ಧರ್ಮಶಾಲಾ: ಹಿಮಾಚಲ ಪ್ರದೇಶದ ಧರ್ಮಶಾಲಾದ ಸುಂದರ ಮೈದಾನದಲ್ಲಿ ಇಂದು ನಡೆದ ಹೈ-ವೋಲ್ಟೇಜ್ ಮೂರನೇ T20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಭಾರತ ತಂಡ, ದಕ್ಷಿಣ ಆಫ್ರಿಕಾ ತಂಡವನ್ನು ಏಳು ವಿಕೆಟ್ಗಳ ಭರ್ಜರಿ ಅಂತರದಿಂದ ಸೋಲಿಸಿತು. ಈ ಜಯದೊಂದಿಗೆ ಐದು ಪಂದ್ಯಗಳ T20 ಸರಣಿಯಲ್ಲಿ ಭಾರತ 2-1ರ ಮಹತ್ವದ ಮುನ್ನಡೆ ಸಾಧಿಸಿ, ಸರಣಿ ಗೆಲುವಿನ ಸನಿಹಕ್ಕೆ ತಲುಪಿದೆ.
ಟಾಸ್ ಗೆದ್ದ ಭಾರತದ ನಾಯಕ ನಿರ್ಧಾರದಂತೆ ಮೊದಲು ಬೌಲಿಂಗ್ ಆಯ್ದುಕೊಂಡಿತು. ಭಾರತದ ಬೌಲಿಂಗ್ ವಿಭಾಗವು ತಕ್ಷಣವೇ ಪ್ರಭಾವ ಬೀರಿ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ಗಳು ಮೊದಲ ಓವರ್ನಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು. ಇದರ ಪರಿಣಾಮವಾಗಿ, ದಕ್ಷಿಣ ಆಫ್ರಿಕಾ ತಂಡ ಪವರ್ಪ್ಲೇನ ಆರು ಓವರ್ಗಳಲ್ಲಿಯೇ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.
ನಂತರದ ಓವರ್ಗಳಲ್ಲಿಯೂ ಆಫ್ರಿಕಾ ತಂಡವು ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಕಳೆದುಕೊಳ್ಳುವುದನ್ನು ಮುಂದುವರೆಸಿತು. ಆದಾಗ್ಯೂ, ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಏಕಾಂಗಿಯಾಗಿ ಆಟವಾಡಿ ಅರ್ಧಶತಕ ಗಳಿಸಿ ತಂಡವನ್ನು 100 ರನ್ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅವರು 46 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್ಗಳ ಸಹಾಯದಿಂದ 61 ರನ್ಗಳನ್ನು ಗಳಿಸಿದರು.
ಮಾರ್ಕ್ರಾಮ್ ಹೊರತುಪಡಿಸಿ, ಡೊನೊವಾನ್ ಫೆರೇರಾ 20 ರನ್ಗಳ ಕೊಡುಗೆ ನೀಡಿದರೆ, ಅನ್ರಿಚ್ ನೋಕಿಯಾ 12 ರನ್ಗಳಿಗೆ ಔಟಾದರು. ಈ ಮೂವರು ಬ್ಯಾಟ್ಸ್ಮನ್ಗಳನ್ನು ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ಇತರೆ ಯಾವುದೇ ಬ್ಯಾಟ್ಸ್ಮನ್ಗಳು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಇದರ ಫಲವಾಗಿ, ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್ಗಳಲ್ಲಿ ಕೇವಲ 117 ರನ್ಗಳಿಗೆ ಆಲೌಟ್ ಆಯಿತು.
ಈ ಪಂದ್ಯದ ಭಾರತದ ಬೌಲಿಂಗ್ ಪ್ರದರ್ಶನದ ವಿಶೇಷತೆ ಏನೆಂದರೆ, ತಂಡದ ಎಲ್ಲಾ ಆರು ಬೌಲರ್ಗಳು ಕನಿಷ್ಠ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಸಹ ತಲಾ ಎರಡು ವಿಕೆಟ್ ಕಬಳಿಸಿ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಸಿಂಹಸ್ವಪ್ನವಾದರು. ಅನುಭವಿ ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಸಹ ತಲಾ ಒಂದು ವಿಕೆಟ್ ಪಡೆದರು.
ಕೇವಲ 118 ರನ್ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ, ಆರಂಭಿಕ ಬ್ಯಾಟ್ಸ್ಮನ್ಗಳಾದ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ಸ್ಫೋಟಕ ಆರಂಭ ನೀಡಿದರು. ಅಭಿಷೇಕ್ ಶರ್ಮಾ ಅವರು ದಕ್ಷಿಣ ಆಫ್ರಿಕಾದ ಬೌಲರ್ಗಳ ಮೇಲೆ ಮುಗಿಬಿದ್ದು ಕೇವಲ 18 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ಗಳೊಂದಿಗೆ 35 ರನ್ಗಳ ವೇಗದ ಇನ್ನಿಂಗ್ಸ್ ಆಡಿ, ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರಿಬ್ಬರ ಆಟದಿಂದಾಗಿ, ಮೊದಲ ವಿಕೆಟ್ಗೆ 60 ರನ್ಗಳ ಜೊತೆಯಾಟ ಕೇವಲ 5 ಓವರ್ಗಳಲ್ಲಿ ಗಳಿಸಿದರು.
ಆ ಬಳಿಕ, ಕಾರ್ಬಿನ್ ಬಾಷ್ ಬೌಲಿಂಗ್ನಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಅಭಿಷೇಕ್ ಔಟಾದರೂ, ಮೂರನೇ ಕ್ರಮಾಂಕದಲ್ಲಿ ಬಂದ ತಿಲಕ್ ವರ್ಮಾ ಮತ್ತು ಶುಭ್ಮನ್ ಗಿಲ್ ಎರಡನೇ ವಿಕೆಟ್ಗೆ 32 ರನ್ ಸೇರಿಸಿದರು. ಹಿಂದಿನ ಪಂದ್ಯಗಳಲ್ಲಿ ವಿಫಲರಾಗಿದ್ದ ಶುಭ್ಮನ್ ಗಿಲ್ ಈ ಪಂದ್ಯದಲ್ಲಿ 28 ಎಸೆತಗಳಲ್ಲಿ 28 ರನ್ ಗಲಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಕೂಡ ಕೇವಲ 12 ರನ್ಗಳಿಗೆ ಔಟಾದ ನಂತರ, ತಿಲಕ್ ವರ್ಮಾ ಮತ್ತು ಶಿವಂ ದುಬೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ತಿಲಕ್ ವರ್ಮಾ 34 ಎಸೆತಗಳಲ್ಲಿ 25 ರನ್ ಗಳಿಸಿ ಅಜೇಯರಾಗಿ ಉಳಿದರೆ, ಶಿವಂ ದುಬೆ ಕೇವಲ 4 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ನೊಂದಿಗೆ 10 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ ತಂಡವು 15.5 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 120 ರನ್ ಗಳಿಸುವ ಮೂಲಕ ಭಾರತ ತಂಡ ಗೆಲುವು ಸಾಧಿಸಿದೆ.
ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ, ಮಾರ್ಕೊ ಯಾನ್ಸೆನ್ ಮತ್ತು ಕಾರ್ಬಿನ್ ಬಾಷ್ ತಲಾ ಒಂದು ವಿಕೆಟ್ ಪಡೆದರು. ಈ ಜಯದೊಂದಿಗೆ ಭಾರತ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿ, ಮುಂದಿನ ಪಂದ್ಯಗಳಲ್ಲಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
