ಭಾರತೀಯ ಸಿನಿರಂಗದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಚಿತ್ರತಂಡ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದು, ಜುಲೈ 24ರಂದು ಚಿತ್ರದ ಟ್ರೇಲರ್ ಬಿಡುಗಡೆಗೊಳ್ಳಲಿದೆ. ಟ್ರೇಲರ್ ಬಿಡುಗಡೆಯ ಮುನ್ನ ದೆಹಲಿಯಲ್ಲಿ ‘ಪ್ರಥಮ ಸಂಕಲ್ಪ’ ಹೆಸರಿನ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ಗಣ್ಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರದ ಪ್ರಮುಖ ಕಲಾವಿದರು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವರು ರಾಕಿಂಗ್ ಸ್ಟಾರ್ ಯಶ್. ಈ ಚಿತ್ರದಲ್ಲಿ ಅವರು ರಾವಣನ ಪಾತ್ರವನ್ನು ನಿರ್ವಹಿಸಿದ್ದು, ಜೊತೆಗೆ ಸಹ-ನಿರ್ಮಾಪಕರಾಗಿಯೂ ಕೈಜೋಡಿಸಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ನಿರ್ಮಾಪಕ ನಿತೇಶ್ ತಿವಾರಿ, ಯಶ್ ಅವರ ಕೊಡುಗೆಯನ್ನು ವಿಶೇಷವಾಗಿ ಸ್ಮರಿಸಿದರು.
“‘ರಾಮಾಯಣ’ ಚಿತ್ರವನ್ನು ಈ ಹಂತದವರೆಗೆ ತಲುಪಿಸಲು ಯಶ್ ಅವರು ಕೇವಲ ನಟನಾಗಿ ಮಾತ್ರವಲ್ಲ, ಸಹ-ನಿರ್ಮಾಪಕರಾಗಿ ಹಾಗೂ ಆತ್ಮೀಯ ಸ್ನೇಹಿತರಾಗಿ ಅಪಾರ ಬೆಂಬಲ ನೀಡಿದ್ದಾರೆ. ಅವರ ಸಹಕಾರ ಚಿತ್ರತಂಡಕ್ಕೆ ದೊಡ್ಡ ಶಕ್ತಿಯಾಗಿದೆ” ಎಂದು ನಿತೇಶ್ ತಿವಾರಿ ಹೇಳಿದರು.
ವೇದಿಕೆಯಲ್ಲಿ ಮಾತನಾಡಿದ ಯಶ್, ಮೊದಲು “ಎಲ್ಲರಿಗೂ ನಮಸ್ಕಾರ” ಎಂದು ಕನ್ನಡದಲ್ಲೇ ಮಾತು ಆರಂಭಿಸಿ, ಬಳಿಕ ವಿವಿಧ ಭಾಷೆಗಳಲ್ಲಿ ಪ್ರೇಕ್ಷಕರನ್ನು ಅಭಿನಂದಿಸಿದರು. ನಂತರ ಮಾತನಾಡುತ್ತಾ, “ಇದು ನಿಜಕ್ಕೂ ವಿಶೇಷ ಹಾಗೂ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್. ಈ ಅವಕಾಶ ನೀಡಿದ ನಮಿತ್ ಮಲ್ಹೋತ್ರ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಈ ಸಿನಿಮಾದ ಮೂಲಕ ಹೊಸ ಅನುಭವಗಳ ಜೊತೆಗೆ ಹಿಂದಿ ಭಾಷೆಯನ್ನು ಇನ್ನಷ್ಟು ಕಲಿಯುವ ಅವಕಾಶವೂ ಸಿಕ್ಕಿತು” ಎಂದು ಹೇಳಿದರು.
ಇದು ಕೇವಲ ಒಂದು ಸಿನಿಮಾ ಅಲ್ಲ, ಭಾರತದ ಕನಸು. ನಮ್ಮ ದೇಶದ ಮಹಾನ್ ಕಥೆಯನ್ನು ವಿಶ್ವದ ಪ್ರೇಕ್ಷಕರ ಮುಂದೆ ಅತ್ಯುತ್ತಮ ಗುಣಮಟ್ಟದಲ್ಲಿ ತಲುಪಿಸಬೇಕು ಎಂಬುದು ನಮ್ಮೆಲ್ಲರ ಆಶಯ. ಈ ಚಿತ್ರ ಆ ಕನಸಿನ ಸಾಕಾರ ರೂಪವಾಗಿದೆ ಎಂದರು.
ಚಿತ್ರದ ನಾಯಕ ನಟ ರಣಬೀರ್ ಕಪೂರ್ ಅವರ ಅಭಿನಯವನ್ನು ಮೆಚ್ಚಿದ ಯಶ್, “ರಣಬೀರ್ ಕಪೂರ್ ಈ ಪಾತ್ರಕ್ಕಾಗಿ ಸಂಪೂರ್ಣವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಸಿನಿಮಾ ನೋಡಿದಾಗ ಅವರ ಸಮರ್ಪಣೆ ಎಲ್ಲರಿಗೂ ಸ್ಪಷ್ಟವಾಗುತ್ತದೆ. ಸಾಯಿ ಪಲ್ಲವಿ ಕೂಡ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಅವರ ಅಭಿನಯ ಪ್ರೇಕ್ಷಕರ ಮನಸ್ಸು ಗೆಲ್ಲಲಿದೆ ಎಂದರು.
ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರ, ಸಾಯಿ ಪಲ್ಲವಿ ಸೀತೆಯ ಪಾತ್ರ, ಹಾಗೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಚಿತ್ರವನ್ನು ನಿರ್ದೇಶಿಸಿದ್ದು, ನಿರ್ಮಾಪಕ ನಮಿತ್ ಮಲ್ಹೋತ್ರಾ ಎರಡು ಭಾಗಗಳಿಗಾಗಿ ಒಟ್ಟು ಸುಮಾರು ₹4,000 ಕೋಟಿ ಬಂಡವಾಳ ಹೂಡಿದ್ದಾರೆ. ಈ ಮೂಲಕ ‘ರಾಮಾಯಣ’ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೀಪಾವಳಿಯಂದು ಬಿಡುಗಡೆಯಾಗಲಿರುವ ಈ ಚಿತ್ರವು ಭಾರತೀಯ ಸಿನಿರಂಗದ ಮಟ್ಟವನ್ನು ಜಾಗತಿಕ ವೇದಿಕೆಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿದೆ.





