ತೆಲಂಗಾಣದಲ್ಲಿ ವಿದ್ಯಾರ್ಥಿ V/S ಸರ್ಕಾರ : ಹೊಡೆದಾಟ.. ಬಡಿದಾಟ..!

400 ಎಕರೆ ಕಾಡು ತೆರವಿಗೆ ಮುಂದಾದ ತೆಲಂಗಾಣ ಸರ್ಕಾರ : ಹೈದರಾಬಾದ್ ವಿವಿ ವಿದ್ಯಾರ್ಥಿಗಳ ಹೋರಾಟ

Untitled design 2025 03 31t174338.967

ತೆಲಂಗಾಣದ ಹೈದರಾಬಾದಿನಲ್ಲಿ ಕಾಂಚಿ ಗಚ್ಚಿಬೋಲಿಯಲ್ಲಿ ವಿದ್ಯಾರ್ಥಿಗಳು ಮತ್ತು ಸರ್ಕಾರದ ನಡುವೆ ರಣರಂಗವೇ ಸೃಷ್ಟಿಯಾಗಿದೆ. ಸರ್ಕಾರದ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ. ಪ್ರತಿಭಟನೆಗೆ ಕಾರಣವಾಗಿರೋದು ಹೈದರಾಬಾದ್ ಯುನಿವರ್ಸಿಟಿಗೆ ಹೊಂದಿಕೊಂಡೇ ಇರುವ ಸುಮಾರು 400 ಎಕರೆ ಅರಣ್ಯ ಭೂಮಿ.

ADVERTISEMENT
ADVERTISEMENT

ಯುನಿವರ್ಸಿಯ ಪಕ್ಕದಲ್ಲೇ ಇರುವ ಕಾಡಿನ ಪ್ರದೇಶವನ್ನು ಐಟಿ ಪಾರ್ಕ್ ಆಗಿ ಅಭಿವೃದ್ಧಿ ಪಡಿಸಲು ಮುಂದಾಗಿರುವ ತೆಲಂಗಾಣ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ.  ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕುತ್ತಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪೊಲೀಸ್ ಬಲ ಪ್ರಯೋಗಿಸಿದ್ದಾರೆ.

ಹಠ ಬಿಡದ ಸ್ಟೂಡೆಂಟ್ಸ್, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರೆ, ಪೊಲೀಸರು ಅಕ್ಷರಶಃ ಹೊಡೆದು ಬಡಿದು, ಎಳೆದೊಯ್ಯುತ್ತಿದ್ದಾರೆ. ಸರ್ಕಾರ ಅರಣ್ಯ ಭೂಮಿಯನ್ನು ಐಟಿ ಪಾರ್ಕ್ ಸ್ಥಾಪಿಸಲು ತೆರವು ಮಾಡುತ್ತಿದೆ. ರಾತ್ರೋರಾತ್ರಿ ನೂರಾರು ಜೆಸಿಬಿಗಳು ಕಾಡಿಗೆ ನುಗ್ಗಿ, ಕಾಡನ್ನು ಕತ್ತರಿಸಿ ಸಮತಟ್ಟು ಮಾಡುತ್ತಿವೆ.

ವಿಶೇಷ ಏನೆಂದರೆ ಅರಣ್ಯ ಭೂಮಿ ಒತ್ತುವರಿ ವಿರುದ್ಧ ಹೈದರಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಆ ಅರ್ಜಿ ಇನ್ನೂ ವಿಚಾರಣೆಯಲ್ಲಿರುವಾಗಲೇ ಸರ್ಕಾರ ತೆರವಿಗೆ ಮುಂದಾಗಿರುವುದು ವಿದ್ಯಾರ್ಥಿಗಳ ಆಕ್ರೋಶವನ್ನು ಇನ್ನಷ್ಟು ರೊಚ್ಚಿಗೇಳುವಂತೆ ಮಾಡಿದೆ.

ಕೆಲವು ವಿದ್ಯಾರ್ಥಿಗಳನ್ನು ಜೈಲಿಗೂ ಹಾಕಲಾಗಿದೆ. ಹೋರಾಟಕ್ಕೆ ಈಗ ಭಾರತ ರಾಷ್ಟ್ರೀಯ ಸಮಿತಿ ಕೈಜೋಡಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪರಿಸರವಾದಿಗಳ ಹೋರಾಟಕ್ಕೆ ರಾಜಕೀಯ ಬಣ್ಣವೂ ಅಂಟಿಕೊಂಡಿದೆ.

Exit mobile version