ಬೆಂಗಳೂರು: ಪ್ರತಿ ವರ್ಷ ಐಪಿಎಲ್ ಸಮಯದಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಕೆಂಪು ಸಾಗರದಂತೆ ಬದಲಾಗುತ್ತದೆ. ಆದರೆ, 2026ರ ಐಪಿಎಲ್ ಆವೃತ್ತಿಯ ಕೆಲವು ಪಂದ್ಯಗಳು ಬೆಂಗಳೂರಿನಿಂದ ಹೊರಹೋಗುವ ಲಕ್ಷಣಗಳು ದಟ್ಟವಾಗಿ ಕಾಣುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (MCA) ಮಾಡಿರುವ ಒಂದು ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಪುಣೆ ಮೈದಾನಕ್ಕೆ ಆರ್ಸಿಬಿ ಆಡಳಿತ ಮಂಡಳಿ ಭೇಟಿ
ಕೆಲವು ವಾರಗಳ ಹಿಂದಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳ ಆಡಳಿತ ಮಂಡಳಿಗಳು ಪುಣೆಯ ಎಂಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಭೇಟಿ ನೀಡಿ ಮೈದಾನದ ಸೌಲಭ್ಯಗಳನ್ನು ಪರಿಶೀಲಿಸಿದ್ದವು. ಈ ಭೇಟಿಯು ಕೇವಲ ಔಪಚಾರಿಕ ಎಂದು ಭಾವಿಸಲಾಗಿತ್ತು. ಆದರೆ, ಈಗ ಎಂಸಿಎ ನೀಡಿರುವ ಅಧಿಕೃತ ಮಾಹಿತಿ ನೋಡಿದರೆ, ಈ ಎರಡು ತಂಡಗಳಲ್ಲಿ ಯಾವುದಾದರೊಂದು ತಂಡಕ್ಕೆ ಪುಣೆ ಮೈದಾನವು ‘ತವರು ಮೈದಾನ’ (Home Ground) ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಎಂಸಿಎ ಟ್ವೀಟ್ನಲ್ಲಿ ಏನಿದೆ ?
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು ತನ್ನ ಅಧಿಕೃತ ಟ್ವಿಟ್ಟರ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜಸ್ಥಾನ್ ರಾಯಲ್ಸ್ ಅಥವಾ ಆರ್ಸಿಬಿ ತಂಡಗಳ ಪೈಕಿ ಒಂದು ತಂಡದ ಮುಂಬರುವ ಪಂದ್ಯಗಳಿಗೆ ಎಂಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣವು ಆತಿಥ್ಯ ವಹಿಸುವುದು ಖಚಿತವಾಗಿದೆ. ಬಿಸಿಸಿಐ (BCCI) ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮುದ್ರೆ ಒತ್ತಲಿದ್ದು, ಪುಣೆಯಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ನಾವು ಸಿದ್ಧವಾಗಿದ್ದೇವೆ ಎಂದು ತಿಳಿಸಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುವುದಿಲ್ಲವೇ..?
ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ ನಿರ್ವಹಣೆ ಅಥವಾ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಆರ್ಸಿಬಿ ತನ್ನ ಕೆಲವು ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಇದು ನಿಜವಾದರೆ, ಬೆಂಗಳೂರಿನ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ತವರು ನೆಲದಲ್ಲಿ ನೋಡುವ ಅವಕಾಶದಿಂದ ವಂಚಿತರಾಗಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡವು ಈಗಾಗಲೇ ಜೈಪುರದ ಜೊತೆಗೆ ಜೋಧ್ಪುರ ಅಥವಾ ಗುವಾಹಟಿಯನ್ನು ಆಯ್ದುಕೊಳ್ಳುವ ಇತಿಹಾಸ ಹೊಂದಿರುವುದರಿಂದ, ಈಗ ಪುಣೆ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಬಿಸಿಸಿಐ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವವರೆಗೆ ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳು ಸಂಕಷ್ಟದಲ್ಲಿದ್ದಾರೆ.
