ಆಪರೇಷನ್ ಸಿಂದೂರದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಶಕ್ತಿಯನ್ನು ತೋರಿಸಿದೆ: ಯೋಗಿ ಆದಿತ್ಯನಾಥ್

Untitled design 2025 05 11t165331.655
ADVERTISEMENT
ADVERTISEMENT

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಏನೆಂಬುದು ಪಾಕಿಸ್ತಾನದ ಜನರಿಗೆ ಅರಿವಾಗಿದೆ ಎಂದು ತಿಳಿಸಿದ್ದಾರೆ.

ಲಕ್ನೋದಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಯೋಗಿ, ಪಾಕಿಸ್ತಾನದ ವಿರುದ್ಧ ನಡೆದ ಈ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಪರಿಣಾಮಕಾರಿ ಬಳಕೆಯನ್ನು ಹೇಳಿದರು.

“ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಶಕ್ತಿಯನ್ನು ಪಾಕಿಸ್ತಾನ ಚೆನ್ನಾಗಿ ಅರಿತಿದೆ. ಯಾರಾದರೂ ಇದನ್ನು ತಪ್ಪಿಸಿಕೊಳ್ಳಲು ಯತ್ನಿಸಿದರೆ, ಅದರ ಪರಿಣಾಮವನ್ನು ಪಾಕಿಸ್ತಾನದಿಂದಲೇ ಕೇಳಬಹುದು,” ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು. ಭಯೋತ್ಪಾದನೆಯ ಕುರಿತು ಮಾತನಾಡುತ್ತಾ, “ಭಯೋತ್ಪಾದನೆ ಎಂದಿಗೂ ನೇರವಾಗದ ನಾಯಿಯ ಬಾಲದಂತೆ. ಅದಕ್ಕೆ ಅದರದೇ ಭಾಷೆಯಲ್ಲಿ ಉತ್ತರಿಸಬೇಕು,” ಎಂದು ಅವರು ಹೇಳಿದರು.

ಉತ್ತರ ಪ್ರದೇಶದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಉತ್ಪಾದನೆಗಾಗಿ ರಾಜ್ಯ ಸರ್ಕಾರ 200 ಎಕರೆ ಭೂಮಿಯನ್ನು ಮಂಜೂರು ಮಾಡಿದೆ ಎಂದು ಯೋಗಿ ತಿಳಿಸಿದರು. ಈ ಯೋಜನೆಯು ಶೀಘ್ರದಲ್ಲೇ ಉತ್ಪಾದನೆಯನ್ನು ಆರಂಭಿಸಲಿದೆ, ಇದು ರಾಷ್ಟ್ರದ ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲಿದೆ. “ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿರುವಂತೆ, ಇನ್ಮುಂದೆ ಯಾವುದೇ ಭಯೋತ್ಪಾದನಾ ಕೃತ್ಯವನ್ನು ಯುದ್ಧ ಕೃತ್ಯವೆಂದು ಪರಿಗಣಿಸಲಾಗುವುದು. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಗ್ರಹಿಸದ ಹೊರತು ಈ ಸಮಸ್ಯೆಗೆ ಪರಿಹಾರ ಸಿಗದು,” ಎಂದು ಯೋಗಿ ಹೇಳಿದರು.

ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಇಸ್ಲಾಮಿಕ್ ಭಯೋತ್ಪಾದಕರ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಗಳ ಪ್ರಮುಖ ನೆಲೆಗಳನ್ನು ಗುರಿಯಾಗಿಸಿಕೊಂಡು ಯಶಸ್ವಿಯಾಗಿ ದಾಳಿ ನಡೆಸಲಾಯಿತು.

ಯೋಗಿ ಆದಿತ್ಯನಾಥ್ ಅವರು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನ ಹೋರಾಟದ ಅಗತ್ಯವನ್ನು  ಹೇಳಿದರು. “ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಎಲ್ಲರೂ ಒಂದೇ ಧ್ವನಿಯಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಭಾರತ ಸಂಕಲ್ಪಬದ್ಧವಾಗಿದೆ,” ಎಂದು ಅವರು ಹೇಳಿದರು. ಬ್ರಹ್ಮೋಸ್ ಕ್ಷಿಪಣಿಯ ಉತ್ಪಾದನಾ ಘಟಕವು ಉತ್ತರ ಪ್ರದೇಶದ ಆರ್ಥಿಕತೆಗೆ ಮಾತ್ರವಲ್ಲ, ರಾಷ್ಟ್ರದ ರಕ್ಷಣಾ ಸಾಮರ್ಥ್ಯಕ್ಕೂ ಗಣನೀಯ ಕೊಡುಗೆ ನೀಡಲಿದೆ ಎಂದು ಯೋಗಿ ವಿಶ್ವಾಸ ವ್ಯಕ್ತಪಡಿಸಿದರು.

Exit mobile version