NEET-UG 2026 ಮರು ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಮಹತ್ವದ ಭದ್ರತಾ ಕ್ರಮಕ್ಕೆ ದೆಹಲಿ ಹೈಕೋರ್ಟ್ ಕಾನೂನಿನ ಬೆಂಬಲ ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಸಾಮಗ್ರಿಗಳ ದುರುಪಯೋಗ ತಡೆಯುವ ಉದ್ದೇಶದಿಂದ ಟೆಲಿಗ್ರಾಮ್ ಆ್ಯಪ್ ಮೇಲೆ ಕೇಂದ್ರ ಸರ್ಕಾರ ಜೂನ್ 22ರವರೆಗೆ ವಿಧಿಸಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ದೆಹಲಿ ನ್ಯಾಯಾಲಯ ಇಂದು ಶುಕ್ರವಾರ ಎತ್ತಿಹಿಡಿದಿದೆ.
ಜೂನ್ 21ರಂದು ದೇಶಾದ್ಯಂತ ನಡೆಯಲಿರುವ NEET-UG ಮರು ಪರೀಕ್ಷೆಗೆ ಮುನ್ನ, ಪರೀಕ್ಷಾ ವ್ಯವಸ್ಥೆಯ ಭದ್ರತೆ ಹೆಚ್ಚಿಸಲು ಕೇಂದ್ರ ಸರ್ಕಾರ ಟೆಲಿಗ್ರಾಮ್ ಆ್ಯಪ್ ಸೇವೆಗಳನ್ನು ಜೂನ್ 22ರವರೆಗೆ ನಿರ್ಬಂಧಿಸುವ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಆದರೆ ವಿಚಾರಣೆ ನಡೆಸಿದ ನ್ಯಾಯಾಲಯ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟಿದೆ. ಪರೀಕ್ಷೆಯ ಸಮಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ನಕಲಿ ಮಾಹಿತಿ ಹರಡುವಿಕೆ ಅಥವಾ ಡಿಜಿಟಲ್ ವೇದಿಕೆಗಳ ದುರುಪಯೋಗದ ಸಾಧ್ಯತೆಗಳನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮ ಅಗತ್ಯ ಎಂದು ಹೈಕೋರ್ಟ್ ತಿಳಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆಗೆ ಬ್ರೇಕ್:
ಪರೀಕ್ಷೆಯ ಸಮಯದಲ್ಲಿ ಯಾವುದೇ ರೀತಿಯ ಪರೀಕ್ಷಾ ಸಾಮಗ್ರಿಗಳ ಸಂಭಾವ್ಯ ಸೋರಿಕೆ ಅಥವಾ ಸಂದೇಶ ವೇದಿಕೆಯ ದುರುಪಯೋಗವನ್ನು ತಡೆಗಟ್ಟಲು ಈ ತಾತ್ಕಾಲಿಕ ನಿಷೇಧದ ಕ್ರಮವು ಸಂಪೂರ್ಣವಾಗಿ ಸಮರ್ಥನೀಯವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಕೇಂದ್ರ ಸರ್ಕಾರದ ವಾದದ ಪ್ರಕಾರ, ಟೆಲಿಗ್ರಾಮ್ನಂತಹ ಸಂದೇಶ ವಿನಿಮಯ ವೇದಿಕೆಗಳನ್ನು ಕೆಲವರು ಪರೀಕ್ಷಾ ಸಂಬಂಧಿತ ಅಕ್ರಮ ಚಟುವಟಿಕೆಗಳಿಗೆ ಬಳಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಇಂತಹ ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಟೆಲಿಗ್ರಾಮ್ ಸಂಸ್ಥೆ ತನ್ನ ಸೇವೆಗಳಿಗೆ ವಿಧಿಸಿರುವ ನಿರ್ಬಂಧದಿಂದಾಗಿ ಸಮಸ್ಯೆಯಾಗುತ್ತಿದೆ ಎಂಬ ವಾದಗಳನ್ನು ಆಲಿಸಿದ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿದೆ. ಇದರ ಅನ್ವಯ ನೀಟ್ ಮರು ಪರೀಕ್ಷೆ ಮುಗಿಯುವವರೆಗೆ ಅಂದರೆ ಜೂನ್ 22 ರವರೆಗೆ ದೇಶದಲ್ಲಿ ಟೆಲಿಗ್ರಾಮ್ ಸೇವೆಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ. ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಮತ್ತು ಪರೀಕ್ಷೆಯ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹೀಗಾಗಿ ದೇಶದಲ್ಲಿ ನಿರ್ಧಿಷ್ಟ ಅವಧಿಯ ವರಗೆ ಟೆಲಿಗ್ರಾಮ್ ಸೇವೆಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ.
NEET ಪರೀಕ್ಷೆ ದೇಶದ ಅತ್ಯಂತ ಪ್ರಮುಖ ಪ್ರವೇಶ ಪರೀಕ್ಷೆಗಳಲ್ಲೊಂದಾಗಿದ್ದು, ವೈದ್ಯಕೀಯ ಶಿಕ್ಷಣ ಪಡೆಯಲು ಲಕ್ಷಾಂತರ ವಿದ್ಯಾರ್ಥಿಗಳು ಇದನ್ನು ಅವಲಂಬಿಸಿದ್ದಾರೆ. ಇದು ವಿದ್ಯಾರ್ಥಿಗಳ ಜೀವನದ ಬಹುದೊಡ್ಡ ಪರೀಕ್ಷೆಯಾಗಿದೆ. ಮಾತ್ರವಲ್ಲದೆ ಅವರ ಭವಿಷ್ಯಕ್ಕೂ ಇದು ಬಹಳ ಮುಖ್ಯವಾಗಿದೆ. ಪರೀಕ್ಷೆಯ ಪ್ರಾಮಾಣಿಕತೆ ಮತ್ತು ಸಮಾನ ಅವಕಾಶವನ್ನು ಉಳಿಸಿಕೊಳ್ಳಲು ಸರ್ಕಾರ ಕೈಗೊಂಡಿರುವ ಈ ಕ್ರಮಕ್ಕೆ ಇದೀಗ ನ್ಯಾಯಾಂಗದ ಬೆಂಬಲ ದೊರೆತಂತಾಗಿದೆ.





