ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ನಾಳೆ (ಮೇ 4) ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಮಹತ್ವದ ತಯಾರಿ ನಡೆಸುತ್ತಿದೆ.
ನಟ ವಿಜಯ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. “ಗೆದ್ದ ಕೂಡಲೇ ರೆಸಾರ್ಟ್ಗೆ ಹೊರಡಿ”.
ರೆಸಾರ್ಟ್ ಪ್ಲಾನ್ ಏಕೆ?
ಮಹಾಬಲಿಪುರಂ ಬಳಿಯ ಪೂಂಜೇರಿ ಎಂಬಲ್ಲಿ ಟಿವಿಕೆ ಪಕ್ಷವು ರೆಸಾರ್ಟ್ ಬುಕ್ ಮಾಡಿದೆ. ಫಲಿತಾಂಶ ಪ್ರಕಟವಾಗುವ ಮುನ್ನವೇ ಈ ರೆಸಾರ್ಟ್ ಬುಕಿಂಗ್ ಮಾಡಿರುವುದು ಗಮನಾರ್ಹವಾಗಿದೆ. ಗೆಲ್ಲುವ ಅಭ್ಯರ್ಥಿಗಳು ನೇರವಾಗಿ ರೆಸಾರ್ಟ್ಗೆ ಬರಬೇಕು ಎಂದು ವಿಜಯ್ ಸೂಚಿಸಿದ್ದಾರೆ.
ಈ ಕ್ರಮವು ಶಾಸಕರನ್ನು ಉಳಿಸಿಕೊಳ್ಳುವುದಕ್ಕಾಗಿ ಎಂದು ರಾಜಕೀಯ ವರ್ಗಗಳಲ್ಲಿ ಚರ್ಚೆಯಾಗುತ್ತಿದೆ. ಡಿಎಂಕೆ ಮತ್ತು ಎಐಎಡಿಎಂಕೆಗೆ ಬಹುಮತ ಸಿಗದಿದ್ದರೆ ಟಿವಿಕೆ ಕಿಂಗ್ ಮೇಕರ್ ಪಾತ್ರ ವಹಿಸುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಶಾಸಕರ ಕುದುರೆ ವ್ಯಾಪಾರ ತಡೆಯುವ ಉದ್ದೇಶದಿಂದ ಈ ರೆಸಾರ್ಟ್ ತಂತ್ರ ರೂಪಿಸಲಾಗಿದೆ ಎನ್ನಲಾಗುತ್ತಿದೆ.
ವಿಜಯ್ ಸಕ್ರಿಯತೆ :
ವಿಜಯ್ ಅವರು ಈಗಾಗಲೇ ಎಲ್ಲಾ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಟಿವಿಕೆ ಪಕ್ಷಕ್ಕೇ ಬಹುಮತ ಸಿಗುತ್ತದೆ ಎಂದು ಒಂದು ಸರ್ವೆ ಭವಿಷ್ಯ ನುಡಿದಿದೆ. ಈ ಹಿನ್ನೆಲೆಯಲ್ಲಿ ನಟ ವಿಜಯ್ ಸಖತ್ ಆಕ್ಟೀವ್ ಆಗಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಟಿವಿಕೆ ಪಕ್ಷವು ಗಣನೀಯ ಪ್ರಭಾವ ಬೀರಬಲ್ಲುದು ಎಂಬುದು ಈಗಿನ ಚರ್ಚೆಯ ಮುಖ್ಯ ವಿಷಯವಾಗಿದೆ. ನಾಳೆಯ ಫಲಿತಾಂಶ ತಮಿಳುನಾಡು ರಾಜಕೀಯದ ಮುಂದಿನ ದಿಕ್ಕನ್ನು ನಿರ್ಧರಿಸಲಿದೆ.
ನಾಳೆಯ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿರುವ ರಾಜಕೀಯ ವಲಯಗಳಲ್ಲಿ ನಟ ವಿಜಯ್ ಅವರ ರೆಸಾರ್ಟ್ ತಂತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
