತು ಮಂಗಳಸೂತ್ರ ಹೊರತುಪಡಿಸಿ ಇತರೆ ಆಭರಣ ಧರಿಸುವಂತಿಲ್ಲ.
- ಶೂ ಧರಿಸಲು ಅವಕಾಶವಿಲ್ಲ; ಚಪ್ಪಲಿ ಅಥವಾ ಕಡಿಮೆ ಹಿಮ್ಮಡಿಯ ಸ್ಯಾಂಡಲ್ ಮಾತ್ರ ಧರಿಸಬಹುದು.
- ಧಾರ್ಮಿಕ ಉಡುಪು ಧರಿಸುವ ಅಭ್ಯರ್ಥಿಗಳು ಪರೀಕ್ಷೆಗೆ ಎರಡು ಗಂಟೆ ಮುಂಚಿತವಾಗಿ ಬಂದು ತಪಾಸಣೆಗೆ ಒಳಗಾಗಬೇಕು.
ವಿಶೇಷ ಅಭ್ಯರ್ಥಿಗಳಿಗೆ ಸೂಚನೆ
ಶ್ರವಣ ದೋಷ ಹೊಂದಿದ್ದು ವಿಶೇಷ ಶ್ರವಣ ಸಾಧನ ಬಳಸುವ ಅಭ್ಯರ್ಥಿಗಳು ಎರಡು ಗಂಟೆ ಮುಂಚೆಯೇ ಕೇಂದ್ರಕ್ಕೆ ಹಾಜರಾಗಿ ಸಾಧನ ಪರಿಶೀಲನೆ ಮಾಡಿಸಬೇಕು. ಅವರು UDID ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವಾಗಿ ತರಬೇಕು.
OMR ಸ್ಕ್ಯಾನಿಂಗ್ಗೆ ಹೊಸ ವ್ಯವಸ್ಥೆ
ಈ ಬಾರಿ ಮೊದಲ ಬಾರಿಗೆ ಪರೀಕ್ಷೆಯ OMR ಉತ್ತರ ಪತ್ರಿಕೆಗಳನ್ನು ಬೆಂಗಳೂರು ಮಾತ್ರವಲ್ಲದೆ ಕಲಬುರಗಿ, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ವಿಜಯಪುರ ಹಾಗೂ ರಾಯಚೂರು ನಗರಗಳಲ್ಲಿಯೂ ಸ್ಕ್ಯಾನ್ ಮಾಡಿ ತಕ್ಷಣವೇ ವೆಬ್ಸೈಟ್ಗೆ ಅಪ್ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮೌಲ್ಯಮಾಪನ ಪ್ರಕ್ರಿಯೆ ಮತ್ತಷ್ಟು ವೇಗವಾಗಿ ಹಾಗೂ ಪಾರದರ್ಶಕವಾಗಿ ನಡೆಯಲಿದೆ.





