ಮಳೆ ಭೀತಿ: ಇಂಡಿಯಾ-ಪಾಕ್ ಟಿ20 ವಿಶ್ವಕಪ್ ಪಂದ್ಯ ರದ್ದಾಗುವ ಸಾಧ್ಯತೆ!

Untitled design 2026 02 13T225811.451

ಕೊಲಂಬೊ, ಫೆ.13: ಕ್ರಿಕೆಟ್ ಪ್ರಿಯರ ಮಹಾಕುಂಭವೆಂದೇ ಖ್ಯಾತಿ ಪಡೆದಿರುವ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಟಿ20 ವಿಶ್ವಕಪ್ 2026 (T20 World Cup 2026) ಪಂದ್ಯವು ಫೆಬ್ರವರಿ 15 ರ ಭಾನುವಾರದಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಎರಡೂ ತಂಡಗಳಿಗೆ ಇದು ಮೂರನೇ ಪಂದ್ಯವಾಗಿದ್ದು, ಇದುವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ಮತ್ತು ಪಾಕಿಸ್ತಾನ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸೂಪರ್ 8 ಸುತ್ತಿಗೆ ಅಧಿಕೃತವಾಗಿ ಲಗ್ಗೆಯಿಡಲಿವೆ. 

ಆದರೆ, ಈ ಬಾರಿಯ ಭಾರತ-ಪಾಕಿಸ್ತಾನ ಪಂದ್ಯವನ್ನು ನೋಡಲು ಕಾತುರದಿಂದ ಕಾದು ಕುಳಿತಿರುವ ಅಭಿಮಾನಿಗಳ ಕನಸಿಗೆ ಶ್ರೀಲಂಕಾದ ಹವಾಮಾನ ಇಲಾಖೆ ನೀಡಿರುವ ವರದಿ ತಣ್ಣೀರೆರಚಿದೆ. ವರದಿಯ ಪ್ರಕಾರ, ಪಂದ್ಯ ನಡೆಯುವ ಫೆಬ್ರವರಿ 15 ಮತ್ತು 16 ರಂದು ಕೊಲಂಬೊ ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ . ಕೆಲವು ಮುನ್ಸೂಚನೆಗಳ ಪ್ರಕಾರ, ಈ ದಿನ 24 ಗಂಟೆಗಳ ಕಾಲವೂ ಮಳೆಯಾಗಬಹುದು ಎಂದು ಅಂದಾಜಿಸಲಾಗಿದ್ದು, ಪಂದ್ಯದ ಸಮಯದಲ್ಲಿ ಸುಮಾರು 60% ರಷ್ಟು ಮಳೆಯಾಗುವ ಸಾಧ್ಯತೆಯಿದೆ..

ಇದರಿಂದ ಪಂದ್ಯ ವಿಳಂಬವಾಗಬಹುದು ಅಥವಾ ಓವರ್‌ಗಳನ್ನು ಕಡಿತಗೊಳಿಸಿ ಆಡಬೇಕಾಗಬಹುದು. ತೀವ್ರ ಮಳೆಯಾದರೆ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಅಂಕಗಳನ್ನು ಹಂಚಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು.

ಕೊಲಂಬೊ ಪಿಚ್: ಸ್ಪಿನ್ ಸ್ನೇಹಿ ಪರೀಕ್ಷೆ

ಕೊಲಂಬೊ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಸುಲಭವೆನಿಸಿದರೂ, ಪಂದ್ಯ ಮುಂದುವರಿದಂತೆ ಪಿಚ್ ನಿಧಾನಗೊಳ್ಳುವ ಲಕ್ಷಣಗಳಿವೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ (dew) ಪರಿಣಾಮ ಬೀರುವ ಸಾಧ್ಯತೆ ಇದ್ದರೂ, ಆರಂಭಿಕ ಹಂತದಲ್ಲಿ ಸ್ಪಿನ್ ದಾಳಿ ನಿರ್ಣಾಯಕವಾಗಬಹುದು.

ಭಾರತ ತಂಡ ಸಾಮಾನ್ಯವಾಗಿ ಬಲಿಷ್ಠ ಬ್ಯಾಟಿಂಗ್ ಮೇಲೆ ಅವಲಂಬಿತವಾಗಿದೆ. ಆದರೆ ಸ್ಪಿನ್ ಸವಾಲಿನ ನಡುವೆ ಮಧ್ಯಮ ಕ್ರಮದ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯಾಗಿ ಆಡಬೇಕಾಗುತ್ತದೆ. ಪಾಕಿಸ್ತಾನ ತಂಡ ಉತ್ತಮ ಸ್ಪಿನ್ ಬೌಲಿಂಗ್ ಆಯ್ಕೆಯನ್ನು ಹೊಂದಿರುವುದರಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಇದು ಕಠಿಣ ಪರೀಕ್ಷೆಯಾಗಬಹುದು.

 ಮುಖಾಮುಖಿ ದಾಖಲೆ: ಭಾರತಕ್ಕೇ ಮೇಲುಗೈ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಎಂಟು ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಏಳು ಪಂದ್ಯಗಳಲ್ಲಿ ಭಾರತ ಜಯಗಳಿಸಿದ್ದು, ಪಾಕಿಸ್ತಾನ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಈ ಅಂಕಿಅಂಶಗಳು ಭಾರತೀಯ ತಂಡದ ಪರವಾಗಿದ್ದರೂ, ಫಾರ್ಮ್ ಮತ್ತು ಪರಿಸ್ಥಿತಿಗಳನ್ನು ನೋಡಿದರೆ ಪಾಕ್ ತಂಡವನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ.

ವಿಶೇಷವಾಗಿ ಶ್ರೀಲಂಕಾ ನೆಲದಲ್ಲಿ ಭಾರತ ಹಿಂದೆಯೂ ಸವಾಲುಗಳನ್ನು ಎದುರಿಸಿದೆ. ಆದ್ದರಿಂದ ಈ ಪಂದ್ಯದಲ್ಲಿ  ಜಾಗರೂಕ ಆಟ ಪ್ರದರ್ಶಿಸಬೇಕಾಗಿದೆ. ಬ್ಯಾಟಿಂಗ್‌ನಲ್ಲಿ ಸ್ಥಿರತೆ, ಸ್ಪಿನ್ ಎದುರಿಸುವ ಸಾಮರ್ಥ್ಯ ಮತ್ತು ಫೀಲ್ಡಿಂಗ್ ಶಿಸ್ತು ನಿರ್ಣಾಯಕವಾಗಬಹುದು.

ಅಭಿಮಾನಿಗಳ ಕಾತರ

ಭಾರತ–ಪಾಕಿಸ್ತಾನ ಪಂದ್ಯ ಎಂದರೆ ಕೇವಲ ಕ್ರಿಕೆಟ್ ಅಲ್ಲ, ಅದು ಭಾವನಾತ್ಮಕ ಹಬ್ಬ. ವಿಶ್ವದಾದ್ಯಂತ ಇರುವ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಮಳೆ ಭೀತಿ ಈ ರೋಚಕ ಹೋರಾಟದ ಮೇಲೆ ನೆರಳು ಬೀರುವಂತೆ ಕಾಣುತ್ತಿದೆ.

 

Exit mobile version