ನಕ್ಸಲ್ ಮುಕ್ತ ಭಾರತ ಘೋಷಣೆಯ ಬೆನ್ನಲ್ಲೇ ಛತ್ತೀಸ್ಗಢದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಕಂಕೇರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು ಇಟ್ಟಿದ್ದ ಸುಧಾರಿತ ಸ್ಫೋಟಕ ಸಾಧನವನ್ನು (IED) ನಿಷ್ಕ್ರಿಯಗೊಳಿಸುವ ಪ್ರಯತ್ನದಲ್ಲಿದ್ದಾಗ ಅದು ಸ್ಫೋಟಗೊಂಡು ಜಿಲ್ಲಾ ಮೀಸಲು ಪಡೆಯ (DRG) ನಾಲ್ವರು ಸಿಬ್ಬಂದಿ ವೀರಮರಣ ಅಪ್ಪಿದ್ದಾರೆ.
ಘಟನೆಯ ವಿವರ :
ಕಂಕೇರ್ ಜಿಲ್ಲೆಯ ಚೊಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರ ಗಡಿ ಸಮೀಪದ ಅರಣ್ಯದಲ್ಲಿ ಈ ಘಟನೆ ನಡೆದಿದೆ. ನಕ್ಸಲೀಯರು ಈ ಹಿಂದೆ ಅಳವಡಿಸಿದ್ದ ಸ್ಫೋಟಕಗಳನ್ನು ಪತ್ತೆಹಚ್ಚಿ ತೆರವುಗೊಳಿಸುವ ‘ಬಾಂಬ್ ನಿರ್ಮೂಲನ ಕಾರ್ಯಾಚರಣೆ’ಯಲ್ಲಿ ಡಿಆರ್ಜಿ ತಂಡ ತೊಡಗಿತ್ತು. ಸ್ಫೋಟಕವನ್ನು ತಟಸ್ಥಗೊಳಿಸಲು ಯತ್ನಿಸುತ್ತಿದ್ದ ವೇಳೆ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದೆ.
ವೀರ ಯೋಧರ ಬಲಿ :
ಈ ಸ್ಫೋಟದ ತೀವ್ರತೆಗೆ ಇನ್ಸ್ಪೆಕ್ಟರ್ ಸುಖ್ರಾಮ್ ವಟ್ಟಿ, ಕಾನ್ಸ್ಟೆಬಲ್ ಕೃಷ್ಣ ಕೊಮ್ರಾ ಮತ್ತು ಕಾನ್ಸ್ಟೆಬಲ್ ಸಂಜಯ್ ಗಢ್ಪಾಲೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಕಾನ್ಸ್ಟೆಬಲ್ ಪರಮಾನಂದ ಕೊಮ್ರಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ನಕ್ಸಲ್ ಮುಕ್ತ ಘೋಷಣೆಯ ನಂತರದ ಮೊದಲ ಘಟನೆ :
ಮಾರ್ಚ್ 30, 2026 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತವನ್ನು ‘ಸಶಸ್ತ್ರ ಮಾವೋವಾದಿ ಮುಕ್ತ ದೇಶ’ ಎಂದು ಘೋಷಿಸಿದ್ದರು. ಈ ಘೋಷಣೆಯ ನಂತರ ಛತ್ತೀಸ್ಗಢದಲ್ಲಿ ನಡೆದ ಮೊದಲ ಪ್ರಮುಖ ಹಿಂಸಾತ್ಮಕ ಘಟನೆ ಇದಾಗಿದೆ. ಬಸ್ಟರ್ ರೇಂಜ್ನ ಐಜಿ ಸುಂದರರಾಜ್ ಪಟ್ಟಿಲಿಂಗಂ ಅವರು ಈ ಕುರಿತು ಮಾಹಿತಿ ನೀಡಿದ್ದು, ಹಳೆಯ ಸ್ಫೋಟಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ವೇಳೆ ಈ ದುರದೃಷ್ಟಕರ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.





