ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ: ಇಂದಿನಿಂದ ಮಹಾರಾಜ ಟಿ20 ಟ್ರೋಫಿ ಆರಂಭ

Untitled design 2026 06 20T103432.126

5ನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಇಂದು(ಜೂನ್.20) ಅದ್ಧೂರಿಯಾಗಿ ಚಾಲನೆ ದೊರೆಯಲಿದೆ. ಆರು ತಂಡಗಳು ಭಾಗವಹಿಸುತ್ತಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಫೈನಲ್‌ ಸೇರಿದಂತೆ ಒಟ್ಟು 34 ಪಂದ್ಯಗಳು ನಡೆಯಲಿದ್ದು, 23 ದಿನಗಳ ಕಾಲ ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಕ್ರಿಕೆಟ್ ರಸದೌತಣ ನಡೆಯಲಿದೆ.

ಟೂರ್ನಿಯ ಮೊದಲ ಹಂತಕ್ಕೆ ಮೈಸೂರು ಆತಿಥ್ಯ ವಹಿಸುತ್ತಿದ್ದು, ಜೂನ್‌ 20ರಿಂದ 26ರವರೆಗೆ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್‌ ತಂಡಕ್ಕೆ ಶಿವಮೊಗ್ಗ ಯೋಧಾಸ್‌ ಸವಾಲು ಎದುರಾಗಲಿದೆ. ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ಹಾಗೂ ಹುಬ್ಬಳ್ಳಿ ಟೈಗರ್ಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಉಳಿದ ಎರಡು ತಂಡಗಳಾಗಿವೆ.

ತಂಡಗಳ ನಾಯಕತ್ವದ ಜವಾಬ್ದಾರಿಯನ್ನು ಅನುಭವಿ ಆಟಗಾರರಿಗೆ ನೀಡಲಾಗಿದೆ. ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಶುಭಾಂಗ್‌ ಹೆಗಡೆ ಮುನ್ನಡೆಸಲಿದ್ದು, ಗುಲ್ಬರ್ಗಾ ಮಿಸ್ಟಿಕ್ಸ್‌ಗೆ ಮನೀಶ್‌ ಪಾಂಡೆ ನಾಯಕತ್ವ ವಹಿಸಿದ್ದಾರೆ. ಮೈಸೂರು ವಾರಿಯರ್ಸ್‌ ತಂಡಕ್ಕೆ ವೈಶಾಕ್‌ ವಿಜಯ್‌ಕುಮಾರ್‌, ಶಿವಮೊಗ್ಗ ಯೋಧಾಸ್‌ಗೆ ಆರ್‌. ಸ್ಮರಣ್‌, ಕೋಸ್ಟಲ್‌ ಕಿಂಗ್ಸ್‌ ಮಂಗಳೂರಿಗೆ ಕರುಣ್‌ ನಾಯರ್‌ ಹಾಗೂ ಹುಬ್ಬಳ್ಳಿ ಟೈಗರ್ಸ್‌ಗೆ ಅನೀಶ್ವರ್‌ ಗೌತಮ್‌ ನಾಯಕರಾಗಿದ್ದಾರೆ.

ಮೈಸೂರಿನಲ್ಲಿ ಮೊದಲ ಹಂತದ ಪಂದ್ಯಗಳು ಮುಕ್ತಾಯವಾದ ಬಳಿಕ, ಜೂನ್‌ 27ರಿಂದ ಜುಲೈ 3ರವರೆಗೆ ಹುಬ್ಬಳ್ಳಿಯಲ್ಲಿ ಎರಡನೇ ಹಂತದ ಪಂದ್ಯಗಳು ನಡೆಯಲಿವೆ. ಅಂತಿಮ ಹಂತದ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದ್ದು, ಜುಲೈ 5ರಿಂದ 12ರವರೆಗೆ ಪಂದ್ಯಗಳು ಆಯೋಜನೆಗೊಳ್ಳಲಿವೆ. ಈ ಬಾರಿ ಟೂರ್ನಿಯಲ್ಲಿ ಹಲವು ರೋಚಕ ಹಣಾಹಣಿಗಳ ಜೊತೆಗೆ ಕೆಲವು ಹೊಸ ನಿಯಮಗಳೂ ಗಮನ ಸೆಳೆಯುತ್ತಿವೆ.

ಮೊದಲ ಬಾರಿಗೆ ಡಿಆರ್‌ಎಸ್‌ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸಾಮಾನ್ಯವಾಗಿ ಅಂಪೈರ್‌ ಬ್ಯಾಟರ್‌ಗೆ ಔಟ್‌ ತೀರ್ಪು ನೀಡಿದ ಬಳಿಕ ಚೆಂಡು ಡೆಡ್‌ ಬಾಲ್‌ ಎಂದು ಪರಿಗಣಿಸಲಾಗುತ್ತದೆ. ಆದರೆ ಮಹಾರಾಜ ಟ್ರೋಫಿಯಲ್ಲಿ ಡಿಆರ್‌ಎಸ್‌ ಪರಿಶೀಲನೆಯ ಬಳಿಕ ಬ್ಯಾಟರ್‌ ನಾಟೌಟ್‌ ಎಂದು ಘೋಷಣೆಯಾದರೆ, ಆ ಎಸೆತದಲ್ಲಿ ಗಳಿಸಲಾದ ರನ್‌ಗಳನ್ನು ತಂಡದ ಒಟ್ಟು ಮೊತ್ತಕ್ಕೆ ಸೇರಿಸಲಾಗುತ್ತದೆ. ಈ ನಿಯಮವು ಬ್ಯಾಟರ್‌ಗಳಿಗೆ ಹೆಚ್ಚು ನ್ಯಾಯ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ.

ಇನ್ನೊಂದು ಪ್ರಮುಖ ಬದಲಾವಣೆ ಫ್ರೀ-ಹಿಟ್‌ ನಿಯಮಕ್ಕೆ ಸಂಬಂಧಿಸಿದೆ. ಫ್ರೀ-ಹಿಟ್‌ ಎಸೆತದಲ್ಲಿ ಬ್ಯಾಟರ್‌ ಬೌಲ್ಡ್‌ ಅಥವಾ ಕ್ಯಾಚ್‌ ಆದರೂ ಔಟ್‌ ಆಗುವುದಿಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ ಓಡಿ ಗಳಿಸುವ ರನ್‌ಗಳನ್ನು ಇನ್ನು ಮುಂದೆ ಪರಿಗಣಿಸಲಾಗುವುದಿಲ್ಲ. ನೋ-ಬಾಲ್‌ ಬಳಿಕ ಉತ್ತಮ ಎಸೆತ ಮಾಡುವ ಬೌಲರ್‌ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ನಿಯಮ ಜಾರಿಗೆ ಬಂದಿದೆ.

ಅದೇ ರೀತಿ, ಟಾಸ್‌ಗೆ ಮುನ್ನವೇ ಉಭಯ ತಂಡಗಳು ತಮ್ಮ ಅಂತಿಮ ಆಡುವ ಹನ್ನೊಂದರ ಪಟ್ಟಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಜೊತೆಗೆ ನಾಲ್ಕರಿಂದ ಐದು ಇಂಪ್ಯಾಕ್ಟ್‌ ಆಟಗಾರರ ಪಟ್ಟಿಯನ್ನೂ ನೀಡಬೇಕು. ಬಳಿಕ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಆಟಗಾರನನ್ನು ಇಂಪ್ಯಾಕ್ಟ್‌ ಆಟಗಾರನಾಗಿ ಬಳಸಿಕೊಳ್ಳಬಹುದು. ಆಲ್‌ರೌಂಡರ್‌ಗಳ ಮಹತ್ವ ಕಡಿಮೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.  ಹೊಸ ನಿಯಮಗಳು ಮತ್ತು ಯುವ ಪ್ರತಿಭೆಗಳ ಪ್ರದರ್ಶನದೊಂದಿಗೆ 5ನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.

Exit mobile version