ಹೈದರಾಬಾದ್ ರಸ್ತೆಗೆ ಡೊನಾಲ್ಡ್ ಟ್ರಂಪ್ ಹೆಸರು..!

Untitled design 2025 12 08T171130.322

ಭಾರತದಲ್ಲಿ ಸ್ಥಳಗಳ ಮತ್ತು ರಸ್ತೆಗಳ ಮರುನಾಮಕರಣವು ನಿರಂತರ ಚರ್ಚೆಯ ವಿಷಯವಾಗಿದೆ. ಈ ವಿಷಯದಲ್ಲಿ ಉತ್ತರ ಪ್ರದೇಶ ಸರ್ಕಾರವು ಆಗಾಗ್ಗೆ ಸುದ್ದಿಯಲ್ಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ಹೆಸರುಗಳನ್ನು ರಸ್ತೆಗಳಿಗೆ ಇಡುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಇದೀಗ, ಈ ಮರುನಾಮಕರಣದ ವಿಚಾರದಲ್ಲಿ ತೆಲಂಗಾಣ ಸರ್ಕಾರ ಕೂಡಾ ಮುನ್ನಲೆಗೆ ಬಂದಿದ್ದು, ರಾಜಧಾನಿ ಹೈದರಾಬಾದ್‌ನ ಪ್ರಮುಖ ರಸ್ತೆಯೊಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೆಸರಿಡುವ ತೀರ್ಮಾನವು ಭಾರೀ ಚರ್ಚೆಗೆ ಗ್ರಾಸವಾಗಿದೆ.

ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಈ ಮಹತ್ವದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಮುಂಬರುವ ತೆಲಂಗಾಣ ರೈಸಿಂಗ್ ಗ್ಲೋಬಲ್ ಶೃಂಗಸಭೆಗೆ ಮುಂಚಿತವಾಗಿ ಜಾಗತಿಕ ಗಮನ ಸೆಳೆಯುವ ಮತ್ತು ರಾಜ್ಯವನ್ನು ಅಂತಾರಾಷ್ಟ್ರೀಯ ಭೂಪಟದಲ್ಲಿ ಗುರುತಿಸುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಇದಲ್ಲದೆ, ರವಿರ್ಯಾಲದಲ್ಲಿರುವ ನೆಹರು ಹೊರ ವರ್ತುಲ ರಸ್ತೆಯನ್ನು ಪ್ರಸ್ತಾವಿತ ಫ್ಯೂಚರ್ ಸಿಟಿಗೆ ಸಂಪರ್ಕಿಸುವ 100 ಮೀಟರ್ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ, ಭಾರತೀಯ ಉದ್ಯಮ ರಂಗದ ದಿಗ್ಗಜ, ಪದ್ಮಭೂಷಣ ರತನ್ ಟಾಟಾ ಅವರ ಹೆಸರಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ವಿಭಾಗದ ರವಿರ್ಯಾಲ ಇಂಟರ್‌ಚೇಂಜ್‌ನ್ನು ಈಗಾಗಲೇ “ಟಾಟಾ ಇಂಟರ್‌ಚೇಂಜ್” ಎಂದು ನಾಮಕರಣ ಮಾಡಲಾಗಿದೆ.

ಸಿಎಂ ರೇವಂತ್ ರೆಡ್ಡಿ ಸಮರ್ಥನೆ

ಜಾಗತಿಕವಾಗಿ ಪ್ರಭಾವಿ ವ್ಯಕ್ತಿಗಳು ಮತ್ತು ಪ್ರಮುಖ ಕಂಪನಿಗಳ ಹೆಸರನ್ನು ರಸ್ತೆಗಳಿಗೆ ಇಡುವ ತಮ್ಮ ನಿರ್ಧಾರವನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಖ್ಯಾತರಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಹೆಸರನ್ನು ರಸ್ತೆಗಳಿಗೆ ಇಡುವ ಮೂಲಕ ನಮ್ಮ ಸರ್ಕಾರ ಅವರನ್ನು ಗೌರವಿಸಲಿದೆ. ಇದು ಪ್ರಯಾಣಿಕರಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುವುದಲ್ಲದೆ, ಅದೇ ಸಮಯದಲ್ಲಿ ಹೈದರಾಬಾದ್ ನಗರವನ್ನು ಜಾಗತಿಕ ಮನ್ನಣೆಯ ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಕ್ರಮವು ಹೈದರಾಬಾದ್‌ನ ವರ್ಚಸ್ಸನ್ನು ಹೆಚ್ಚಿಸಿ, ಹೆಚ್ಚಿನ ಹೂಡಿಕೆ ಮತ್ತು ಜಾಗತಿಕ ಸಹಯೋಗಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಅವರ ಆಶಯವಾಗಿದೆ

ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ವಿರೋಧ

ಆದಾಗ್ಯೂ, ತೆಲಂಗಾಣ ಸರ್ಕಾರದ ಈ ಪ್ರಸ್ತಾವನೆಗೆ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸಚಿವ ಮತ್ತು ಪ್ರಬಲ ಬಿಜೆಪಿ ನಾಯಕರಾದ ಬಂಡಿ ಸಂಜಯ್ ಕುಮಾರ್ ಅವರು ಸಿಎಂ ರೇವಂತ್‌ ರೆಡ್ಡಿ ಅವರ ತೀರ್ಮಾನವನ್ನು ತೀವ್ರವಾಗಿ ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರವು ಹೆಸರುಗಳನ್ನು ಬದಲಾಯಿಸಲು ತುಂಬಾ ಉತ್ಸುಕರಾಗಿದ್ದರೆ, ಅವರು ನಿಜವಾಗಿಯೂ ಇತಿಹಾಸವನ್ನು ಸರಿಯಾಗಿ ಗ್ರಹಿಸಬೇಕು. ಹೈದರಾಬಾದ್‌ನ ಪುರಾತನ ಹೆಸರು ಭಾಗ್ಯನಗರ ಎಂದಾಗಿದೆ. ಸರ್ಕಾರ ರಸ್ತೆಯೊಂದಕ್ಕೆ ಡೊನಾಲ್ಡ್‌ ಟ್ರಂಪ್‌ ಹೆಸರಿಡುವುದಕ್ಕೂ ಮೊದಲು, ನಗರದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲಿ ಎಂದು ಬಂಡಿ ಸಂಜಯ್‌ ಕುಮಾರ್‌ ಅವರು ನೇರ ಸವಾಲು ಹಾಕಿದ್ದಾರೆ.

ಇದಲ್ಲದೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇಂತಹ ವಿಷಯಗಳನ್ನು ಬಿಟ್ಟು ಜನರ ನೈಜ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಗಮನ ಹರಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಒಟ್ಟಿನಲ್ಲಿ, ಹೈದರಾಬಾದ್‌ ರಸ್ತೆಗೆ ಡೊನಾಲ್ಡ್‌ ಟ್ರಂಪ್‌ ಹೆಸರಿಡುವ ತೆಲಂಗಾಣ ಸರ್ಕಾರದ ಪ್ರಸ್ತಾವನೆ ಒಂದು ಕಡೆ ಜಾಗತಿಕ ಆಕರ್ಷಣೆಗೆ ಯೋಜನೆಯಾಗಿದ್ದರೆ, ಇನ್ನೊಂದು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿದೆ.

Exit mobile version