ಬಾಂಗ್ಲಾದೇಶಕ್ಕೆ ಬಿಗ್ ಶಾಕ್ ನೀಡಿದ ಐಸಿಸಿ: ಭಾರತದಲ್ಲೇ ನಡೆಯಲಿದೆ ಟಿ20 ವಿಶ್ವಕಪ್

Untitled design 2026 01 07T101200.370

ದುಬೈ: ಮುಂಬರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಹಠಮಾರಿ ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕಡಾಖಂಡಿತವಾಗಿ ತಿರಸ್ಕರಿಸಿದೆ. ಇದರಿಂದಾಗಿ ಬಾಂಗ್ಲಾದೇಶ ತಂಡವು ಅನಿವಾರ್ಯವಾಗಿ ಭಾರತಕ್ಕೆ ಪ್ರಯಾಣಿಸಬೇಕಿದೆ, ಇಲ್ಲದಿದ್ದರೆ ವಿಶ್ವಕಪ್ ಅಂಕಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.

ವಿವಾದದ ಮೂಲವೇನು?

ಈ ವಿವಾದದ ಹಿಂದೆ ಕ್ರೀಡೆಗಿಂತ ರಾಜಕೀಯ ಮತ್ತು ಇತ್ತೀಚಿನ ಐಪಿಎಲ್ ಬೆಳವಣಿಗೆಗಳೇ ಪ್ರಮುಖ ಪಾತ್ರ ವಹಿಸಿವೆ. ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರಹಮಾನ್ ಅವರನ್ನು ಮುಂಬರುವ ಐಪಿಎಲ್ ಆವೃತ್ತಿಯಿಂದ ಹೊರಹಾಕಿದ ಬಿಸಿಸಿಐ ನಿರ್ಧಾರವು ಬಾಂಗ್ಲಾ ಕ್ರಿಕೆಟ್ ಮಂಡಳಿಯನ್ನು ಕೆರಳಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಭಾರತದ ಹಲವು ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಬಾಂಗ್ಲಾ ಆಟಗಾರರಿಗೆ ಐಪಿಎಲ್‌ನಲ್ಲಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರು. ಇದರ ಪರಿಣಾಮವಾಗಿ ಮುಸ್ತಾಫಿಜುರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

ಇದಕ್ಕೆ ತಿರುಗೇಟು ನೀಡಲು ಮುಂದಾದ ಬಾಂಗ್ಲಾದೇಶ, ಭಾರತದಲ್ಲಿ ತಮಗೆ ಭದ್ರತೆಯ ಆತಂಕವಿದೆ ಎಂಬ ನೆಪವೊಡ್ಡಿ, ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿತ್ತು. ಅಷ್ಟೇ ಅಲ್ಲದೆ, ತನ್ನ ದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸುವ ಮೂಲಕ ಭಾರತದ ವಿರುದ್ಧ ಆಕ್ರೋಶ ಹೊರಹಾಕಿತ್ತು.

ಐಸಿಸಿ ಕಠಿಣ ಎಚ್ಚರಿಕೆ:

ಇತ್ತೀಚೆಗೆ ನಡೆದ ವರ್ಚುವಲ್ ಸಭೆಯಲ್ಲಿ ಐಸಿಸಿ ಅಧಿಕಾರಿಗಳು ಬಾಂಗ್ಲಾದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ವಿಶ್ವಕಪ್‌ನ ವೇಳಾಪಟ್ಟಿ ಅಥವಾ ಸ್ಥಳಗಳಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಒಂದು ವೇಳೆ ಬಾಂಗ್ಲಾದೇಶ ತಂಡವು ಭಾರತಕ್ಕೆ ಬರಲು ನಿರಾಕರಿಸಿದರೆ, ಆ ಪಂದ್ಯಗಳ ಅಂಕಗಳನ್ನು ಎದುರಾಳಿ ತಂಡಗಳಿಗೆ ನೀಡಲಾಗುವುದು ಮತ್ತು ಬಾಂಗ್ಲಾ ತಂಡವು ಟೂರ್ನಿಯಿಂದ ಹೊರಬೀಳುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಫಾರೂಕ್ ಅಹ್ಮದ್ ಈ ಕುರಿತು ಪ್ರತಿಕ್ರಿಯಿಸಿ, ಎರಡು ದೇಶಗಳ ನಡುವಿನ ರಾಜಕೀಯ ಪರಿಸ್ಥಿತಿಯು ಕ್ರಿಕೆಟ್ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ, ಐಸಿಸಿಯಿಂದ ಸ್ಥಳಾಂತರ ನಿರಾಕರಣೆಯ ಅಧಿಕೃತ ಪತ್ರ ನಮಗೆ ಇನ್ನೂ ತಲುಪಿಲ್ಲ ಎಂದು ಬಾಂಗ್ಲಾ ಮೂಲಗಳು ಸಮರ್ಥಿಸಿಕೊಳ್ಳುತ್ತಿವೆ. ಒಟ್ಟಾರೆಯಾಗಿ, ಕ್ರಿಕೆಟ್ ಅಂಗಳದಲ್ಲಿ ಈಗ ‘ಭಾರತ vs ಬಾಂಗ್ಲಾದೇಶ’ ನಡುವಿನ ಶೀತಲ ಸಮರ ತಾರಕಕ್ಕೇರಿದೆ.

Exit mobile version