IPL 2026: ಮುಂಬೈ ವಿರುದ್ಧ ರಾಜಸ್ಥಾನ್ ಗೆದ್ದರೆ ಮಾತ್ರ ಪ್ಲೇಆಫ್, ಸೋತರೆ ಪಂಜಾಬ್‌ಗೆ ಚಾನ್ಸ್!

Untitled design 2026 05 24T164733.814

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ ಕೊನೆಯ ದಿನ ಇಂದು (ಮೇ 24) ನಡೆಯುತ್ತಿರುವ ಎರಡು ಪಂದ್ಯಗಳು ಪ್ಲೇಆಫ್ ಭವಿಷ್ಯವನ್ನು ನಿರ್ಧರಿಸಲಿವೆ. ಮಧ್ಯಾಹ್ನ ನಡೆದ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ. ಸಂಜೆ ನಡೆಯಲಿರುವ 70ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಹೋರಾಟ ನಡೆಯಲಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದ ಮುಂಬೈ

ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ರಾಜಸ್ಥಾನ್ ರಾಯಲ್ಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿದಿದೆ. ಮೊದಲಿನಿಂದಲೂ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ರಾಜಸ್ಥಾನ್, ಈ ಪಂದ್ಯದಲ್ಲಿ ದೊಡ್ಡ ಮೊತ್ತದ ಗುರಿ ಹಾಕುವ ನಿರೀಕ್ಷೆಯಲ್ಲಿದೆ.

ಪಂದ್ಯದ ಆರಂಭದಲ್ಲೇ ಉಭಯ ತಂಡಗಳು ಎಚ್ಚರಿಕೆಯಿಂದ ಆಡುತ್ತಿದೆ. ಪ್ಲೇಆಫ್ ಸ್ಥಾನಕ್ಕೆ ನೇರ ಸಂಬಂಧ ಹೊಂದಿರುವುದರಿಂದ ಪ್ರತಿ ರನ್ ಕೂಡ ಮಹತ್ವ ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆದ್ದರೆ ಅವರ ಅಂಕ 16ಕ್ಕೆ ಏರಲಿದೆ ಮತ್ತು ಅವರು ನೇರವಾಗಿ ಪ್ಲೇಆಫ್ ಪ್ರವೇಶಿಸಲಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದರೆ ಸಂಪೂರ್ಣ ಸಮೀಕರಣವೇ ಬದಲಾಗಲಿದೆ.

ಮುಂಬೈ ಜಯಿಸಿದರೆ, ಈಗಾಗಲೇ 15 ಅಂಕಗಳನ್ನು ಹೊಂದಿರುವ ಪಂಜಾಬ್ ಕಿಂಗ್ಸ್‌ನ ಭವಿಷ್ಯ ಇತರ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗುತ್ತದೆ. ಸಂಜೆ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯ ಅತ್ಯಂತ ನಿರ್ಣಾಯಕವಾಗುತ್ತದೆ.

ಕೆಕೆಆರ್ ಗೆದ್ದು ಉತ್ತಮ ನೆಟ್ ರನ್ ರೇಟ್ ಹೊಂದಿದರೆ, ಪಂಜಾಬ್‌ಗಿಂತ ಮುಂದೆ ಹೋಗಿ ಪ್ಲೇಆಫ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಒಂದೇ ದಿನದಲ್ಲಿ ಪ್ಲೇಆಫ್ ಪಟ್ಟಿಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ.

ಪಂಜಾಬ್ ಕಿಂಗ್ಸ್‌ಗೆ ಡಬಲ್ ಒತ್ತಡ

ನಿನ್ನೆ ಲಕ್ನೋ ವಿರುದ್ಧ ಗೆಲುವು ಸಾಧಿಸಿದ ಬಳಿಕ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ನೀಡಿದ ಹೇಳಿಕೆ ಈಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಅವರು ಪರೋಕ್ಷವಾಗಿ ಮುಂಬೈ ಇಂಡಿಯನ್ಸ್ ಗೆಲ್ಲಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು. ಈ ಹೇಳಿಕೆ ಈಗಿನ ಪ್ಲೇಆಫ್ ಸಮೀಕರಣದಲ್ಲಿ ಮಹತ್ವ ಪಡೆದುಕೊಂಡಿದೆ.

ಮುಂಬೈ ಗೆಲುವು ಪಂಜಾಬ್‌ಗೆ ಲಾಭವಾಗುವ ಸಾಧ್ಯತೆ ಇದ್ದರೂ, ಸಂಜೆ ಪಂದ್ಯದಲ್ಲಿ ಕೆಕೆಆರ್ ಉತ್ತಮ ಪ್ರದರ್ಶನ ನೀಡಿದರೆ ಪಂಜಾಬ್‌ಗೆ ಅಪಾಯ ಎದುರಾಗಬಹುದು. ಹೀಗಾಗಿ ಪಂಜಾಬ್ ಅಭಿಮಾನಿಗಳು ಕೂಡ ಡೆಲ್ಲಿ–ಕೆಕೆಆರ್ ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಮುಂಬೈ ತಂಡದಲ್ಲಿ ದೊಡ್ಡ ಬದಲಾವಣೆ

ಈ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಗಮನ ಸೆಳೆಯುವ ಪ್ರಮುಖ ಬದಲಾವಣೆ ನಡೆದಿದೆ. ತಂಡದ ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಇಂದು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಬದಲಿಗೆ ಶಾರ್ದೂಲ್ ಠಾಕೂರ್ ತಂಡಕ್ಕೆ ಸೇರಿಸಲಾಗಿದೆ.

ಬುಮ್ರಾ ಇಲ್ಲದಿರುವುದು ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್‌ಗೆ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ಅವರ ದಾಳಿ ಶಕ್ತಿಯ ಕೊರತೆ ರಾಜಸ್ಥಾನ್ ಬ್ಯಾಟರ್‌ಗಳಿಗೆ ಸ್ವಲ್ಪ ಸ್ವಾತಂತ್ರ್ಯ ನೀಡಬಹುದು. ಇದಕ್ಕೆ ವಿರುದ್ಧವಾಗಿ ಮುಂಬೈ ತಂಡಕ್ಕೆ ಇದು ದೊಡ್ಡ ಸವಾಲಾಗಿದ್ದು, ಮಧ್ಯ ಓವರ್‌ಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳುವುದು ಪ್ರಮುಖ ಗುರಿಯಾಗಿದೆ.

ಈ ಪಂದ್ಯ ಕೇವಲ ಒಂದು ಲೀಗ್ ಪಂದ್ಯವಾಗಿರದೆ, ಸಂಪೂರ್ಣ ಪ್ಲೇಆಫ್ ಚಿತ್ರಣವನ್ನು ಬದಲಾಯಿಸುವ ನಿರ್ಣಾಯಕ ಪಂದ್ಯವಾಗಿದೆ. ಅಭಿಮಾನಿಗಳಲ್ಲಿ ಉತ್ಸಾಹದ ಜೊತೆಗೆ ಒತ್ತಡವೂ ಹೆಚ್ಚಾಗಿದೆ.

Exit mobile version