ಟಾಲಿವುಡ್ನ ಸ್ಟಾರ್ ನಟ ಅಲ್ಲು ಅರ್ಜುನ್ ಅವರಿಗೆ ಹೈದರಾಬಾದ್ನ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯವು ಶಾಕ್ ನೀಡಿದೆ. ನಗರದ ಪ್ರಸಿದ್ಧ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನಟ ಅಲ್ಲು ಗೆ ಸಮನ್ಸ್ ಜಾರಿ ಮಾಡಿದ್ದು, ಜೂನ್ 22 ರ ಸೋಮವಾರದಂದು ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಕಡಕ್ ಸೂಚನೆ ನೀಡಿದೆ. ಈ ಬೆಳವಣಿಗೆಯು ಚಿತ್ರರಂಗ ಹಾಗೂ ಅಲ್ಲು ಅವರ ಅಭಿಮಾನಿ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಪ್ರಕರಣದ ಹಿನ್ನೆಲೆ:
ಡಿಸೆಂಬರ್ 2024 ರಲ್ಲಿ ಬಿಡುಗಡೆಯಾದ ಬಹುನಿರೀಕ್ಷಿತ ‘ಪುಷ್ಪ-2 ದಿ ರೂಲ್’ ಚಿತ್ರದ ವಿಶೇಷ ಪ್ರೀಮಿಯರ್ ಪ್ರದರ್ಶನದ ವೇಳೆ ಹೈದರಾಬಾದ್ನಲ್ಲಿರುವ ಸಂಧ್ಯಾ ಥಿಯೇಟರ್ನಲ್ಲಿ ಈ ಭೀಕರ ದುರಂತ ಸಂಭವಿಸಿತ್ತು. ಈ ಥಿಯೇಟರ್ ಗೆ ನಟ ಅಲ್ಲು ಅರ್ಜುನ್ ಪ್ರೀಮಿಯರ್ ಪ್ರದರ್ಶನ ವೀಕ್ಷಿಸಲು ಸರಿಸುಮಾರು ರಾತ್ರಿ 9:30 ಕ್ಕೆ, ತಮ್ಮ ವೈಯಕ್ತಿಕ ಭದ್ರತಾ ತಂಡದೊಂದಿಗೆ ಥಿಯೇಟರ್ಗೆ ಆಗಮಿಸಿದರು, ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಏಕಕಾಲದಲ್ಲಿ ನುಗ್ಗಿದ್ದರಿಂದ ಭಾರಿ ನೂಕುನುಗ್ಗಲು ಉಂಟಾಗಿತ್ತು. ಈ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟು, ಅವರ ಪುತ್ರ ಶ್ರೀತೇಜ್ ತೀವ್ರವಾಗಿ ಗಾಯಗೊಂಡಿದ್ದರು. ಜನಸಂದಣಿಯನ್ನು ನಿಯಂತ್ರಿಸುವಲ್ಲಿ ವಿಫಲವಾದ ಕಾರಣಕ್ಕಾಗಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ದೋಷಾರೋಪಣೆ ಪಟ್ಟಿಯಲ್ಲಿ ಅಲ್ಲು ಅರ್ಜುನ್ 11ನೇ ಆರೋಪಿ:
ಈ ಘಟನೆ ಕುರಿತು ತನಿಖೆ ನಡೆಸಿದ ಚಿಕ್ಕದಪಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸುದೀರ್ಘ ದೋಷಾರೋಪಣೆ ಪಟ್ಟಿಯನ್ನು (ಚಾರ್ಜ್ಶೀಟ್) ಸಲ್ಲಿಸಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 23 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದ್ದು, ಅದರಲ್ಲಿ ನಟ ಅಲ್ಲು ಅರ್ಜುನ್ ಅವರನ್ನು 11ನೇ ಆರೋಪಿ (A11) ಎಂದು ಉಲ್ಲೇಖಿಸಲಾಗಿದೆ. ಇನ್ನುಳಿದಂತೆ, ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದ ಮತ್ತು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಸಂಧ್ಯಾ ಥಿಯೇಟರ್ನ ಆಡಳಿತ ಮಂಡಳಿ, ಮಾಲೀಕರು ಮತ್ತು ಸಿಬ್ಬಂದಿಯನ್ನು 1 ರಿಂದ 10 ನೇ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಖುದ್ದಾಗಿ ಹಾಜರಾಗಲು ಕೋರ್ಟ್ ಆದೇಶ:
ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ ಅನ್ನು ಪರಿಶೀಲಿಸಿದ ನಾಂಪಲ್ಲಿ ನ್ಯಾಯಾಲಯವು ಸದ್ಯ ಪ್ರಕರಣದಲ್ಲಿ ಹೆಸರಿಸಲಾದ 19 ಆರೋಪಿಗಳಿಗೆ ಸಮನ್ಸ್ ನೀಡಿದೆ. ಜೂನ್ 22 ಸೋಮವಾರದಂದು ನಡೆಯಲಿರುವ ವಿಚಾರಣೆಯ ದಿನದಂದು ಯಾವುದೇ ವಿನಾಯಿತಿ ಇಲ್ಲದೆ ಅಲ್ಲು ಅರ್ಜುನ್ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಿರಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಹಿಂದೆ ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದು, ಬಳಿಕ ಹೈಕೋರ್ಟ್ನಿಂದ ಅವರಿಗೆ ನಿಯಮಿತ ಜಾಮೀನು ದೊರೆತಿತ್ತು.
ಈ ದುರಂತವು ಚಿತ್ರರಂಗದಲ್ಲಿ ಸಿನಿಮಾ ಪ್ರಚಾರ ಹಾಗೂ ಸೆಲೆಬ್ರಿಟಿಗಳ ಆಗಮನದ ವೇಳೆ ಕೈಗೊಳ್ಳಬೇಕಾದ ಸಾರ್ವಜನಿಕ ಸುರಕ್ಷತೆ ಮತ್ತು ಜನಸಂದಣಿ ನಿರ್ವಹಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಸೋಮವಾರ ನಡೆಯಲಿರುವ ಈ ವಿಚಾರಣೆಯು ಇಡೀ ಚಿತ್ರರಂಗದ ಗಮನ ಸೆಳೆದಿದೆ.





