ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಬೆಂಗಳೂರಿನಲ್ಲೇ IPL ಮ್ಯಾಚ್? KSCAಗೆ ಷರತ್ತು ಹಾಕಿದ RCB

Untitled design 2026 01 16T180101.731

ಬೆಂಗಳೂರು: ಐಪಿಎಲ್ ಪಂದ್ಯಗಳು ಬೆಂಗಳೂರಿನಿಂದ ಬೇರೆಡೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳ ನಡುವೆ, ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಸಂತಸದ ಸುದ್ದಿ ಹೊರಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಗಳು ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಬಂಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಗೆ ಕೆಲ ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಭದ್ರತಾ ವ್ಯವಸ್ಥೆ, ಜನಸಂದಣಿ ನಿಯಂತ್ರಣ ಹಾಗೂ ಪ್ರೇಕ್ಷಕರ ಸುರಕ್ಷತೆ ಕುರಿತ ಚರ್ಚೆಗಳು ಹೆಚ್ಚಾಗಿದ್ದು, ಇದರ ಹಿನ್ನೆಲೆ RCB ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರ ಕೈಗೊಂಡಿದೆ. IPL ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಬೇಕಾದರೆ, ಕ್ರೀಡಾಂಗಣ ಹಾಗೂ ಅದರ ಸುತ್ತಮುತ್ತ ಅತ್ಯಾಧುನಿಕ ಭದ್ರತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು KSCAಗೆ ಸೂಚನೆ ನೀಡಿದೆ.

RCB ಮುಂದಿಟ್ಟ ಪ್ರಮುಖ ಷರತ್ತುಗಳಲ್ಲಿ ಪ್ರಮುಖವಾದುದು ಎಐ ಆಧಾರಿತ ಕ್ಯಾಮರಾ ವ್ಯವಸ್ಥೆ. ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ಹಾಗೂ ಹೊರಭಾಗದಲ್ಲಿ ಒಟ್ಟು 300 ರಿಂದ 350 ಎಐ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಈ ಕ್ಯಾಮರಾಗಳು ಜನಸಂದಣಿ ನಿಯಂತ್ರಣ, ಅನುಮಾನಾಸ್ಪದ ಚಟುವಟಿಕೆಗಳ ಪತ್ತೆ ಮತ್ತು ತುರ್ತು ಪರಿಸ್ಥಿತಿಗಳಿಗೆ ತಕ್ಷಣ ಸ್ಪಂದಿಸಲು ಸಹಕಾರಿಯಾಗಲಿವೆ ಎಂದು RCB ತಿಳಿಸಿದೆ.

ಇದರ ಜೊತೆಗೆ, ಸಿಸಿಟಿವಿ ಕಣ್ಣಾವಲು ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ. ಕ್ರೀಡಾಂಗಣದ ಪ್ರತಿಯೊಂದು ಪ್ರವೇಶ ದ್ವಾರ, ಸ್ಟ್ಯಾಂಡ್‌ಗಳು, ಪಾರ್ಕಿಂಗ್ ಪ್ರದೇಶ ಹಾಗೂ ಹೊರಭಾಗದ ರಸ್ತೆಗಳಲ್ಲಿ ನಿರಂತರ ನಿಗಾವಹಿಸುವ ವ್ಯವಸ್ಥೆ ಇರಬೇಕು ಎಂಬುದು RCB ಒತ್ತಾಯವಾಗಿದೆ.

ಪ್ರೇಕ್ಷಕರ ಸಾಲು ವ್ಯವಸ್ಥೆಯಲ್ಲೂ ಶಿಸ್ತು ಕಡ್ಡಾಯ ಎಂದು RCB ತಿಳಿಸಿದೆ. ಟಿಕೆಟ್ ಪರಿಶೀಲನೆ, ಪ್ರವೇಶ ಹಾಗೂ ನಿರ್ಗಮನ ಸಮಯದಲ್ಲಿ ಜನಸ್ತೋಮ ಗೊಂದಲ ಉಂಟಾಗದಂತೆ ವ್ಯವಸ್ಥಿತ ಸಾಲು ನಿರ್ವಹಣೆ ಅಗತ್ಯ ಎಂದು ಸೂಚಿಸಲಾಗಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಲಾಗಿದೆ.

ಈ ಎಲ್ಲಾ ಭದ್ರತಾ ವ್ಯವಸ್ಥೆಗಳ ಅನುಷ್ಠಾನಕ್ಕೆ ಬೇಕಾದ ವೆಚ್ಚದ ಬಗ್ಗೆ ಕೂಡ RCB ಮಹತ್ವದ ನಿರ್ಧಾರ ಕೈಗೊಂಡಿದೆ. ಎಐ ಕ್ಯಾಮರಾ, ಸಿಸಿಟಿವಿ ಮತ್ತು ಇತರ ಭದ್ರತಾ ಮೂಲಸೌಕರ್ಯಗಳಿಗೆ ಸುಮಾರು 4.5 ಕೋಟಿ ರೂ. ವೆಚ್ಚವನ್ನು ಭರಿಸಲು RCB ಸಿದ್ಧವಾಗಿದೆ ಎಂದು KSCAಗೆ ಮಾಹಿತಿ ನೀಡಿದೆ.

KSCA ಕೂಡ ಈ ಷರತ್ತುಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ. ಅಗತ್ಯ ವ್ಯವಸ್ಥೆಗಳು ಜಾರಿಯಾದರೆ, IPL ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯುವ ಸಾಧ್ಯತೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಅಂತಿಮ ನಿರ್ಧಾರ ಮುಂದಿನ ದಿನಗಳಲ್ಲಿ ಹೊರಬೀಳುವ ನಿರೀಕ್ಷೆಯಿದೆ.

Exit mobile version