ತಮಿಳುನಾಡಿನಲ್ಲಿ ಸಿಎಂ ಎಂ.ಕೆ ಸ್ಟಾಲಿನ್ ಸೇರಿದಂತೆ ಅನೇಕ ಗಣ್ಯರಿಗೆ ಬಾಂಬ್ ಬೆದರಿಕೆ

Untitled design 2025 11 17T121737.662

ಚೆನ್ನೈ: ತಮಿಳುನಾಡಿನಲ್ಲಿ ಸೆಲೆಬ್ರಿಟಿಗಳು ಮತ್ತು ರಾಜಕೀಯ ಗಣ್ಯರ ಮೇಲೆ ಬಾಂಬ್ ಬೆದರಿಕೆ ಕರೆಗಳು ಮುಂದುವರಿದಿದೆ. ಭಾನುವಾರ ರಾತ್ರಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ನಟ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಮತ್ತು ನಟಿ ಖುಷ್ಬು ಅವರ ನಿವಾಸಗಳನ್ನು ಗುರಿಯನ್ನಾಗಿಸಿಕೊಂಡು ಅಪರಿಚಿತ ಮೂಲಗಳಿಂದ ಬಾಂಬ್ ಬೆದರಿಕೆ ಪತ್ರಗಳು ಮತ್ತು ಇಮೇಲ್‌ಗಳು ಕಳುಹಿಸಲಾಗಿದೆ. ಈ ಸಂಬಂಧ ಡಿಜಿಪಿ ಕಚೇರಿಗೆ ಬಂದಿರುವ ಎಚ್ಚರಿಕೆ ಮೇಲ್ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಎಲ್ಲಾ ನಾಲ್ಕು ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

 ಪೊಲೀಸರ ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದಿದ್ದರೂ, ಬೆದರಿಕೆ ಸಂದೇಶಗಳ ಸರಣಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಕಾನೂನು ರಕ್ಷಕ ಪಡೆಗಳು ತೀವ್ರ ಎಚ್ಚರಿಕೆಯಿಂದಿವೆ. ಸಿಎಂ ನಿವಾಸ ಸೇರಿದಂತೆ ಎಲ್ಲ ಗಣ್ಯರ ಮನೆಗಳ ಸುತ್ತಮುತ್ತ ಕಾವಲು ಹೆಚ್ಚಿಸಿ, ಬಾಂಬ್ ನಿಷ್ಕ್ರೀಯ ದಳ (BDDS) ಹಾಗೂ ಶ್ವಾನ ದಳಗಳಿಂದ ಸಮಗ್ರ ತಪಾಸಣೆ ನಡೆಸಲಾಗಿದೆ.

ಅಜಿತ್ ಮನೆಗೆ ಮತ್ತೊಮ್ಮೆ ಬೆದರಿಕೆ – ಮತ್ತೆ ಹುಸಿ ಕರೆ

ಕಳೆದ ವಾರವೂ ಚೆನ್ನೈನಲ್ಲಿರುವ ನಟ ಅಜಿತ್ ಕುಮಾರ್ ಅವರ ನಿವಾಸಕ್ಕೆ ಇದೇ ರೀತಿಯ ಬಾಂಬ್ ಬೆದರಿಕೆ ಕರೆ ಬಂದಿತ್ತು. ಅಪರಿಚಿತ ವ್ಯಕ್ತಿ ನೀಡಿದ್ದ ಮಾಹಿತಿ ಆಧರಿಸಿ ಅಧಿಕಾರಿಗಳು ತಕ್ಷಣವೇ ಶೋಧ ಪ್ರಕ್ರಿಯೆ ಆರಂಭಿಸಿ, ಪೂರ್ವ ಕರಾವಳಿ ರಸ್ತೆಯಲ್ಲಿರುವ (ECR) ಅಜಿತ್ ಅವರ ಮನೆಗೆ ಬಾಂಬ್ ಸ್ಕ್ವಾಡ್ ಕಳುಹಿಸಿದ್ದರು. ಆದರೆ ಇದೊಂದು ಇನ್ನೊಂದು ಹುಸಿ ಬೆದರಿಕೆ ಎಂದು ದೃಢಪಟ್ಟಿತ್ತು.

ಪೊಲೀಸ್ ಮೂಲಗಳು ಈಗಾಗಲೇ ಈ ಕರೆಗಳನ್ನು ಮಾಡುತ್ತಿರುವ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಅಧಿಕಾರಿಗಳು ತನಿಖೆ ವಿಸ್ತರಿಸಿದ್ದಾರೆ ಎಂದು ತಿಳಿಸಿವೆ.

ನಟ ವಿಜಯ್‌ಗೂ ಪದೇಪದೇ ಬೆದರಿಕೆ 

ತಮಿಳ್ ಸಿನಿರಂಗದ ಸೂಪರ್‌ಸ್ಟಾರ್ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ನಟ ವಿಜಯ್ ಅವರಿಗೂ ಕಾಲಕಾಲಕ್ಕೆ ಬೆದರಿಕೆ ಸಂದೇಶಗಳು ಬರುತ್ತಲೇ ಇವೆ. ಇತ್ತೀಚೆಗಷ್ಟೇ ಬೆಳಗ್ಗೆ 5:20ರ ಸುಮಾರಿಗೆ “ವಿಜಯ್ ಅವರ ನಿವಾಸದಲ್ಲಿ ಬಾಂಬ್ ಇಡಲಾಗಿದೆ” ಎಂದು ಚೆನ್ನೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ತಕ್ಷಣವೇ ಮೂವರು ಬಾಂಬ್ ನಿಷ್ಕ್ರೀಯ ದಳದ ಸದಸ್ಯರು ಮತ್ತು ಸ್ನಿಫರ್ ನಾಯಿ ವಿಜಯ್ ಅವರ ಮನೆಗೆ ಧಾವಿಸಿತು. ಆದರೆ ಈ ಬಾರಿ ಕೂಡ ತೀವ್ರ ತಪಾಸಣೆ ನಂತರ ಇದೊಂದು ಹುಸಿ ಸಂದೇಶ ಎಂಬುದು ದೃಢಪಟ್ಟಿತು.

Exit mobile version