ಮೋಸ್ಟ್ ವಾಂಟೆಡ್ ಉಗ್ರ ತಹವೂರ್ ರಾಣಾ ಯಾರು.? ಹಿನ್ನೆಲೆ ಏನು?

Untitled design 2025 04 10t170835.783

ನವದೆಹಲಿ: 2008ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಉಗ್ರ ತಹಾವುರ್ ಹುಸೇನ್ ರಾಣಾ (Tahawwur Hussain Rana) ಇದೀಗ ಭಾರತಕ್ಕೆ ಹಸ್ತಾಂತರವಾಗಿದ್ದಾನೆ. 17 ವರ್ಷಗಳ ಪ್ರಯತ್ನದ ಬಳಿಕ ಕೊನೆಗೂ ಅಮೆರಿಕ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಡೆಸಿದ ಕ್ರಮದಿಂದ ಇಂದು ಮಧ್ಯಾಹ್ನದ ಹೊತ್ತಿಗೆ ರಾಣಾ ದೆಹಲಿಗೆ ಆಗಮಿಸಿದ್ದಾನೆ. ಈತನನ್ನು ಎನ್‌ಐಎ ಅಧಿಕಾರಿಗಳು ದೆಹಲಿ ಕೋರ್ಟ್‌ ಮುಂದೆ ಹಾಜರುಪಡಿಸಲಿದ್ದಾರೆ.

ರಾಣಾ ಯಾರು?

ತಹಾವುರ್ ರಾಣಾ ಜನವರಿ 12, 1961 ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಿಚಾವತ್ನಿಯಲ್ಲಿ ಜನಿಸಿದನು. ಆತನು ಚಿಕ್ಕವಯಸ್ಸಿನಲ್ಲಿ ಪಾಕಿಸ್ತಾನದ ಕ್ಯಾಡೆಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಅಲ್ಲಿಯೇ 26/11 ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಹೆಡ್ಲಿಯೊಂದಿಗೆ ಆತ ಸಂಬಂಧ ಹೊಂದಿದ್ದನು. ನಂತರ ರಾಣಾ ಪಾಕಿಸ್ತಾನದ ಸೇನಾ ವೈದ್ಯಕೀಯ ದಳದಲ್ಲಿ ಕ್ಯಾಪ್ಟನ್-ಜನರಲ್ ಡ್ಯೂಟಿ ಪ್ರಾಕ್ಟಿಷನರ್ ಆಗಿ ಸೇವೆ ಸಲ್ಲಿಸಿದ್ದನು.

1997 ರಲ್ಲಿ ರಾಣಾ ಮಿಲಿಟರಿ ತೊರೆದ ಬಳಿಕ ತನ್ನ ಪತ್ನಿಯೊಂದಿಗೆ ಕೆನಡಾಗೆ ವಲಸೆ ಹೋದನು. 2001 ರಲ್ಲಿ ಇಬ್ಬರೂ ಕೆನಡಾ ಪೌರತ್ವ ಪಡೆದರು. ಬಳಿಕ ಅಮೆರಿಕದ ಚಿಕಾಗೋ, ನ್ಯೂಯಾರ್ಕ್ ಹಾಗೂ ಕೆನಡಾದ ಟೊರೊಂಟೊದಲ್ಲಿ ಇಮಿಗ್ರೇಷನ್ ವ್ಯವಹಾರಗಳನ್ನೂ, ‘ಹಲಾಲ್ ಕಸಾಯಿಖಾನೆ’ ಸ್ಥಾಪನೆಯನ್ನೂ ಮಾಡಿದರು. ಕೆನಡಾದ ಒಟ್ಟಾವಾದಲ್ಲಿ ಆತನಿಗೆ ಮನೆ ಹೊಂದಿದ್ದು, ಅಲ್ಲಿ ಆತನ ತಂದೆ ಮತ್ತು ಸಹೋದರ ವಾಸಿಸುತ್ತಿದ್ದಾರೆ. ರಾಣಾದ ಸಹೋದರರಲ್ಲಿ ಒಬ್ಬ ಪಾಕಿಸ್ತಾನ ಸೇನೆಗೆ ಸೇರಿದ ಮನೋವೈದ್ಯ, ಮತ್ತೊಬ್ಬ ಪತ್ರಕರ್ತನಾಗಿದ್ದಾನೆ.

ಭಯೋತ್ಪಾದಕ ಲಿಂಕ್

2005 ರಲ್ಲಿ, ಡ್ಯಾನಿಷ್ ಪತ್ರಿಕೆ ಜಿಲ್ಯಾಂಡ್ಸ್-ಪೋಸ್ಟನ್ ಪ್ರವಾದಿ ಮುಹಮ್ಮದ್ ವಿರುದ್ಧ ವ್ಯಂಗ್ಯಚಿತ್ರ ಪ್ರಕಟಿಸಿದ್ದನ್ನು ವಿರೋಧಿಸಿ ನಡೆದ ಭಯೋತ್ಪಾದಕ ಸಂಚು ರೂಪಿಸಿಲಾಗಿತ್ತು. ಈ ಸಂಚಿನಲ್ಲಿ ಡೇವಿಡ್ ಹೆಡ್ಲಿಯ ಜೊತೆಗೆ ತಹಾವುರ್ ರಾಣಾ ಸಹ ಭಾಗಿಯಾಗಿದ್ದ. ಈ ತಂಡವು ಕೋಪನ್‌ಹ್ಯಾಗನ್‌ನ ಪತ್ರಿಕೆಯ ಕಚೇರಿಯಲ್ಲಿ ಸಿಬ್ಬಂದಿಗಳನ್ನು ಕೊಂದು ತಲೆ ಬೀದಿಗೆ ಎಸೆಯಬೇಕೆಂಬ ಘೋರ ಗುರಿ ಹೊಂದಿತ್ತು. ಆದರೆ ಹೆಡ್ಲಿ ಬಂಧಿತನಾದ ಹಿನ್ನೆಲೆಯಲ್ಲಿ ದಾಳಿ ನಡೆಯಲಿಲ್ಲ.

2008 ರಲ್ಲಿ ಮುಂಬೈನಲ್ಲಿ ನಡೆದ 26/11 ಉಗ್ರದಾಳಿಗೆ ರಾಣಾ ಲಾಜಿಸ್ಟಿಕಲ್ ಹಾಗೂ ಆರ್ಥಿಕ ಬೆಂಬಲ ಒದಗಿಸಿದ್ದನು ಎಂದು ಎನ್‌ಐಎ ಚಾರ್ಜ್ ಶೀಟ್ ಹೇಳುತ್ತದೆ. ಮುಂಬೈನಲ್ಲಿ ಕಚೇರಿ ಸ್ಥಾಪನೆಗೆ ಹೆಡ್ಲಿಗೆ ಸಹಾಯ ಮಾಡಿದ ಆರೋಪಿ ಈತ. ಈ ದಾಳಿಯಲ್ಲಿ 166 ಮಂದಿ ಬಲಿಯಾಗಿದ್ದರು.

2009 ರಲ್ಲಿ ರಾಣಾ ಅಮೆರಿಕದಲ್ಲಿ ಬಂಧಿತನಾದನು. ತನಿಖೆ ನಡೆಸಿದ ಎನ್‌ಐಎ, ತಹಾವುರ್ ರಾಣಾ ಸೇರಿದಂತೆ ಒಟ್ಟು 10 ಮಂದಿಯ ವಿರುದ್ಧ ದಾಳಿ ಸಂಚು ಆರೋಪ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಅಮೆರಿಕ ಕೋರ್ಟ್‌ನಲ್ಲಿಯೂ ಸಾಕ್ಷ್ಯಗಳು ಸಾಬೀತಾದವು. ಭಾರತ ತಕ್ಷಣವೇ ಅಂತಾರಾಷ್ಟ್ರೀಯ ಬಂಧನ ವಾರೆಂಟ್ ಹೊರಡಿಸಿತ್ತು.

2011ರಿಂದ ಹಸ್ತಾಂತರ ಪ್ರಕ್ರಿಯೆ ಪ್ರಾರಂಭವಾದರೂ, ಅಮೆರಿಕ ಸುಪ್ರೀಂ ಕೋರ್ಟ್ ಅಡೆತಡೆ ನೀಡಿತ್ತು. ಸೆಪ್ಟೆಂಬರ್ 2024 ರಲ್ಲಿ, ತನ್ನನ್ನು ಭಾರತಕ್ಕೆ ಗಡಿಪಾರು ಮಾಡಬೇಡಿ ಎಂಬ ರಾಣಾದ ಮನವಿಯನ್ನು ಕೋರ್ಟ್ ತಿರಸ್ಕರಿಸಿತು. ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಕರೆತರಲು ಅಮೆರಿಕ ಅಂತಿಮವಾಗಿ ಒಪ್ಪಿಗೆ ನೀಡಿತ್ತು.

ರಾಣಾ ಈಗ ದೆಹಲಿಯಲ್ಲಿ ಎನ್‌ಐಎ ತನಿಖೆಗೆ ಒಳಗಾಗಲಿದ್ದಾನೆ. ಮುಂದಿನ ಹಂತಗಳಲ್ಲಿ ನ್ಯಾಯಾಲಯದ ವಿಚಾರಣೆ ಪ್ರಾರಂಭವಾಗಲಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version