ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾರಿನ ಗ್ಲಾಸ್ ಸಂಪೂರ್ಣವಾಗಿ ಏರಿಸಿ, ಎಸಿ (Air Conditioner) ಆನ್ ಮಾಡಿಕೊಂಡು ಮಲಗಿದ್ದ ಖಾಸಗಿ ಕಂಪನಿಯ ಕ್ಯಾಬ್ ಚಾಲಕರೊಬ್ಬರು ಕಾರಿನೊಳಗೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗೆದರಹಳ್ಳಿ ಬಳಿ ಈ ದಾರುಣ ಘಟನೆ ನಡೆದಿದ್ದು, ಮೃತರನ್ನು ಟಿ. ದಾಸರಹಳ್ಳಿ ನಿವಾಸಿ ಸುನಿತ ಹೆಚ್.ಬಿ. (38) ಎಂದು ಗುರುತಿಸಲಾಗಿದೆ.
ನಡೆದಿದ್ದೇನು?
ಖಾಸಗಿ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸುನಿತ, ಸೋಮವಾರ ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ನೆಲಗೆದರಹಳ್ಳಿ ರಸ್ತೆ ಪಕ್ಕದಲ್ಲಿ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ವೆದರ್ ಬಿಸಿಯಾಗಿದ್ದರಿಂದ ಕಾರಿನ ಎಲ್ಲಾ ಕಿಟಕಿ ಗಾಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ, ಎಸಿ ಆನ್ ಮಾಡಿಕೊಂಡು ಸೀಟಿನಲ್ಲೇ ಮಲಗಿದ್ದರು.
ಅನುಮಾನಗೊಂಡು ಗಾಜು ಒಡೆದ ಸಾರ್ವಜನಿಕರು
ಮಧ್ಯಾಹ್ನ 12 ಗಂಟೆಯಾದರೂ ಕಾರು ಅದೇ ಜಾಗದಲ್ಲಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಕಾರಿನ ಬಳಿ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಚಾಲಕ ಸುನಿತ ಒಳಗಡೆ ಮಲಗಿರುವುದು ಕಂಡುಬಂದಿದೆ. ಸ್ಥಳೀಯರು ಎಷ್ಟು ಬಾರಿ ಕಾರಿನ ಗಾಜು ತಟ್ಟಿದರೂ ಸುನಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾದ ಸಾರ್ವಜನಿಕರು ಕಲ್ಲಿನಿಂದ ಕಾರಿನ ಕಿಟಕಿ ಗಾಜನ್ನು ಒಡೆದು ಡೋರ್ ಓಪನ್ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸುನಿತ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.
ಹೃದಯಾಘಾತದ ಶಂಕೆ: ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರು ಸುನಿತ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸುನಿತ ಅವರು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪೊಲೀಸ್ ತನಿಖೆ ಮತ್ತು ಎಚ್ಚರಿಕೆ
ಘಟನಾ ಸ್ಥಳಕ್ಕೆ ಪೀಣ್ಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಮೃತರ ಕುಟುಂಬಸ್ಥರ ಮಾಹಿತಿ ಕಲೆಹಾಕುತ್ತಿದ್ದು, ಪೀಣ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR – Unnatural Death Report) ಪ್ರಕರಣ ದಾಖಲಾಗಿದೆ.
ತಜ್ಞರ ಎಚ್ಚರಿಕೆ: ಚಲಿಸದೇ ಒಂದೇ ಕಡೆ ನಿಂತಿರುವ ಕಾರಿನಲ್ಲಿ ಗ್ಲಾಸ್ ಸಂಪೂರ್ಣ ಕ್ಲೋಸ್ ಮಾಡಿ ಎಸಿ ಹಾಕಿಕೊಂಡು ಮಲಗುವುದು ಅತ್ಯಂತ ಅಪಾಯಕಾರಿ. ಇಂತಹ ಸಂದರ್ಭದಲ್ಲಿ ಕಾರಿನ ಎಂಜಿನ್ನಿಂದ ಹೊರಬರುವ ಕಾರ್ಬನ್ ಮಾನಾಕ್ಸೈಡ್ (Carbon Monoxide) ಎಂಬ ವಿಷಾನಿಲ ಕಾರಿನೊಳಗೆ ಆವರಿಸುತ್ತದೆ. ಇದರಿಂದ ಆಮ್ಲಜನಕದ ಕೊರತೆಯಾಗಿ ಮನುಷ್ಯ ಸುಲಭವಾಗಿ ಪ್ರಜ್ಞೆ ತಪ್ಪಿ, ಉಸಿರುಗಟ್ಟಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.





