ಉತ್ತರ ಪ್ರದೇಶದಲ್ಲಿ ಗಣಿ ಕುಸಿತ: ಮೂವರು ಸಾವು, ಅವಶೇಷಗಳಡಿ 9 ಕಾರ್ಮಿಕರು

Untitled design 2025 11 16T205650.902

ಸೋನಭದ್ರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಬಿಲ್ಲಿ ಮಾರ್ಕುಂಡಿಯಲ್ಲಿ ಶನಿವಾರ ಸಂಭವಿಸಿದ ಭೀಕರ ಗಣಿ ಕುಸಿತದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನೂ ಕಾರ್ಮಿಕರು ಗಣಿಯ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. 

ಮೃತರಲ್ಲಿ ಒಬ್ಬರನ್ನು ಸೋನಭದ್ರ ಜಿಲ್ಲೆಯ ಪನಾರಿ ಗ್ರಾಮದ ನಿವಾಸಿ 30 ವರ್ಷದ ರಾಜು ಸಿಂಗ್ ಎಂದು ಗುರುತಿಸಲಾಗಿದೆ. ಕುಸಿದ ಕಲ್ಲಿನ ಅವಶೇಷಗಳಲ್ಲಿ ಇನ್ನೂ ಒಂಬತ್ತು ಕಾರ್ಮಿಕರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದರೂ ಅವರ ನಿಖರ ಸಂಖ್ಯೆ ಬಗ್ಗೆ ಆಡಳಿತಕ್ಕೆ ಸ್ಪಷ್ಟತೆ ಲಭ್ಯವಾಗಿಲ್ಲ. ಘಟನೆಯ ನಂತರದಿಂದಲೇ ಶೋಧ–ರಕ್ಷಣಾ ಕಾರ್ಯಾಚರಣೆಗಳು ತೀವ್ರವಾಗಿ ಮುಂದುವರಿಯುತ್ತಿವೆ. 

ಶನಿವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ಪ್ರದೇಶದ ಸಚಿವ ಸಂಜೀವ್ ಗೊಂಡ್, “ಗಣಿಗಾರಿಕಾ ಪ್ರದೇಶದಲ್ಲಿ ಆ ಸಮಯದಲ್ಲಿ ಸುಮಾರು 12 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆಗಳಿಗೆ ಬೇಕಾದ ಎಲ್ಲಾ ನೆರವು ನೀಡಲಾಗುತ್ತಿದೆ,” ಎಂದು ಹೇಳಿದರು.

ವಿಭಾಗೀಯ ಆಯುಕ್ತ ರಾಜೇಶ್ ಪ್ರಕಾಶ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅವರು ಮಾತನಾಡಿ, “ಈ ಘಳಿಗೆಯಲ್ಲಿ ನಾವು ಯಾವುದೇ ಅಂಕಿಅಂಶಗಳನ್ನು ಅಂತಿಮವಾಗಿ ಹೇಳಲು ಸಾಧ್ಯವಿಲ್ಲ. ರಕ್ಷಣಾಕಾರ್ಯಕ್ಕಾಗಿ ಎನ್‌ಡಿಆರ್‌ಎಫ್ (NDRF), ಎಸ್‌ಡಿಆರ್‌ಎಫ್ (SDRF) ತಂಡಗಳನ್ನು ನಿಯೋಜಿಸಲಾಗಿದೆ. ಅವರು ಅತ್ಯಾಧುನಿಕ ಉಪಕರಣಗಳ ನೆರವಿನಿಂದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ,” ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಪಿಯೂಷ್ ಮೊರ್ಡಿಯಾ ಅವರು ಮಾತನಾಡಿ, “ಬೆಟ್ಟದಿಂದ ಬಿದ್ದ ಕಲ್ಲುಗಳು ಅಪಾರ ಗಾತ್ರದಲ್ಲಿವೆ. ಅವುಗಳನ್ನು ತೆರವುಗೊಳಿಸಲು ಭಾರೀ ಯಂತ್ರೋಪಕರಣಗಳು ಬೇಕಾಗಿವೆ. ಕಳೆದ ರಾತ್ರಿನಿಂದಲೇ ತಂಡಗಳು ಶ್ರಮದಿಂದ ಕೆಲಸ ನಡೆಸುತ್ತಿದ್ದು, ಯಾವುದೇ ಅಪಾಯಗಳನ್ನೂ ಲೆಕ್ಕಿಸದೆ ಸಿಬ್ಬಂದಿ ರಕ್ಷಣೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ,” ಎಂದು ಹೇಳಿದರು.

Exit mobile version