ನವದೆಹಲಿ, ಜುಲೈ 18: ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆ ವಿಳಂಬಕ್ಕೆ ಭಾರತದ ಬೇಜವಾಬ್ದಾರಿಯೇ ಕಾರಣ ಎಂಬ ಜಪಾನ್ನ ಮಾಜಿ ಸಚಿವ ಹಿಡೇಕಿ ಮಕಿಹಾರಾ ಅವರ ಆರೋಪವನ್ನು ಭಾರತ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ. ಮಕಿಹಾರಾ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಇದು ವಾಸ್ತವ ಅಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತ ಮತ್ತು ಜಪಾನ್ ನಡುವಿನ ಮುಂಬೈ–ಅಹಮದಾಬಾದ್ ಹೈ-ಸ್ಪೀಡ್ ರೈಲು ಯೋಜನೆಗೆ ಸಂಬಂಧಿಸಿದ ಸಹಕಾರ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ ಎಂದು ಹೇಳಿದರು. ಯೋಜನೆಯ ವಿವಿಧ ಹಂತಗಳಲ್ಲಿ ಎರಡೂ ದೇಶಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ರೀತಿಯ ಭಿನ್ನಾಭಿಪ್ರಾಯ ಯೋಜನೆಗೆ ಅಡ್ಡಿಯಾಗಿಲ್ಲ ಎಂದು ಅವರು ತಿಳಿಸಿದರು.
ಜೈಸ್ವಾಲ್ ಅವರ ಪ್ರಕಾರ, ಜಪಾನ್ ಅಭಿವೃದ್ಧಿಪಡಿಸುತ್ತಿರುವ ಹೊಸ ತಲೆಮಾರಿನ E20 ಶಿಂಕಾನ್ಸೆನ್ ರೈಲುಗಳನ್ನು 2030ರ ದಶಕದ ಆರಂಭದಲ್ಲಿ ಭಾರತಕ್ಕೆ ಪೂರೈಸುವ ಯೋಜನೆ ಇದೆ. ಈ ರೈಲುಗಳು ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಕಾರಣ, ಆರಂಭಿಕ ಹಂತದಲ್ಲಿ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಹೈ-ಸ್ಪೀಡ್ ರೈಲುಗಳನ್ನು ಬಳಸಲು ಎರಡೂ ದೇಶಗಳು ಪರಸ್ಪರ ಒಪ್ಪಿಗೆಯನ್ನು ಸೂಚಿಸಿವೆ ಎಂದು ತಿಳಿಸಿದ್ದಾರೆ.
ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಮೊದಲ ಹಂತವನ್ನು 2027ರೊಳಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಜೈಸ್ವಾಲ್ ಹೇಳಿದರು. ಯೋಜನೆಯ ವಿವಿಧ ಮೂಲಸೌಕರ್ಯ ಕಾಮಗಾರಿಗಳು ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಜಪಾನ್ ಮಾಜಿ ಸಚಿವರ ಆರೋಪವೇನು?
ಜಪಾನ್ನ ಮಾಜಿ ಸಚಿವ ಹಿಡೇಕಿ ಮಕಿಹಾರಾ ಅವರು, ಬುಲೆಟ್ ರೈಲು ಯೋಜನೆಯಲ್ಲಿ ತಾವು ನೇರವಾಗಿ ಭಾಗಿಯಾಗಿದ್ದೆ ಎಂದು ಹೇಳಿಕೊಂಡು, ಭಾರತವು ಹಲವು ಅಂತಾರಾಷ್ಟ್ರೀಯ ಸಭೆಗಳಲ್ಲಿ ನೀಡಿದ ಭರವಸೆಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿದ್ದರು. ಭಾರತೀಯ ಅಧಿಕಾರಿಗಳ ನಿರ್ಧಾರಗಳಲ್ಲಿ ಸ್ಥಿರತೆ ಕೊರತೆಯಿದ್ದು, ಪದೇ ಪದೇ ನಿಲುವು ಬದಲಾಯಿಸುತ್ತಿದ್ದರು ಎಂದು ಅವರು ಟೀಕಿಸಿದ್ದರು. ಅಲ್ಲದೆ, ಯೋಜನೆಯ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಜಪಾನ್ಗೆ ಅವಕಾಶ ನೀಡದಿರುವ ವಿಚಾರವನ್ನೂ ಅವರು ಪ್ರಶ್ನಿಸಿದ್ದರು.
ಭಾರತದ ಮೊದಲ ಬುಲೆಟ್ ರೈಲು ಯೋಜನೆ
ಮುಂಬೈ–ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ ದೇಶದ ಮೊದಲ ಬುಲೆಟ್ ರೈಲು ಯೋಜನೆಯಾಗಿದೆ. ಸುಮಾರು 508 ಕಿಲೋಮೀಟರ್ ಉದ್ದದ ಈ ಮಾರ್ಗವು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳನ್ನು ಸಂಪರ್ಕಿಸಲಿದೆ. ಈ ಯೋಜನೆಯಲ್ಲಿ ಜಪಾನ್ನ ಅತ್ಯಾಧುನಿಕ ಶಿಂಕಾನ್ಸೆನ್ ತಂತ್ರಜ್ಞಾನ ಬಳಸಲಾಗುತ್ತಿದ್ದು, ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಕಡಿಮೆ ಬಡ್ಡಿದರದ ದೀರ್ಘಾವಧಿಯ ಸಾಲದ ಮೂಲಕ ಆರ್ಥಿಕ ನೆರವು ನೀಡುತ್ತಿದೆ.
ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC)ನಿಂದ ಆರಂಭವಾಗುವ ಬುಲೆಟ್ ರೈಲು ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದ್ದು, ಮುಂಬೈ, ವಾಪಿ, ಸೂರತ್, ಆನಂದ್, ವಡೋದರಾ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ ಎಂದು ತಿಳಿದು ಬಂದಿದೆ. ಇದರಿಂದ ಪ್ರಯಾಣಿಕರಿಗೆ ಬಹಳ ಅನೂಕೂಲವಾಗಲಿದೆ.





