ರೋಹಿತ್ ಶರ್ಮಾ ಕೈ ಹಿಡಿದು ಕಣ್ಣೀರಿಟ್ಟ ಮಹಿಳೆ: ವಿಡಿಯೋ ವೈರಲ್‌

Untitled design 2026 01 21T204334.607

ಇಂದೋರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಇಂದೋರ್‌ಗೆ ಆಗಮಿಸಿದ್ದ ಟೀಮ್ ಇಂಡಿಯಾ ತಂಗಿದ್ದ ಹೋಟೆಲ್‌ನಲ್ಲಿ ನಡೆದ ಅಚ್ಚರಿಯ ಘಟನೆಯೊಂದು ಭಾರೀ ವೈರಲ್‌ ಆಗಿದೆ. ತಂಡದ ನಾಯಕ ರೋಹಿತ್ ಶರ್ಮಾ ಅವರ ಬಳಿ ಭದ್ರತೆಯನ್ನು ಮೀರಿ ನುಗ್ಗಿದ ಅಪರಿಚಿತ ಮಹಿಳೆಯೊಬ್ಬಳು, ತನ್ನ ಮಗುವಿನ ಪ್ರಾಣ ಉಳಿಸಿಕೊಡುವಂತೆ ಕಣ್ಣೀರಿಟ್ಟು ಬೇಡಿಕೊಂಡಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂದ್ಯ ಮುಗಿಸಿ ಟೀಮ್ ಇಂಡಿಯಾ ಆಟಗಾರರು ಹೋಟೆಲ್‌ಗೆ ಮರಳುತ್ತಿದ್ದ ವೇಳೆ, ಸರಿತಾ ಶರ್ಮಾ ಎಂದು ಪರಿಚಯಿಸಿಕೊಂಡ ಮಹಿಳೆ ಏಕಾಏಕಿ ರೋಹಿತ್ ಶರ್ಮಾ ಅವರ ಬಳಿಗೆ ನುಗ್ಗಿದ್ದಾಳೆ. ಬಿಗಿ ಭದ್ರತಾ ವ್ಯವಸ್ಥೆ ಇದ್ದರೂ ಅದನ್ನು ದಾಟಿ ಬಂದ ಮಹಿಳೆ, ರೋಹಿತ್ ಅವರ ಕೈಯನ್ನು ಬಲವಾಗಿ ಹಿಡಿದು “ನನ್ನ ಮಗುವನ್ನು ಉಳಿಸಿಕೊಡಿ” ಎಂದು ಭಾವುಕವಾಗಿ ಕೂಗಾಡಿದ್ದಾಳೆ.

ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ ಮಹಿಳೆಯನ್ನು ರೋಹಿತ್ ಅವರಿಂದ ದೂರಕ್ಕೆ ಕರೆದೊಯ್ದರು. ಆದರೆ ಅಷ್ಟರಲ್ಲೇ ಆಕೆಯ ಕಣ್ಣೀರಿನ ದೃಶ್ಯ, ಆಕೆಯ ಮಾತುಗಳು ಹಲವರ ಮನಕಲಕುವಂತೆ ಮಾಡಿದ್ದವು. ಈ ಘಟನೆಯ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಭಾರೀ ವೈರಲ್‌ ಆಗಿದೆ.

ನಂತರದ ವಿಡಿಯೋ ಸಂದೇಶದಲ್ಲಿ ಮಹಿಳೆ ತನ್ನ ನೋವನ್ನು ಬಹಿರಂಗಪಡಿಸಿದ್ದಾಳೆ. “ನನ್ನ ಮಗಳು ಅನಿಕಾ, SMA Type-2 ಎಂಬ ಅಪರೂಪದ ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆಕೆಯ ಜೀವ ಉಳಿಸಲು ಅಮೆರಿಕದಿಂದ 9 ಕೋಟಿ ರೂಪಾಯಿ ಬೆಲೆಯ ಇಂಜೆಕ್ಷನ್ ತರಿಸಬೇಕಾಗಿದೆ. ಈಗಾಗಲೇ ಸಾರ್ವಜನಿಕರಿಂದ 4.1 ಕೋಟಿ ರೂಪಾಯಿ ಸಂಗ್ರಹಿಸಿದ್ದೇವೆ. ಆದರೆ ಸಮಯ ಕೈ ತಪ್ಪುತ್ತಿದೆ,” ಎಂದು ಆಕೆ ಅಳಲನ್ನು ತೋಡಿಕೊಂಡಿದ್ದಾಳೆ.

ಇನ್ನೂ, “ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಮಕ್ಕಳ ಚಿಕಿತ್ಸೆಗೆ ಸಹಾಯ ಮಾಡುತ್ತಾರೆ ಎಂಬ ಸುದ್ದಿ ಕೇಳಿದ್ದೆ. ಅದಕ್ಕಾಗಿಯೇ ಭಾವುಕಳಾಗಿ ಈ ರೀತಿ ನಡೆದುಕೊಂಡೆ. ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ,” ಎಂದು ಮಹಿಳೆ ಕಣ್ಣೀರಿಟ್ಟಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಈ ಹಿಂದೆ ಯೂಟ್ಯೂಬರ್ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಎಲ್ವಿಶ್ ಯಾದವ್ ಅವರ ಬಳಿ ಕೂಡ ಇದೇ ರೀತಿಯ ಕಥೆ ಹೇಳಿಕೊಂಡು ಮಹಿಳೆಯೊಬ್ಬಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು. ಆ ವೇಳೆ “9 ಕೋಟಿ ರೂ. ಇಂಜೆಕ್ಷನ್ ಅಗತ್ಯ” ಎಂಬುದೇ ಆಕೆಯ ವಾದವಾಗಿತ್ತು. ಆದರೆ ನಂತರ ನಡೆದ ತನಿಖೆಯಲ್ಲಿ ಆ ಪ್ರಕರಣ ನಕಲಿ ಎಂದು ತಿಳಿದುಬಂದಿತ್ತು.

ಅದರ ಬೆನ್ನಲ್ಲೇ ಈಗ ರೋಹಿತ್ ಶರ್ಮಾ ಅವರ ಬಳಿ ನಡೆದ ಘಟನೆ ಕೂಡ ನಿಜವೇ? ಅಥವಾ ಮತ್ತೊಂದು ನಾಟಕವೇ? ಎಂಬ ಪ್ರಶ್ನೆಗಳು ಎದ್ದಿವೆ. ಸಾರ್ವಜನಿಕರು ಹಾಗೂ ನೆಟ್ಟಿಗರು ಎರಡು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು “ತಾಯಿ ಮಗುವಿಗಾಗಿ ಏನು ಬೇಕಾದರೂ ಮಾಡಬಹುದು” ಎಂದು ಮಹಿಳೆಯ ಪರವಾಗಿ ನಿಂತರೆ, ಇನ್ನೂ ಕೆಲವರು “ಇಂತಹ ಸಂವೇದನಾಶೀಲ ವಿಷಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇದೆ” ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

Exit mobile version