ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಸುನೇತ್ರಾ ಪವಾರ್ ಪ್ರಮಾಣ ವಚನ

Untitled design 2026 01 31T181921.463

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಶನಿವಾರ ಹೊಸ ಇತಿಹಾಸ ಸೃಷ್ಟಿಯಾಗಿದೆ. ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ದುರದೃಷ್ಟಕರ ವಿಮಾನ ಅಪಘಾತದಲ್ಲಿ ನಿಧನರಾದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸ್ಥಾನಕ್ಕೆ, ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಕ ಮಾಡಲಾಗಿದೆ. ಮುಂಬೈನ ಲೋಕ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇತಿಹಾಸ ನಿರ್ಮಿಸಿದ ಸುನೇತ್ರಾ

62 ವರ್ಷದ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಇತಿಹಾಸದಲ್ಲಿ ಮೊದಲ ಉಪಮುಖ್ಯಮಂತ್ರಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಅವರು ದಿವಂಗತ ಪತಿ ಅಜಿತ್ ಪವಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು. ರಾಜ್ಯಪಾಲ ಆಚಾರ್ಯ ದೇವ್ರತ್ ಅವರು ಸುನೇತ್ರಾ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಮತ್ತೊಬ್ಬ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಉಪಸ್ಥಿತರಿದ್ದು ಶುಭ ಕೋರಿದರು.

ಮುಂದಿನ ರಾಜಕೀಯ ಹಾದಿ

ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಸುನೇತ್ರಾ ಪವಾರ್ ಅವರು ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ 6 ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಬೇಕಿದೆ. ಅಜಿತ್ ಪವಾರ್ ಅವರ ನಿಧನದಿಂದ ತೆರವಾಗಿರುವ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದಲೇ ಸುನೇತ್ರಾ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾರಾಮತಿಯಿಂದ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿ ಸೋತಿದ್ದರೂ, ಈಗ ಅದೇ ಕ್ಷೇತ್ರದ ಮೇಲೆ ಸುನೇತ್ರಾ ಹಿಡಿತ ಸಾಧಿಸಲು ಸಜ್ಜಾಗಿದ್ದಾರೆ.

ಸುನೇತ್ರಾ ಕೇವಲ ಅಜಿತ್ ಪವಾರ್ ಅವರ ಪತ್ನಿಯಾಗಿ ಮಾತ್ರವಲ್ಲದೆ, ಸಮಾಜ ಸೇವಕಿ ಮತ್ತು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮರಾಠವಾಡದ ಧರಾಶಿವ್ ಮೂಲದ ರಾಜಕೀಯ ಕುಟುಂಬದಿಂದ ಬಂದ ಇವರು, ಬಾರಾಮತಿ ಹೈಟೆಕ್ ಜವಳಿ ಉದ್ಯಾನವನದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಥೇವಾಡಿ ಗ್ರಾಮವನ್ನು ಮಾದರಿ ಪರಿಸರ-ಗ್ರಾಮವನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಇವರಿಗಿದೆ. ಸೌರ ಬೀದಿ ದೀಪ, ಜೈವಿಕ ಅನಿಲ ಮತ್ತು ಸಾವಯವ ಕೃಷಿ ಕ್ಷೇತ್ರದಲ್ಲಿ ಇವರು ಮಾಡಿದ ಕೆಲಸಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ, ಈಗ ವಿಭಜನೆಗೊಂಡಿರುವ ಎನ್‌ಸಿಪಿ (NCP) ಎರಡು ಬಣಗಳು ಮತ್ತೆ ಒಂದಾಗುತ್ತವೆಯೇ ಎಂಬ ಚರ್ಚೆ ಶುರುವಾಗಿದೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಬಣಗಳ ನಡುವಿನ ರಾಜಕೀಯ ಸಂಘರ್ಷಕ್ಕೆ ಸುನೇತ್ರಾ ಅವರ ನೇಮಕವು ತೆರೆ ಎಳೆಯುತ್ತದೆಯೇ ಅಥವಾ ಹೊಸ ರಾಜಕೀಯ ಸಮೀಕರಣಕ್ಕೆ ನಾಂದಿ ಹಾಡುತ್ತದೆಯೇ ಎಂಬುದು ಕುತೂಹಲ ಕಾರಣವಾಗಿದೆ.

Exit mobile version