ಬಿಹಾರ ಸರ್ಕಾರದಿಂದ ವೈಭವ್‌ಗೆ ₹10 ಲಕ್ಷ ಬಹುಮಾನ ಘೋಷಣೆ

Untitled design 2025 04 30t112113.791

ನವದೆಹಲಿ, ಏಪ್ರಿಲ್ 30 : ಐಪಿಎಲ್ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಸಿಡಿಸಿದ ಅದ್ಭುತ ಶತಕದಿಂದ ಕ್ರಿಕೆಟ್ ಲೋಕದ ಗಮನ ಸೆಳೆದಿರುವ, ರಾಜಸ್ಥಾನ ರಾಯಲ್ಸ್ ತಂಡದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಇದೀಗ ದೇಶದ ನೆಚ್ಚಿನ ಯುವ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ. 14 ವರ್ಷದ ಈ ಬಾಲಕನ ಆಟವನ್ನು ಕೊಂಡಾಡುತ್ತಿರುವವರ ಪೈಕಿ ಭಾರತ ಕ್ರಿಕೆಟ್‌ನ ದಿಗ್ಗಜರು ಸಹ ಇದ್ದಾರೆ.

ಕ್ರಿಕೆಟ್ ದಿಗ್ಗಜರಿಂದ ಪ್ರಶಂಸೆಗಳ ಮಳೆ

‘ಕ್ರಿಕೆಟ್ ದೇವರು’ ಎಂದೇ ಖ್ಯಾತರಾದ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿ, “ವೈಭವ್‌ನ ಆತ್ಮವಿಶ್ವಾಸ, ವೇಗ, ಲೆಂಥ್‌ ಗುರುತಿಸುವ ಶಕ್ತಿ ಮತ್ತು ಚೆಂಡನ್ನು ಬೌಂಡರಿ ಕಡೆ ಕಳಿಸುವ ಶೈಲಿ all are extraordinary. ಇಂತಹ ಆಟಗಾರನನ್ನು ನೋಡೋದು ಖುಷಿಯ ವಿಚಾರ,” ಎಂದಿದ್ದಾರೆ. ವಿರಾಟ್ ಕೊಹ್ಲಿ ಕೂಡ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ “ವೈಭವ್ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ, ದೇವರು ನಿನ್ನೆಲ್ಲ ರೀತಿಯಲ್ಲೂ ಆಶೀರ್ವದಿಸಲಿ” ಎಂದು ಬರೆದಿದ್ದಾರೆ.

ಯುವರಾಜ್ ಸಿಂಗ್ ಟ್ವೀಟ್ ಮಾಡುತ್ತಾ, “ನೀವು 14ರ ವಯಸ್ಸಿನಲ್ಲಿ ಏನು ಮಾಡುತ್ತಿದ್ದಿರಿ? ಈ ಹುಡುಗ ವಿಶ್ವದ ಶ್ರೇಷ್ಠ ಬೌಲರ್‌ಗಳನ್ನು ಧೈರ್ಯವಾಗಿ ಎದುರಿಸುತ್ತಿದ್ದಾನೆ. ಇವನ ಹೆಸರು ನೆನಪಿನಲ್ಲಿ ಇರಲಿ,” ಎಂದು ಹೇಳಿದ್ದಾರೆ. ಟಿ20 ನಾಯಕ ಸೂರ್ಯಕುಮಾರ್ ಯಾದವ್, ವೇಗದ ಬೌಲರ್ ಮೊಹಮ್ಮದ್ ಶಮಿ ಹಾಗೂ ಪ್ರಸಿದ್ಧ ಕ್ರಿಕೆಟ್ ಕಾಮೆಂಟೇಟರ್ ಇಯಾನ್ ಬಿಶಪ್ ಸಹ ವೈಭವ್ ಆಟಕ್ಕೆ ಶ್ಲಾಘಿಸಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್‌ನಿಂದ ₹10 ಲಕ್ಷ ಘೋಷಣೆ

ವೈಭವ್ ಬೆಳೆದಿರುವ ಬಿಹಾರ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಬಾಲಕನ ಸಾಧನೆಗೆ ಪ್ರಶಂಸೆಯ ಮಾತುಗಳು ಮಾತಾಡಿ, ₹10 ಲಕ್ಷ ಹಣದ ಬಹುಮಾನ ಘೋಷಿಸಿದ್ದಾರೆ. “ವೈಭವ್ ಹಾಗೂ ಅವರ ತಂದೆಯನ್ನ ಕಳೆದ ವರ್ಷ ಭೇಟಿ ಮಾಡಿದ್ದೆ. ಈ ಸಾಧನೆಯ ನಂತರ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಇವನಂತವರು ಭಾರತ ಕ್ರಿಕೆಟ್‌ನ ಭವಿಷ್ಯ,” ಎಂದು ನಿತೀಶ್ ಹೇಳಿದ್ದಾರೆ.

ದ್ರಾವಿಡ್‌ಗೆ ತಂದೆಯಿಂದ ಕೃತಜ್ಞತೆ

ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ, ತಮ್ಮ ಮಗನ ಸಾಧನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುತ್ತಾ, “ಬಿಹಾರ ಕ್ರಿಕೆಟ್ ಹಾಗೂ ರಾಜಸ್ಥಾನ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಕಳೆದ ಕೆಲ ತಿಂಗಳಿನಲ್ಲಿ ವೈಭವ್‌ನ ಆಟ ಸುಧಾರಣೆಗೆ ಅವರು ನೀಡಿದ ಮಾರ್ಗದರ್ಶನ ಅಮೂಲ್ಯ,” ಎಂದು ಹೇಳಿದ್ದಾರೆ. ಬಿಹಾರ ಕ್ರಿಕೆಟ್ ಸಂಸ್ಥೆಯು ಈ ಕುರಿತ ವಿಡಿಯೋವನ್ನೂ ಹಂಚಿಕೊಂಡಿದೆ.

ವೈಭವ್ ಸೂರ್ಯವಂಶಿ ತನ್ನ ಯಶಸ್ಸನ್ನು ತನ್ನ ಪೋಷಕರ ಪರಿಶ್ರಮಕ್ಕೆ ಅರ್ಪಿಸುತ್ತಾ, “ನನ್ನ ತಾಯಿ ಪ್ರತಿದಿನ ರಾತ್ರಿ 11ಕ್ಕೆ ಮಲಗಿ, ಬೆಳಗ್ಗೆ 3ಕ್ಕೆ ನನ್ನ ಅಭ್ಯಾಸಕ್ಕಾಗಿ ಎದ್ದು ಕೆಲಸ ಮಾಡುತ್ತಿದ್ದರು. ನನ್ನ ತಂದೆ ತಮ್ಮ ಉದ್ಯೋಗವನ್ನು ಬಿಟ್ಟಿದ್ದಾರೆ. ಅಣ್ಣ ಮನೆಯ ಹೊಣೆ ಹೊತ್ತಿದ್ದಾರೆ. ನಾನು ಏನಾದರೂ ಸಾಧಿಸಿದ್ದರೆ, ಅದು ನನ್ನ ಕುಟುಂಬದ ತ್ಯಾಗದಿಂದಲೇ,” ಎಂದಿದ್ದಾರೆ.

“ಭಾರತೀಯ ಕ್ರಿಕೆಟ್‌ಗೆ ದೊಡ್ಡ ಕೊಡುಗೆ ನೀಡಬೇಕೆಂಬುದು ನನ್ನ ಕನಸು. ನಾನು ಶ್ರೇಷ್ಠ ಆಟಗಾರನಾಗಿ ದೇಶವನ್ನು ಪ್ರತಿನಿಧಿಸಬೇಕು,” ಎಂದು ವೈಭವ್ ಹೇಳುತ್ತಾರೆ.

Exit mobile version