ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಫೈನಲ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐತಿಹಾಸಿಕ ಗೆಲುವಿನ ಜೊತೆಗೆ ಆಟಗಾರರ ನಡುವಿನ ಹೈವೋಲ್ಟೇಜ್ ವಾಕ್ಸಮರಕ್ಕೂ ಸಾಕ್ಷಿಯಾಗಿದೆ. ಗುಜರಾತ್ ಟೈಟಾನ್ಸ್ (GT) ವಿರುದ್ಧದ ಅಂತಿಮ ಹಣಾಹಣಿಯಲ್ಲಿ ಆರ್ಸಿಬಿ ಭರ್ಜರಿಯಾಗಿ ಕಪ್ ಗೆದ್ದಿದೆ. ಆದರೆ ಈ ಪಂದ್ಯದ ವೇಳೆ ಮೈದಾನದಲ್ಲಿ ನಡೆದ ಒಂದು ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕೊಹ್ಲಿ-ಸಾಯಿ ಸುದರ್ಶನ್ ನಡುವೆ ವಾಕ್ಸಮರ!
ಆರ್ಸಿಬಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಫ್ರಂಟ್ ಫೀಲ್ಡಿಂಗ್ನಲ್ಲಿದ್ದ ಗುಜರಾತ್ ಟೈಟಾನ್ಸ್ ಆಟಗಾರ ಸಾಯಿ ಸುದರ್ಶನ್, ಭರ್ಜರಿ ಫಾರ್ಮ್ನಲ್ಲಿದ್ದ ‘ಚೇಸ್ ಮಾಸ್ಟರ್’ ವಿರಾಟ್ ಕೊಹ್ಲಿಯನ್ನು ಗುರಿಯಾಗಿಸಿ ಏನನ್ನೋ ಹೇಳಿ ಕೆಣಕುವ ಪ್ರಯತ್ನ ಮಾಡಿದರು. ಇದರಿಂದ ಸಿಟ್ಟಾದ ಕೊಹ್ಲಿ ಕೂಡ ತಕ್ಷಣವೇ ತಿರುಗೇಟು ನೀಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಸಾಯಿ ಸುದರ್ಶನ್, ಬಳಿಕ ಕೊಹ್ಲಿ ಬಳಿ ತೆರಳಿ ಸಮಜಾಯಿಷಿ ನೀಡಲು ಯತ್ನಿಸಿದರು.
ಆದರೆ, ಇದರಿಂದ ಸಮಾಧಾನಗೊಳ್ಳದ ವಿರಾಟ್ ಕೊಹ್ಲಿ, ಸಾಯಿ ಸುದರ್ಶನ್ಗೆ ಮುಟ್ಟಿ ನೋಡಿಕೊಳ್ಳುವಂತಹ ಖಡಕ್ ಉತ್ತರ ನೀಡಿದ್ದಾರೆ. ಸುಖಾಸುಮ್ಮನೆ ವಿರಾಟ್ ಕೊಹ್ಲಿಯನ್ನು ಕೆಣಕಲು ಹೋಗಿ ಪೇಚಿಗೆ ಸಿಲುಕಿದ ಗುಜರಾತ್ ಆಟಗಾರ ಕಕ್ಕಾಬಿಕ್ಕಿಯಾಗಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳು ಸಾಯಿ ಸುದರ್ಶನ್ ವಿರುದ್ಧ ತೀವ್ರ ಕೆಂಗಣ್ಣು ಬೀರಿದ್ದಾರೆ. ಇದಕ್ಕೂ ಮುನ್ನ ಮೊಹಮ್ಮದ್ ಸಿರಾಜ್ ಹಾಗೂ ವೆಂಕಟೇಶ್ ಅಯ್ಯರ್ ನಡುವೆಯೂ ಮೈದಾನದಲ್ಲಿ ಮಾತಿನ ಚಕಮಕಿ ನಡೆದಿತ್ತು.
ಆರ್ಸಿಬಿಗೆ 2ನೇ ಬಾರಿ ಐಪಿಎಲ್ ಕಿರೀಟ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್ಗಳಲ್ಲಿ 155 ರನ್ ಕಲೆಹಾಕಿತ್ತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೇವಲ 18 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಬಾರಿಸುವ ಮೂಲಕ ಭರ್ಜರಿ ಜಯ ಸಾಧಿಸಿತು. ಈ ಅಮೋಘ ಗೆಲುವಿನೊಂದಿಗೆ ಆರ್ಸಿಬಿ ಸತತ 2ನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ಬರೆದಿದೆ.
