ಶಿಸ್ತು ಉಲ್ಲಂಘನೆ: ವೈಭವ್ ಸೂರ್ಯವಂಶಿ ವಿರುದ್ದ ಐಸಿಸಿ ಕಠಿಣ ಕ್ರಮ?

Untitled design (6)

ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಿನ ರೋಚಕ ಪಂದ್ಯದ ಬಳಿಕ ನಡೆದ ಅದೊಂದು ವಿವಾದವು ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ದಂಬುಲ್ಲಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ಎ ತಂಡ ಮೊದಲು ಬ್ಯಾಟಿಂಗ್ ಮಾಡಿ 49.2 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನತ್ತಿದ ಶ್ರೀಲಂಕಾ ಎ ತಂಡವೂ 50 ಓವರ್‌ಗಳಲ್ಲಿ 265 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.

ನಂತರ ನಡೆದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಬ್ಯಾಟರ್‌ಗಳು 16 ರನ್ ಕಲೆಹಾಕಿದರು. ಈ ಗುರಿಯನ್ನು ಬೆನ್ನತ್ತಿದ ಭಾರತ ಎ ತಂಡ 6 ಎಸೆತಗಳಲ್ಲಿ 9 ರನ್ ಗಳನ್ನು ಮಾತ್ರ ಗಳಿಸಿ 7 ರನ್‌ಗಳಿಗೆ ಸೋಲೊಪ್ಪಿಕೊಂಡಿದ್ದರು.

ಈ ಸೋಲಿನ ಬಳಿಕ ಪೆವಿಲಿಯನ್‌ಗೆ ಮರಳುತ್ತಿದ್ದ ವೇಳೆ ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಾ ನಡುವೆ ಮಾತಿನ ಚಕಮಕಿ ನಡೆದಿದೆ. ಶ್ರೀಲಂಕಾ ಆಟಗಾರ ಏನೋ ಹೇಳಿದ್ದರಿಂದ ವೈಭವ್ ಸೂರ್ಯವಂಶಿ ಕೋಪಗೊಂಡು ಅವರತ್ತ ತೆರಳಿ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಈ ವೇಳೆ ವೈಭವ್ ಸೂರ್ಯವಂಶಿ ಎದುರಾಳಿ ಆಟಗಾರನಾದ ವಿಶೇನ್ ಹಾಲಂಬಾ ಅವರನ್ನು ಕೈಯಿಂದ ತಳ್ಳಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿನ್ನಲೆಯಲ್ಲಿ ಐಸಿಸಿ ವೈಭವ್ ಸೂರ್ಯವಂಶಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಗಾಶ್ ಅವರು ತನಿಖೆ ಕೂಡ ನಡೆಸುತ್ತಿದ್ದಾರೆ.

ಐಸಿಸಿ ನಿಯಮಾವಳಿ:

ಐಸಿಸಿ ನೀತಿ ಸಂಹಿತೆಯ ಪ್ರಕಾರ ಮೈದಾನದಲ್ಲಿ ಎದುರಾಳಿ ಆಟಗಾರನ ಮೇಲೆ ದೈಹಿಕವಾಗಿ ಕೈಮಾಡುವುದು ಅಥವಾ ತಳ್ಳುವುದು ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ. ಪ್ರಕರಣದ ಗಂಭೀರತೆಯನ್ನು ಆಧರಿಸಿ ಲೆವೆಲ್-2 ಅಥವಾ ಲೆವೆಲ್-3 ಅಡಿಯಲ್ಲಿ ಐಸಿಸಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ತಪ್ಪು ಸಾಬೀತಾದರೆ ವೈಭವ್ ಸೂರ್ಯವಂಶಿಗೆ ಪಂದ್ಯ ಶುಲ್ಕದ 100%ವರೆಗೆ ದಂಡ ವಿಧಿಸಬಹುದು. ಅಲ್ಲದೆ, ಮ್ಯಾಚ್ ರೆಫರಿ ಕಠಿಣ ನಿರ್ಧಾರ ತೆಗೆದುಕೊಂಡರೆ ಕೆಲವು ಪಂದ್ಯಗಳ ನಿಷೇಧಕ್ಕೂ ಒಳಗಾಗುವ ಸಾಧ್ಯತೆ ಕೂಡ ಇದೆ.

ಇದೇ ವೇಳೆ ಶ್ರೀಲಂಕಾದ ವಿಶೇನ್ ಹಾಲಂಬಾ ಅವರ ವರ್ತನೆಯನ್ನೂ ಪರಿಶೀಲಿಸಲಾಗುತ್ತಿದೆ. ಇಬ್ಬರು ಆಟಗಾರರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಇದೀಗ ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

Exit mobile version