ಅಲಹಾಬಾದ್: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಕುರಿತು ಹಲವು ವರ್ಷಗಳಿಂದ ನಡೆಯುತ್ತಿರುವ ‘ತೇಜೋ ಮಹಾಲಯ’ ವಿವಾದಕ್ಕೆ ಮತ್ತೊಮ್ಮೆ ಹೊಸ ತಿರುವು ಸಿಕ್ಕಿದೆ. ತಾಜ್ ಮಹಲ್ ಮೂಲತಃ ಹಿಂದೂ ದೇವಾಲಯವಾಗಿದ್ದು, ಶಿವನಿಗೆ ಸಮರ್ಪಿತವಾದ ‘ತೇಜೋ ಮಹಾಲಯ’ ಎಂದು ಘೋಷಿಸಬೇಕು ಹಾಗೂ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಕೈಗೆತ್ತಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ)ಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿ, ಕೇಂದ್ರ ಸರ್ಕಾರ ಮತ್ತು ಎಎಸ್ಐ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಸೂಚಿಸಿದೆ. ಈ ಬೆಳವಣಿಗೆ ದೇಶದ ಗಮನ ಸೆಳೆದಿದ್ದು, ತಾಜ್ ಮಹಲ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಅರ್ಜಿ, ತಾಜ್ ಮಹಲ್ನಲ್ಲಿ ಸಮೀಕ್ಷೆ ನಡೆಸಲು ಅಡ್ವೊಕೇಟ್ ಕಮಿಷನರ್ ನೇಮಿಸುವಂತೆ ಸಲ್ಲಿಸಿದ್ದ ಮನವಿಯನ್ನು ಆಗ್ರಾ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಲ್ಲಿಸಲಾಗಿದೆ. ಅರ್ಜಿದಾರರ ಪರ ಹಿರಿಯ ವಕೀಲ ಹರಿ ಶಂಕರ್ ಜೈನ್ ವಾದ ಮಂಡಿಸಿದ್ದಾರೆ. ಅವರ ಪ್ರಕಾರ, ಈ ಅರ್ಜಿಯನ್ನು ‘ಲಾರ್ಡ್ ಶ್ರೀ ಅಗ್ರೇಶ್ವರ ಮಹಾದೇವ ನಾಗ್ನಾಥೇಶ್ವರ ವಿರಾಜಮಾನ್’ ಎಂಬ ದೇವತೆಯ ಪರವಾಗಿ ಸಲ್ಲಿಸಲಾಗಿದ್ದು, ತಾವು ದೇವರ ‘ನೆಕ್ಸ್ಟ್ ಫ್ರೆಂಡ್’ ಆಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ಅರ್ಜಿಯಲ್ಲಿ ತಾಜ್ ಮಹಲ್ ಮೂಲತಃ ಶಿವನಿಗೆ ಸಮರ್ಪಿತವಾದ ಪ್ರಾಚೀನ ದೇವಾಲಯವಾಗಿದ್ದು, ಬಳಿಕ ಮೊಘಲ್ ಚಕ್ರವರ್ತಿ ಶಾಹಜಹಾನ್ ಅದನ್ನು ತನ್ನ ಪತ್ನಿ ಮುಮ್ತಾಜ್ ಸ್ಮಾರಕವಾಗಿ ಪರಿವರ್ತಿಸಿದರು ಎಂದು ವಾದಿಸಲಾಗಿದೆ. ಆದ್ದರಿಂದ, ಈ ಕಟ್ಟಡವನ್ನು ಹಿಂದೂ ದೇವಾಲಯವೆಂದು ಘೋಷಿಸಿ, ಸಂವಿಧಾನದ ಅನುಚ್ಛೇದ 25ರಡಿ ಹಿಂದೂ ಭಕ್ತರಿಗೆ ದರ್ಶನ ಮತ್ತು ಪೂಜೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಅರ್ಜಿದಾರರು ತಮ್ಮ ವಾದಕ್ಕೆ ಹಲವು ಐತಿಹಾಸಿಕ ಮತ್ತು ಪುರಾತತ್ವ ಆಧಾರಗಳಿವೆ ಎಂದು ಹೇಳಿಕೊಂಡಿದ್ದಾರೆ. ದೇವಾಲಯದ ಶೈಲಿಯಲ್ಲಿರುವ ಕಲಶ, ಕಮಲದ ಅಲಂಕಾರ, ಎಎಸ್ಐ ದಾಖಲೆಗಳಲ್ಲಿ ಉಲ್ಲೇಖವಾಗಿರುವ ಗೋಶಾಲೆ ಸೇರಿದಂತೆ ಒಟ್ಟು 109 ಪುರಾವೆಗಳು ತಮ್ಮ ವಾದವನ್ನು ಬಲಪಡಿಸುತ್ತವೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ತಾಜ್ ಮಹಲ್ನ ಕೆಲವು ಕೊಠಡಿಗಳನ್ನು ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಮುಚ್ಚಿಡಲಾಗಿದೆ. ಅವುಗಳನ್ನು ತೆರೆಯಿಸಿ ವೈಜ್ಞಾನಿಕ ಸಮೀಕ್ಷೆ ನಡೆಸಿದರೆ ನಿಜಾಂಶ ಹೊರಬರಬಹುದು ಎಂಬ ವಾದವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನೊಂದೆಡೆ, ಎಎಸ್ಐ ಹಾಗೂ ಇತಿಹಾಸ ತಜ್ಞರ ಅಧಿಕೃತ ನಿಲುವಿನ ಪ್ರಕಾರ ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಶಾಹಜಹಾನ್ ಅವರು ತಮ್ಮ ಪತ್ನಿ ಮುಮ್ತಾಜ್ ಮಹಲ್ ಸ್ಮರಣಾರ್ಥ ನಿರ್ಮಿಸಿದ್ದು, ಇದು ವಿಶ್ವ ಪರಂಪರೆಯ ಸ್ಮಾರಕವಾಗಿದೆ. ಈ ನಿಲುವು ಹಲವು ವರ್ಷಗಳಿಂದ ಅಧಿಕೃತ ದಾಖಲೆಗಳಲ್ಲಿ ಮುಂದುವರಿದಿದೆ.
2019ರಲ್ಲಿ ಆಗ್ರಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಸಮೀಕ್ಷೆ ಅರ್ಜಿಯನ್ನು ಅಗತ್ಯ ದಾಖಲೆಗಳ ಕೊರತೆ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ತಿರಸ್ಕರಿಸಲಾಗಿತ್ತು. ಬಳಿಕ ಆ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನೂ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿತ್ತು. ಇದೀಗ ಆ ಎರಡೂ ಆದೇಶಗಳನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿದೆ.
ಹೈಕೋರ್ಟ್ ಯಾವುದೇ ಅಂತಿಮ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಕೇವಲ ಅರ್ಜಿಯನ್ನು ಪರಿಗಣಿಸಿ, ಕೇಂದ್ರ ಸರ್ಕಾರ ಮತ್ತು ಎಎಸ್ಐಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್ ನೀಡಿದೆ.
