ಆರ್‌ಸಿಬಿ ಗೆಲುವಿನ ಬಗ್ಗೆ ಕೊನೆಗೂ ಮೌನ ಮುರಿದ ಎಂ.ಎಸ್. ಧೋನಿ

Untitled design 2026 01 22T131812.988

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದ 18 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಎಳೆದ ಆರ್‌ಸಿಬಿ, ಕಳೆದ ವರ್ಷ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ, ಮೈದಾನದಲ್ಲಿ ಆರ್‌ಸಿಬಿಯ ವೈರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್‌ನ (CSK) ಧೋನಿ, ಬೆಂಗಳೂರು ತಂಡದ ಈ ಸಾಧನೆಯ ಬಗ್ಗೆ ಏನು ಹೇಳಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ.

ಸಿಎಸ್‌ಕೆ ಬಿಟ್ಟು ಬೇರೆ ತಂಡ ಗೆಲ್ಲುವುದು ಇಷ್ಟವಿಲ್ಲ

ಇತ್ತೀಚೆಗೆ ನಡೆದ ಇಂಡಿಗೋ ಅಭಿಮಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ, ಅತ್ಯಂತ ಪ್ರಾಮಾಣಿಕವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ನಾನು ಸಿಎಸ್‌ಕೆ ತಂಡದ ಅವಿಭಾಜ್ಯ ಅಂಗ. ಒಬ್ಬ ಆಟಗಾರನಾಗಿ ಮತ್ತು ಅಭಿಮಾನಿಯಾಗಿ ನನ್ನ ತಂಡವನ್ನು ಹೊರತುಪಡಿಸಿ ಬೇರೆ ಯಾವುದೇ ತಂಡ ಐಪಿಎಲ್ ಟ್ರೋಫಿ ಗೆಲ್ಲುವುದನ್ನು ಊಹಿಸಿಕೊಳ್ಳುವುದು ನನಗೆ ಕಷ್ಟ. ಮೈದಾನಕ್ಕಿಳಿದಾಗ ನಮ್ಮ ತಂಡವೇ ಗೆಲ್ಲಬೇಕು ಎಂಬ ಹಠವಿರುತ್ತದೆ ಎಂದು ಧೋನಿ ನೇರವಾಗಿ ಹೇಳಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಿಗೆ ಸಲಾಂ

ಕೇವಲ ತಂಡ ಮಾತ್ರವಲ್ಲದೆ, ಆರ್‌ಸಿಬಿಯ ಅಭಿಮಾನಿ ಬಳಗದ ಬಗ್ಗೆ ಧೋನಿ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದು, ಆರ್‌ಸಿಬಿ ಅಭಿಮಾನಿಗಳು ನಿಜಕ್ಕೂ ಅದ್ಭುತ. ತಂಡ ಗೆದ್ದಾಗ ಎಲ್ಲರೂ ಬೆಂಬಲಿಸುತ್ತಾರೆ, ಆದರೆ ಆರ್‌ಸಿಬಿ ಅಭಿಮಾನಿಗಳು ತಂಡ ಸತತವಾಗಿ ಸೋಲುತ್ತಿದ್ದಾಗಲೂ, ಕೆಟ್ಟ ಪರಿಸ್ಥಿತಿಯಲ್ಲೂ ಹಿಂದೆ ಸರಿಯದೆ ಬೆಂಬಲಕ್ಕೆ ನಿಂತರು. ಅವರ ನಿಷ್ಠೆ ಮೆಚ್ಚುವಂತದ್ದು ಎಂದು ಧೋನಿ ಹೇಳಿದ್ದಾರೆ. ಧೋನಿಯ ಈ ಮಾತು ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆರ್‌ಸಿಬಿ ಅಭಿಮಾನಿಗಳ ಮನಗೆದ್ದಿದೆ.

ಮತ್ತೊಂದೆಡೆ, ಮುಂಬರುವ ಐಪಿಎಲ್ ಸೀಸನ್‌ನ ವೇಳಾಪಟ್ಟಿಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ, ಚುನಾವಣಾ ಆಯೋಗವು ಮತದಾನದ ದಿನಾಂಕಗಳನ್ನು ಘೋಷಿಸಿದ ನಂತರವಷ್ಟೇ ಬಿಸಿಸಿಐ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಭದ್ರತಾ ದೃಷ್ಟಿಯಿಂದ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.

Exit mobile version