ಜಯವಾಡದಲ್ಲಿ ಭೀಕರ ಘಟನೆ: 3 ವರ್ಷದ ಮಗುವಿನ ಮೇಲೆ ಆ್ಯಸಿಡ್ ದಾಳಿ ಮಾಡಿದ ಶಿಕ್ಷಕಿ..!

Untitled design (80)

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಶಾಲೆಗೆ ಕಲಿಯಲು ಹೋಗಿದ್ದ ಮೂರು ವರ್ಷದ ಹಸುಳೆಯ ಮೇಲೆ ಆ್ಯಸಿಡ್ ದಾಳಿಯಾಗಿದೆ ಎಂಬ ದೂರು ದಾಖಲಾಗಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಶಾಲೆಯ ಶಿಕ್ಷಕಿಯೇ ಮಗುವಿನ ಮೇಲೆ ಈ ಕ್ರೂರ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಹಿನ್ನೆಲೆ

ಫೆಬ್ರವರಿ 23ರಂದು ಈ ಭೀಕರ ಘಟನೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದು ಬೆಳಿಗ್ಗೆ ಎಂದಿನಂತೆ ತಾಯಿ ಮಗುವನ್ನು ಶಾಲೆಯಲ್ಲಿ ಬಿಟ್ಟು ಬಂದಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಶಾಲೆಯಿಂದ ಪೋಷಕರಿಗೆ ಕರೆ ಬಂದಿದೆ. ನಿಮ್ಮ ಮಗು ಶೌಚಾಲಯದಲ್ಲಿ ಆಯತಪ್ಪಿ ಬಿದ್ದಿದೆ, ಬಂದು ಕರೆದುಕೊಂಡು ಹೋಗಿ ಎಂದು ಶಿಕ್ಷಕಿಯೊಬ್ಬರು ಮಾಹಿತಿ ನೀಡಿದ್ದರು. ಆತಂಕದಿಂದ ಶಾಲೆಗೆ ಧಾವಿಸಿದ ಪೋಷಕಕರು ಮಗುವಿನ ಸ್ಥಿತಿ ಕಂಡು ಹೌಹಾರಿದ್ದಾರೆ.

ಮಗುವಿನ ದೇಹದ ಖಾಸಗಿ ಅಂಗಗಳ ಭಾಗದಲ್ಲಿ ತೀವ್ರವಾದ ಸುಟ್ಟ ಗಾಯಗಳಾಗಿದ್ದವು. ಕೂಡಲೇ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವನ್ನು ಪರೀಕ್ಷಿಸಿದ ವೈದ್ಯರು ನೀಡಿದ ಮಾಹಿತಿಯಂತೆ, ಮಗುವಿನ ಮೈಮೇಲಿರುವುದು ಬಿದ್ದಿದ್ದರಿಂದ ಆದ ಗಾಯಗಳಲ್ಲ, ಬದಲಾಗಿ ಆ್ಯಸಿಡ್ ದಾಳಿಯಿಂದಾದ ಸುಟ್ಟ ಗಾಯಗಳು ಎಂದು ವೈದ್ಯರು ದೃಢಪಡಿಸಿದ್ದಾರೆ.

ಈ ಘಟನೆಯ ಕುರಿತು ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದಾಗ, ಮೊದಲು ಪ್ರಕರಣವನ್ನು ಮುಚ್ಚಿಹಾಕಲು ಹಣದ ಆಮಿಷವೊಡ್ಡಿ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಲಾಯಿತು. ಆದರೆ, ಪೋಷಕರು ನ್ಯಾಯಕ್ಕಾಗಿ ಪಟ್ಟು ಹಿಡಿದಾಗ ಶಾಲಾ ಪ್ರಾಂಶುಪಾಲರು ಬೆದರಿಕೆ ಹಾಕಲು ಆರಂಭಿಸಿದ್ದಾರೆ. ನಮಗೆ ದೊಡ್ಡ ಮಟ್ಟದ ಪೊಲೀಸ್ ಪ್ರಭಾವವಿದೆ, ಈ ವಿಷಯವನ್ನು ಹೊರಗೆ ಹಾಕಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಗುವಿನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಪೋಷಕರ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬವು ವಿದ್ಯಾಧರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಆದರೆ, ಪೊಲೀಸರು ತನಿಖೆಯಲ್ಲಿ ವಿಳಂಬ ಮಾಡುತ್ತಿದ್ದಾರೆ ಮತ್ತು ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ವರ್ಷದ ಮಗುವಿನ ಮೇಲೆ ಈ ಮಟ್ಟದ ದೌರ್ಜನ್ಯ ನಡೆದಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕೂಡಲೇ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ಹಸುಳೆಯ ಜೀವನದೊಂದಿಗೆ ಆಟವಾಡಿದ ಆ ಶಿಕ್ಷಕಿ ಹಾಗೂ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದ ಶಾಲಾ ಮಂಡಳಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

Exit mobile version