ಇಂದಿರಾ-ನೆಹರೂ ಆಡಳಿತದಲ್ಲಿ ವಿದೇಶೀ ಗುಪ್ತಚರರ ಹಿಡಿತದಲ್ಲಿತ್ತು ಭಾರತ: ಸುಧಾಂಶು ತ್ರಿವೇದಿ

Untitled design 2026 02 25T165228.164

ನವದೆಹಲಿ, ಫೆಬ್ರವರಿ 25: ಅಮೆರಿಕದೊಂದಿಗೆ ಟ್ರೇಡ್ ಡೀಲ್ ಮಾಡಿಕೊಂಡು ರೈತರ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮಾಡಿರುವ ಆರೋಪಕ್ಕೆ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡಿದೆ. ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್ ಆಡಳಿತದ ಇತಿಹಾಸದ ಕುರಿತು ಗಂಭೀರ ಆರೋಪಗಳನ್ನು ಹೊರಹಾಕಿದ್ದಾರೆ.

ಡಾ. ಸುಧಾಂಶು ತ್ರಿವೇದಿ ತಮ್ಮ ಟ್ವೀಟ್‌ಗಳಲ್ಲಿ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತ ಅವಧಿಯಲ್ಲಿ ದೇಶದ ರಾಜಕೀಯ, ಆರ್ಥಿಕತೆ ಹಾಗೂ ಭದ್ರತಾ ವ್ಯವಸ್ಥೆಗಳು ವಿದೇಶಿ ಗುಪ್ತಚರ ಸಂಸ್ಥೆಗಳ ಪ್ರಭಾವಕ್ಕೆ ಒಳಗಾಗಿದ್ದವು ಎಂದು ಹೇಳಿದ್ದಾರೆ. ಭಾರತ ಆಲಿಪ್ತ ನೀತಿಯನ್ನು ಅನುಸರಿಸುತ್ತಿದ್ದರೂ, ವಾಸ್ತವದಲ್ಲಿ ಅಮೆರಿಕದ ಸಿಐಎ ಹಾಗೂ ಸೋವಿಯತ್ ಒಕ್ಕೂಟದ ಕೆಜಿಬಿ ಸಂಸ್ಥೆಗಳು ದೇಶದ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರಿದ್ದವು ಎಂದು ಅವರು ಆರೋಪಿಸಿದ್ದಾರೆ.

ನೆಹರೂ ಅವಧಿಯಲ್ಲಿ ಪ್ರಧಾನಿಯವರ ಕಾರ್ಯಾಲಯದ ಮಾಹಿತಿಗಳು ಸಿಐಎಗೆ ಲಭ್ಯವಾಗುತ್ತಿದ್ದವು ಎಂಬುದಾಗಿ ತ್ರಿವೇದಿ ಹೇಳಿದ್ದಾರೆ. ನೆಹರೂ ಅವರ ವಿಶೇಷ ಸಹಾಯಕ ಎಂ.ಒ. ಮಥಾಯ್ ಅಮೆರಿಕದ ಪ್ರಭಾವಕ್ಕೆ ಒಳಪಟ್ಟಿದ್ದರು ಎಂದು ಉಲ್ಲೇಖಿಸಿರುವ ಅವರು, “ಪ್ರಧಾನಿ ಕಾರ್ಯಾಲಯವು ಸಿಐಎ ಪಾಲಿಗೆ ಓಪನ್ ಬುಕ್ ಆಗಿತ್ತು” ಎಂದು ಟ್ವೀಟ್ ಮಾಡಿದ್ದಾರೆ. ಲ್ಯಾಂಗ್ಲೇಯಲ್ಲಿರುವ ಸಿಐಎ ಮುಖ್ಯ ಕಚೇರಿಗೆ ಮಹತ್ವದ ದಾಖಲೆಗಳ ನಕಲು ಕಳುಹಿಸಲಾಗುತ್ತಿತ್ತೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

ಇದೇ ವೇಳೆ, ಸೋವಿಯತ್ ಒಕ್ಕೂಟದ ಕೆಜಿಬಿ ಸಂಸ್ಥೆಯೂ ಭಾರತ ಸರ್ಕಾರದ ವಿವಿಧ ಇಲಾಖೆಗಳ ಮೇಲೆ ಪ್ರಭಾವ ಬೀರಿತ್ತು ಎಂದು ತ್ರಿವೇದಿ ಆರೋಪಿಸಿದ್ದಾರೆ. ಟ್ರೇಡ್ ಮಿಷನ್ ಹಾಗೂ ಸಾಂಸ್ಕೃತಿಕ ವಿನಿಮಯಗಳ ಹೆಸರಿನಲ್ಲಿ ಕೆಜಿಬಿ ಕಾರ್ಯಕರ್ತರು ಭಾರತದಲ್ಲಿ ಸಕ್ರಿಯರಾಗಿದ್ದರು ಎಂದು ಅವರು ಹೇಳಿದ್ದಾರೆ. “ರಷ್ಯಾಗೆ ಬೇಹುಗಾರರು ಬೇಕಿರಲಿಲ್ಲ, ಇಡೀ ವ್ಯವಸ್ಥೆಯೇ ಅವರ ಪ್ರಭಾವದಲ್ಲಿತ್ತು” ಎಂಬ ಮಾತುಗಳನ್ನು ಅವರು ತಮ್ಮ ಟ್ವೀಟ್‌ಗಳಲ್ಲಿ ಉಲ್ಲೇಖಿಸಿದ್ದಾರೆ.

ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿಯೂ ಸಿಐಎ ಪ್ರಭಾವ ಮುಂದುವರಿದಿತ್ತು ಎಂದು ತ್ರಿವೇದಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ವಿದೇಶೀ ಮೂಲಗಳಿಂದ ಹಣ ಹರಿದು ಬಂದಿತ್ತು ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. 1976ರಲ್ಲಿ ಸೋವಿಯತ್ ಒಕ್ಕೂಟಕ್ಕೆ ಅನುಕೂಲವಾಗುವಂತೆ ರೂಪಾಯಿ ಮೌಲ್ಯದಲ್ಲಿ ಬದಲಾವಣೆ ಮಾಡಲಾಗಿದೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ. ಈ ಕ್ರಮಗಳು ದೇಶದ ಹಿತಾಸಕ್ತಿಗೆ ಧಕ್ಕೆಯಾಯಿತು ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ.

ಇತ್ತ, ಕಾಂಗ್ರೆಸ್ ಪಕ್ಷವು ಈ ಆರೋಪಗಳನ್ನು ತಳ್ಳಿಹಾಕುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಅಮೆರಿಕದೊಂದಿಗೆ ನಡೆದ ಟ್ರೇಡ್ ಒಪ್ಪಂದಗಳು ರೈತರ ಹಿತಾಸಕ್ತಿಗೆ ಹಾನಿಕಾರಕವಾಗಿವೆ ಎಂದು ಆರೋಪಿಸುತ್ತಿದ್ದರೆ, ಬಿಜೆಪಿ ಇತಿಹಾಸದ ಘಟನೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಆಡಳಿತದ ನೈತಿಕತೆಯನ್ನೇ ಪ್ರಶ್ನಿಸಿದೆ.

Exit mobile version