ಉತ್ತರಕಾಶಿ: ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮಂಗಳವಾರ (ಆಗಸ್ಟ್ 5, 2025) ಮೇಘಸ್ಫೋಟ ಸಂಭವಿಸಿದ್ದು, ದಿಢೀರ್ ಪ್ರವಾಹ ಮತ್ತು ಭೂಕುಸಿತದಿಂದಾಗಿ ಭಾರೀ ಹಾನಿಯಾಗಿದೆ. ಈ ಘಟನೆಯಲ್ಲಿ ಐದು ಜನರ ಶವಗಳು ಪತ್ತೆಯಾಗಿವೆ ಮತ್ತು ಕೇರಳದ 28 ಪ್ರವಾಸಿಗರು ಸೇರಿ 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಈ ದುರಂತದಲ್ಲಿ ಇದುವರೆಗೆ ಐವರ ಶವಗಳು ಪತ್ತೆಯಾಗಿವೆ. ಕೇರಳ ಮೂಲದ 28 ಜನ ಸೇರಿದಂತೆ ಸುಮಾರು 50 ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಜೀವಂತವಾಗಿರುವ ಸಾಧ್ಯತೆ ಕಡಿಮೆ ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳು ಈಗಾಗಲೇ 130 ಜನರನ್ನು ಸುರಕ್ಷಿತವಾಗಿ ರಕ್ಷಿಸಿವೆ. ಆದರೆ, ಇನ್ನೂ ಹಲವರು ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. 28 ಜನ ನಾಪತ್ತೆಯಾದವರ ಪೈಕಿ 20 ಜನರು ಮಹಾರಾಷ್ಟ್ರದಲ್ಲಿ ನೆಲೆಸಿದವರಾಗಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಉಳಿದ ಎಂಟು ಮಂದಿ ಕೇರಳದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರವಾಸಿಗರಾಗಿದ್ದಾರೆ.
ಬೆಟ್ಟದ ಮೇಲ್ಬಾಗದಿಂದ ದಿಢೀರನೇ ಭಾರೀ ಮಳೆನೀರು, ಮರದ ದಿಮ್ಮಿಗಳು ಮತ್ತು ಕಲ್ಲುಮಣ್ಣಿನ ಜೊತೆಗೆ ಪ್ರವಾಹದಂತೆ ಹರಿದುಬಂದಿದೆ. ತಗ್ಗು ಪ್ರದೇಶದಲ್ಲಿದ್ದ ಥರಾಲಿ ಗ್ರಾಮದ ದೊಡ್ಡ ದೊಡ್ಡ ಕಟ್ಟಡಗಳು ಈ ಪ್ರವಾಹದ ರಭಸಕ್ಕೆ ಸಿಲುಕಿ ಕುಸಿದು ಬಿದ್ದಿವೆ. ಮನೆಗಳ ಮೇಲೆ ಬಂದ ನೀರಿನ ರಭಸಕ್ಕೆ ಕಟ್ಟಡಗಳು ನೆಲಕ್ಕುರುಳಿವೆ. ಈ ದಿಢೀರ್ ಪ್ರವಾಹದಿಂದ ಗ್ರಾಮದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಘಟನೆಗೆ ಪ್ರತಿಕ್ರಿಯಿಸಿದ್ದು, ತಕ್ಷಣವೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳ (SDRF) ತಂಡಗಳಿಗೆ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಸೂಚಿಸಿದ್ದಾರೆ. “ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಎಲ್ಲರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದು ಮುಖ್ಯಮಂತ್ರಿ ಧಾಮಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.